ಗಾಂಜಾ ಸಾಗಾಟ ಪ್ರಕರಣ : ಆರೋಪ ಸಾಬೀತು – ಶಿಕ್ಷೆ ಪ್ರಕಟಿಸಿದ ಸುಳ್ಯ ‌ನ್ಯಾಯಾಲಯ

0

ಗಾಂಜಾ ಸಾಗಾಟದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾಗಿದ್ದು ಪ್ರಕರಣದಲ್ಲಿ ಭಾಗಿಯಾದ ಇಬ್ಬರಿಗೂ ಸುಳ್ಯ ನ್ಯಾಯಾಲಯ ಶಿಕ್ಷೆ ವಿಧಿಸಿರುವುದಾಗಿ ವರದಿಯಾಗಿದೆ.

ಪ್ರಕರಣದ ವಿವರ

2018ರ ಮಾರ್ಚ್ 28ರಂದು ಸುಳ್ಯ ಗಾಂಧಿನಗರ ಶಾಲಾ ಕ್ರಾಸ್ ಬಳಿ ಮಾಣಿ- ಮೈಸೂರು ಹೆದ್ದಾರಿಯಲ್ಲಿ ಬ್ಯಾರಿಕೇಡ್ ಇಟ್ಟು ವಾಹನಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದ ಸಮಯ ಸಂಜೆ 6.45 ಗಂಟೆಗೆ ಅರಂಬೂರು ಕಡೆಯಿಂದ ಸುಳ್ಯ ಕಡೆಗೆ ಮೋಟಾರು ಸೈಕಲ್‌ ನಲ್ಲಿ ಬರುತ್ತಿದ್ದ ಪಿ.ಎಂ. ಮೊಯಿದ್ದೀನ್ ಯಾನೆ ತಲವಾರ್ ಮೊಯಿದು ಮತ್ತು ಮುರಳಿ ಸಿ ಎಂಬಿಬ್ಬರನ್ನು ನಿಲ್ಲಲು ಸೂಚನೆ ನೀಡಿದಾಗ ಓಡಲು ಪ್ರಯತ್ನಿಸಿದವರನ್ನು ಹಿಡಿದು ವಿಚಾರಿಸಲಾಗಿ ಇಬ್ಬರ ಅಂಗಿಯ ಕಿಸೆಯಲ್ಲೂ ಗಾಂಜಾಕಂಡು ಬಂದ ಕಾರಣ ಪತ್ರಾಂಕಿತ ಅಧಿಕಾರಿಯ ಮೂಲಕ ಶೋಧನೆ ಮಾಡಿದಾಗ ಗಾಂಜಾ ದೊರೆತಿರುತ್ತದೆ. ಅವರಬಳಿ ಪರವಾನಗಿ ಇಲ್ಲದೇ ಅಕ್ರಮವಾಗಿ ಗಾಂಜಾ ಇಟ್ಟುಕೊಂಡಿದ್ದರಿಂದ ಗಾಂಜಾವನ್ನು ಮತ್ತು ಮೋಟಾರು ಸೈಕಲನ್ನು ವಶಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿತ್ತು.

ಈ ಪ್ರಕರಣವನ್ನು ವಿಚಾರಣೆ ನಡೆಸಿದ ಸುಳ್ಯ ನ್ಯಾಯಾಲಯವು ಇಬ್ಬರೂ ಆರೋಪಿಗಳು ಮಾಡಿರುವ ಅಪರಾಧ ಸಾಬೀತಾಗಿದ್ದು ಇಬ್ಬರನ್ನೂ ದೋಷಿಯೆಂದು ಘೋಷಿಸಿ ಜು.11 ರಂದು ಇಬ್ಬರೂ ಅಪರಾಧಿಗಳಿಗೆ ಎನ್.ಡಿ.ಪಿ.ಎಸ್. ಕಾಯ್ದೆಯ ಕಲಂ. 8 ( C) ಮತ್ತು 20( B) (ii) ( A) ರಡಿಯಲ್ಲಿ ತಲಾ ₹10,000 ದಂಡ ವಿಧಿಸಿರುತ್ತಾರೆ. ದಂಡ ತೆರಲು ತಪ್ಪಿದ್ದಲ್ಲಿ 4 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ.‌ಬಿ ಮೋಹನ್ ಬಾಬುರವರು ಆದೇಶ ಮಾಡಿರುತ್ತಾರೆ.

ಈ ಪ್ರಕರಣವನ್ನು ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರು ವಾದ ಮಂಡಿಸಿದ್ದಾರೆ.