ತೊಡಿಕಾನ ಬಿ.ಎಸ್.ಎನ್.ಎಲ್. ಟವರ್ ಗೆ ಹೊಸ ಬ್ಯಾಟರಿ ಅಳವಡಿಕೆ

0

ನೀಡಿದ ಭರವಸೆಯಂತೆ ಹೊಸ ಬ್ಯಾಟರಿ ಒದಗಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ

ಸುಳ್ಯಸೀಮೆ ದೇವಸ್ಥಾನದ ತಾಣವಾದ ತೊಡಿಕಾನದ ಬಿ.ಎಸ್.ಎನ್.ಎಲ್. ಮೊಬೈಲ್ ಟವರಿಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರು ನೀಡಿದ ಭರವಸೆಯಂತೆ ಹೊಸ ಬ್ಯಾಟರಿಯನ್ನು ಒದಗಿಸಿದ್ದು, ಬ್ಯಾಟರಿ ಅಳವಡಿಸಲಾಗಿದೆ.

ತೊಡಿಕಾನ ಗ್ರಾಮದಲ್ಲಿ ಬಿ.ಎಸ್.ಎನ್.ಎಲ್. ಮೊಬೈಲ್ ಟವರ್ ಮಾತ್ರವಿದ್ದು, ಇತ್ತೀಚಿನ ದಿನಗಳಲ್ಲಿ ನೆಟ್ವರ್ಕ್ ಸಮಸ್ಯೆ ತೀವ್ರವಾಗಿದ್ದು, ಈ ಕುರಿತಂತೆ ಸ್ಥಳೀಯ ಗ್ರಾಮಸ್ಥರು ಸೇರಿ ಅರಂತೋಡು – ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಜನಪ್ರತಿನಿಧಿಗಳ ಗಮನ ಸೆಳೆಯುವ ಕೆಲಸ ಮಾಡಿದ್ದರು.


ಅಲ್ಲದೇ ನೂತನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಶಾಸಕಿ ಭಾಗೀರಥಿ ಮುರಳ್ಯರವರ ನೇತೃತ್ವದಲ್ಲಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ರವರ ಉಪಸ್ಥಿತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ನಿಯೋಗವು ಭೇಟಿ ಮಾಡಿ ನೆಟ್ವರ್ಕ್ ಸಮಸ್ಯೆ ಕುರಿತಂತೆ ಸಂಸದರ ಗಮನಕ್ಕೆ ತಂದಿದ್ದರು.


ಈ ವೇಳೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರು ಮೊಬೈಲ್ ಟವರಿಗೆ ಆದ್ಯತೆಯ ಮೇರೆಗೆ ಹೊಸ ಬ್ಯಾಟರಿ ಹಾಗೂ 4G ನೆಟ್ವರ್ಕ್ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದ್ದರು.

ಇದೀಗ ಜೂ.21ರಂದು ಮೊಬೈಲ್ ಟವರಿಗೆ ಹೊಸ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಸಂಸದರು ಹಾಗೂ ಶಾಸಕರು ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ.