ಸವಣೂರು : ವಿದ್ಯಾರಶ್ಮಿಯಲ್ಲಿ ಅಧ್ಯಕ್ಷರ ದಿನಾಚರಣೆ ಮತ್ತು ಪ್ರಾರಂಭೋತ್ಸವ

0

ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಶಾಲಾ ಅಧ್ಯಕ್ಷರಾರದ ಸಹಕಾರ ರತ್ನ ಸವಣೂರು ಸೀತಾರಾಮ ರೈ ಅವರ ೭೭ನೇ ಹುಟ್ಟುಹಬ್ಬವನ್ನು ‘ಅಧ್ಯಕ್ಷರ ದಿನ’ವನ್ನಾಗಿ ಆಚರಿಸುವುದರ ಜೊತೆಗೆ ಶಾಲಾ ಪ್ರಾರಂಭೋತ್ಸವವನ್ನು ಆಚರಿಸಲಾಯಿತು.


ಕಾರ್ಯಕ್ರಮ ಉದ್ಘಾಟಿಸಿದ ರೈಯವರು ಮಾತನಾಡುತ್ತಾ ಅವರು ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದು ಲಾಭದ ಉದ್ದೇಶಕ್ಕಾಗಿ ಅಲ್ಲ, ಬದಲಾಗಿ ಇಲ್ಲಿ ಕಲಿತ ಮಕ್ಕಳು ದೇಶಕ್ಕೊಂದು ಆಸ್ತಿ ಆಗಬೇಕು ಎಂಬ ಉದ್ದೇಶದಿಂದ ಎಂದರು. ಅವರ ತಂದೆಯವರ ಆದರ್ಶಗಳನ್ನು ಸಾಕ್ಷಾತ್ಕರಿಸುವುದಕ್ಕಾಗಿ ಶಾಲೆಯನ್ನು ಕಟ್ಟಿದ್ದೇನೆ ಎಂದರು.


ಮುಖ್ಯ ಅತಿಥಿಯಾಗಿದ್ದ ಕೈಯ್ಯೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಉಪ ಪ್ರಾಂಶುಪಾಲರಾದ ಕೆ.ಎಸ್. ವಿನೋದ್ ಕುಮಾರ್ ಅವರು ಮಾತನಾಡುತ್ತಾ ಸವಣೂರಿನ ಜನರ ಪುಣ್ಯವೆಂಬಂತೆ ಮಾನ್ಯ ರೈಯವರು ಈ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದಾರೆ. ಅವರಿಗೆ ಈ ಊರು ಯಾವಾಗಲೂ ಕೃತಜ್ಞರಾಗಿರಬೇಕು ಎಂದು ಹೇಳಿ ಹೊಸ ಶೈಕ್ಷಣಿಕ ವರ್ಷಕ್ಕೆ ಶುಭ ಹಾರೈಸಿದರು.


ಸಭಾಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿಯವರು ಮಾತನಾಡಿ ಶೈಕ್ಷಣಿಕವಾಗಿ ಯಾವುದೇ ಸೌಕರ್ಯಗಳನ್ನು ನೀಡಲು ನಾನು ಬದ್ಧ ಎಂದರು.


ಸಂದೇಶ ಸಾರುವ ಫಲಕಗಳು, ಬ್ಯಾಂಡ್ ವಾದ್ಯ ಮತ್ತು ಬ್ಯಾನರ್‌ಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾ ಚೇತನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.


ಸೀತಾರಾಮ ರೈಯವರ ಹುಟ್ಟುಹಬ್ಬದ ಶುಭಾಶಯ ಕೋರಿ ಎಲ್ಲಾ ಪ್ರಾಂಶುಪಾಲರು ಮತ್ತು ಉಪಪ್ರಾಂಶುಪಾಲರುಗಳು ಹಾಗೂ ಗಣ್ಯರು ಅವರಿಗೆ ಹಾರ, ಹೂಗುಚ್ಛಗಳನ್ನು ನೀಡಿದರು.


ಪುಟಾಣಿಗಳು ಗುಲಾಬಿ ನೀಡಿ ಶುಭ ಹಾರೈಸಿದ್ದು ವಿಶೇಷವಾಗಿತ್ತು. ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ, ಪ್ರಾಂಶುಪಾಲ ಸೀತಾರಾಮ ಕೇವಳ, ಉಪ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಹತ್ತನೆ ತರಗತಿಯ ವೈಷ್ಣವಿ ಎಂ. ಕಾರ್ಯಕ್ರಮ ನಿರೂಪಿಸಿ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಖದೀಜತುಲ್ ಅಝೀಲಾ ಸ್ವಾಗತಿಸಿದರು. ಎಂಟನೆ ತರಗತಿಯ ಶಂತನುಕೃಷ್ಣ ಅತಿಥಿ ಪರಿಚಯ ಮಾಡಿದರು. ಏಳನೆ ತರಗತಿಯ ಎನ್. ಆರ್. ಇಫಾ ವಂದಿಸಿ, ಹತ್ತನೆ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.