ಶಿವ ಕೃಪಾ ಕಲಾ ಮಂದಿರದಲ್ಲಿ ಶಿಬಿರದ ಆಯೋಜನೆ
ಪತ್ರಿಕಾಗೋಷ್ಠಿಯಲ್ಲಿ ಪುರೋಹಿತ ನಾಗರಾಜ್ ಭಟ್ ಮಾಹಿತಿ
ಸುಳ್ಯದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದಿಂದ ನಡೆಸಿಕೊಂಡು ಬಂದಿರುವ ಶ್ರೀ ಕೇಶವಕೃಪಾ ವೇದ ಯೋಗ ಶಿಬಿರದ 25 ನೇ ವರ್ಷದ ಶಿಬಿರದ ಉದ್ಘಾಟನಾ ಸಮಾರಂಭ ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಶಿವಕೃಪಾ ಕಲಾಮಂದಿರದಲ್ಲಿ ಎ. 20 ರಂದು ಉದ್ಘಾಟನೆಗೊಳ್ಳಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ರವರು ಹೇಳಿದರು.
ಅವರು ಏ. 9 ರಂದು ಸುಳ್ಯದ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಶಿಬಿರದ ಕುರಿತು ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ವೇದಾಧ್ಯಯನ ಯೋಗಾಭ್ಯಾಸದೊಂದಿಗೆ ದೇಶದ ಇತಿಹಾಸ ಪರಿಚಯ, ದೇಶ ಭಕ್ತಿಗೀತೆ, ಭಜನೆ, ಈಜು ತರಬೇತಿ, ಸಂಸ್ಕಾರಪಾಠ, ಸ್ತೋತ್ರಗಳು, ಸುಭಾಷಿತ ಕಲಿಕೆ, ಜಾದೂ, ಪೊಲೀಸ್ ಮಾಹಿತಿ, ನಾಟಕ, ಮಿಮಿಕ್ರಿ, ಚಿತ್ರಕಲೆ, ಅಗ್ನಿಶಾಮಕ ಪ್ರಾತ್ಯಕ್ಷಿಕೆ, ಜಾನಪದನೃತ್ಯ ಕಸದಿಂದ ರಸ, ಹಾಡು-ಕುಣಿತ, ಆರೋಗ್ಯ ಮಾಹಿತಿ, ಹಾವು ನಾವು ಪರಿಸರ ಪ್ರಾತ್ಯಕ್ಷಿಕೆ, ಯಕ್ಷಗಾನ, ರಂಗ ಗೀತೆಗಳು, ಗೀತ-ಗಾನ-ಸಾಹಿತ್ಯ,ಶ್ರೀ ಪೂಜಾ ಪ್ರಯೋಗ ಪಾಠ ಪ್ರಾತ್ಯಕ್ಷಿಕೆಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದರು.
ಉಚಿತ ವೇದ-ಯೋಗ-ಕಲಾ ಶಿಕ್ಷಣದೊಂದಿಗೆ ಅಂತರ್ ರಾಜ್ಯ ಮಟ್ಟದಲ್ಲಿ ಮಿಂಚುತ್ತಿರುವ ಸುಳ್ಯದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ೩೫ ದಿನದ ಬೇಸಿಗೆ ಶಿಬಿರ ಇದಾಗಿದೆ.
ಭಿನ್ನ ಭಿನ್ನ ಕಲಾಪ್ರಕಾರಗಳು ಅರಳಿ ಮೇಲೈಸಿ, ಕಣ್ಸೆಳೆಯುವಂತೆ ಮಾಡುತ್ತದೆ.
ಸಹಸ್ರಾರು ಹಿಂದಿನ ವೇದಮಂತ್ರಗಳು ಇಂದಿಗೂ ಜಗತ್ತಿನಾದ್ಯಂತ ಮಾರ್ದನಿಸುತ್ತಿವೆಯೆಂದರೆ ಅದಕ್ಕೆ ವೈದಿಕ ಪರಂಪರೆಯ ಸದ್ದಿಲ್ಲದ ಸೇವೆಯೇ ಕಾರಣ. ಅಲ್ಲಲ್ಲಿ ನಡೆಯುವ ವೇದ ತರಗತಿಗಳು, ವೇದ ಶಿಬಿರಗಳ ಮೂಲಕ ವೇದ ಪರಂಪರೆಯನ್ನು ಶಿಷ್ಯರಿಂದ ಶಿಷ್ಯರಿಗೆ ದಾಟಿಸುತ್ತಾ ವೇದಶಾಸ್ತ್ರಗಳ ಉಳಿವಿಗೆ ಹಲವಾರು ವೇದ ಪಾಠಶಾಲೆಗಳು ಶ್ರಮಿಸುತ್ತಿವೆ. ಅಂತಹ ವೇದ ಪಾಠಶಾಲೆಗಳ ಪೈಕಿ ಹಳೆಗೇಟಿನ ವಿದ್ಯಾನಗರದಲ್ಲಿ ಕಾರ್ಯಾಚರಿಸುತ್ತಿರುವ ನಮ್ಮ ‘ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ, ಸುಳ್ಯ (ರಿ.)’ ಇದರ ಕೊಡುಗೆ ಅನನ್ಯವಾದುದು ಎಂದು ಹೇಳಿದರು.
ಶ್ರೀಕೇಶವ ಕೃಪಾ ಸಾಗಿಬಂದ ಹಾದಿಯ ಕುರಿತು ಪ್ರತಿಷ್ಠಾ ನದ ಸದಸ್ಯರಾದ ಶ್ರೀಮತಿ ಸುಜಾತಾ ರಾಧಾಕೃಷ್ಣ ಮಿತ್ತೂರು ಮಾತನಾಡಿ, ಸುಳ್ಯದ ಪುರೋಹಿತ ನಾಗರಾಜ್ ಭಟ್ಟರ ಜೊತೆ ಅವರ ಆತ್ಮೀಯರೊಬ್ಬರು ಒಂದು ಕಾಲದಲ್ಲಿ ವೇದಾಧ್ಯಯನದ ಅಭಿಲಾಷೆಯನ್ನು ಮುಂದಿಟ್ಟರು. ಅವರ ವೇದ ಕಲಿಕೆಯ ಅತೀವ ಅಭಿರುಚಿಯನ್ನು ಮನಗಂಡು ಪ್ರೇರಿತರಾದ ಪುರೋಹಿತರು ವೇದ ತರಗತಿ ನಡೆಸುವುದಕ್ಕೆ ಮುಂದಡಿಯಿಟ್ಟು ಅಭಿರುಚಿ ಹೊಂದಿರುವ ನಾಲ್ಕಾರು ವಿದ್ಯಾರ್ಥಿಗಳನ್ನು ಸೇರಿಸಿ ಅಂದು ವೇದ ತರಗತಿಯನ್ನು ಆರಂಭಿಸಿದರು. ಪತ್ರಿಕೆಯಲ್ಲಿ ವ್ಯಾಪಕವಾಗಿ ಪ್ರಚಾರ ಪಡೆದು ವೇದಾಧ್ಯಾಯಿಗಳಿಂದ ಮತ್ತಷ್ಟು ಬೇಡಿಕೆ ಬರತೊಡಗಿ ಒಂದು ಕಡೆ ವೇದ ಕಲಿಕೆಗೆ ಬೇಡಿಕೆಯೂ ಇತ್ತು. ಮತ್ತೊಂದೆಡೆ ವೇದಾಧ್ಯಾಯಿಗಳ ಜ್ಞಾನದಾಹವನ್ನು ತಣಿಸುವ ವೇದ ಪಾಠಶಾಲೆಗಳ ಕೊರತೆಯೂ ಇತ್ತು. ಹೀಗಾಗಿ ಪುರೋಹಿತರ ಮನದಲ್ಲೂ ವೇದ ಪಾಠಶಾಲೆ ಮುಂದುವರಿಸುವ ಆಸೆ ಚಿಗುರೊಡೆದು ಅಂದಿನಿಂದ ಪ್ರತೀ ವರ್ಷ ವೇದ ಶಿಬಿರಗಳನ್ನು ಆಯೋಜಿಸುತ್ತಾ ಬಂದರು. ಕ್ರಮೇಣ ಹಂತಹಂತವಾಗಿ ಶಿಬಿರಾರ್ಥಿಗಳ ಸಂಖ್ಯೆಯೂ ಹೆಚ್ಚಾಗತೊಡಗಿತು. ಹೀಗೆ ಆಕಸ್ಮಿಕ ಸಂದರ್ಭವೊಂದರಲ್ಲಿ ಆಚಾನಕ್ಕಾಗಿ ಹುಟ್ಟಿಕೊಂಡ ವೇದ ಶಿಬಿರವು ಮುಂದೆ ವೇದದ ಜೊತೆಗೆ ಇನ್ನಿತರ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಜೋಡಿಸಿಕೊಂಡು ‘ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ಸುಳ್ಯ (ರಿ.)’ ಅನ್ನುವ ಅಧಿಕೃತ ಸಂಸ್ಥೆಯಾಗಿ ನೋಂದಣಿಗೊಂಡು ಲೋಕಾರ್ಪಣೆಗೊಂಡು ಇಂದಿಗೆ 25 ವಸಂತಗಳನ್ನು ಪೂರ್ಣಗೊಳಿಸಿ ರಜತ ಮಹೋತ್ಸವದತ್ತ ಮುಂದುವರಿಯುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪ್ರತಿಷ್ಠಾನದ ಸಂಚಾಲಕಿ ಶ್ರೀಮತಿ ಶ್ರೀದೇವಿ ನಾಗರಾಜ್ ಭಟ್ ಮಾತನಾಡಿ ಸರಿ ಸುಮಾರು ೩೫ ದಿನಗಳ ಆರಂಭದಲ್ಲಿ ವೇದ ತರಗತಿಯ ಉದ್ದೇಶವನ್ನಷ್ಟೇ ಹೊಂದಿದ್ದ ಪ್ರತಿಷ್ಠಾನ, ಆ ಬಳಿಕ ವಿವಿಧ ಚಟುವಟಿಕೆಗಳ ಮೂಲಕ ತನ್ನ ಪರಿಧಿಯನ್ನು ವಿಸ್ತರಿಸಿ, ಮೊದಲಿಗೆ ಪ್ರಾಚೀನ ಭಾರತದ ಯೋಗ ಪದ್ಧತಿಯನ್ನು ಶಿಬಿರದಲ್ಲಿ ಅಳವಡಿಸಿಕೊಂಡು ಶಿಬಿರಾರ್ಥಿಗಳಿಗೆ ಯೋಗ ಪರಿಣಿತರಿಂದ ಯೋಗಾಭ್ಯಾಸವನ್ನು ಆರಂಭಿಸಿತು.
ತದ ನಂತರ ಕಲಾಕ್ಷೇತ್ರದ ವಿವಿಧ ಪ್ರಕಾರಗಳನ್ನು ಶಿಬಿರದಲ್ಲಿ ಜೋಡಿಸಿಕೊಂಡು ಕರಾವಳಿಯ ಗಂಡುಕಲೆಯಾದ ಯಕ್ಷಗಾನ, ಕಂಸಾಳೆ ವೀರಗಾಸೆಯಂತಹ ಜಾನಪದ ಕಲೆಗಳು, ಭಜನೆ ಸಂಗೀತ ಮುಂತಾದ ಲಲಿತಕಲೆಗಳು, ಪೇಪರ್ ಕಟ್ಟಿಂಗ್ – ಮಿಮಿಕ್ರಿ ಮುಂತಾದ ಸೃಜನಶೀಲ ಕಲೆಗಳನ್ನು ಶಿಬಿರಾರ್ಥಿಗಳಿಗೆ ಪರಿಚಯಿಸುವ ಕಾರ್ಯವನ್ನು ಕೈಗೆತ್ತಿಕೊಂಡಿತು. ಇದರ ಜೊತೆಗೆ ಇತ್ತೀಚಿನ ಕೆಲ ವರ್ಷದಿಂದ ಶಿಬಿರಾರ್ಥಿಗಳಿಗೆ ಈಜು ತರಬೇತಿಯನ್ನು ಕೂಡಾ ಜೋಡಿಸಿಕೊಂಡಿರುವುದು ಪ್ರತಿಷ್ಠಾನದ ವೈವಿಧ್ಯತೆಗೆ ಸಾಕ್ಷಿಯಾಗಿದೆ.
ಇಲ್ಲಿ ನಡೆಯುವ ಶಿಬಿರಗಳಿಗೆ ಖಾಯಂ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಿಕೊಂಡಿಲ್ಲ. ಬದಲಾಗಿ ಪ್ರತೀ ವರ್ಷವೂ ಬೇರೆ ಬೇರೆ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಹೊಸ ಹೊಸ ಸಂಪನ್ಮೂಲ ವ್ಯಕ್ತಿಗಳಿಗೆ ವೇದಿಕೆಗಳನ್ನು ಒದಗಿಸಿಕೊಡುತ್ತಿರುವುದು ಪ್ರತಿಷ್ಠಾನದ ವಿಶೇಷತೆ. ಸೃಜನಶೀಲ ಕಲೆಗಳನ್ನು ಶಿಬಿರಾರ್ಥಿಗಳಿಗೆ ಪರಿಚಯಿಸುವುದರೊಂದಿಗೆ ಹಿಂದೂ ಧರ್ಮದ ನಂಬಿಕೆಗಳು ಮತ್ತು ಆಚರಣೆಗಳ ಹೊಂದಿರುವ ವೈಜ್ಞಾನಿಕ ಕಾರಣಗಳು, ಭಗವದ್ಗೀತೆ, ಲಲಿತಾ ಸಹಸ್ರನಾಮ, ವಿಷ್ಣುಸಹಸ್ರನಾಮ ಮುಂತಾದ ಶ್ಲೋಕಗಳನ್ನು ಸ್ಪುಟವಾಗಿ ಪಠಿಸುವ ಸಾಂಪ್ರದಾಯಿಕ ವಿಧಾನ. ಸುಭಾಷಿತಗಳು, ಆದರ್ಶ ದಿನಚರಿ ರೂಪಿಸಿಕೊಳ್ಳುವ ಬಗೆ. ನೈತಿಕ ಶಿಕ್ಷಣ, ಮಾನವೀಯ ಮೌಲ್ಯಗಳು ಮುಂತಾದ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಸುಮಾರು ೩೫ ದಿನಗಳ ಕಾಲ ರಾಜ್ಯ ಹಾಗೂ ಹೊರರಾಜ್ಯದ ಆಯ್ಕೆಯಾದ ೨೦೦ ಶಿಬಿರಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಅಶನ, ವಸನ, ವಸತಿ, ಪಠ್ಯಪುಸ್ತಕಗಳು, ವ್ಯಾಸಪೀಠ ಇತ್ಯಾದಿಗಳನ್ನು ನೀಡಿ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ಇಪ್ಪತ್ತೈದನೆಯ ವರ್ಷದ ವೇದ-ಯೋಗ-ಕಲಾ ಶಿಬಿರವು ಸಂಪೂರ್ಣ ಉಚಿತವಾಗಿ ನಡೆಯಲಿದೆ ಎಂದರು.
ಉದ್ಘಾಟನಾ ಸಂಭ್ರಮದ ಕುರಿತು ಸರಣಿ ಪೂಜಾ ಸಂಚಾಲಕ ಗೋಪಾಲ ಕೃಷ್ಣ ಭಟ್ ಶಿವ ನಿವಾಸ ಮಾತನಾಡಿ ಏ.೨೦ ಭಾನುವಾರ ಬೆಳಗ್ಗೆ ೧೦.೩೦ಕ್ಕೆ ವೇದ ವಿದ್ವಾಂಸರಾದ ವೇದ ಬ್ರಹ್ಮ ಶ್ರೀ ಕೇಶವ ಜೋಯಿಸ ವಳಲಂಬೆ ಇವರು ಉದ್ಘಾಟಿಸಲಿದ್ದು, ಪುತ್ತೂರಿನ ಪ್ರಸಿದ್ಧ ವಕೀಲರಾದ ಮಹೇಶ ಕಜೆ ಇವರು ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ದಿಕ್ಕೂಚಿ ಉಪನ್ಯಾಸ ಮಾಡಲಿದ್ದು, ಪ್ರಗತಿಪರ ಕೃಷಿಕ ಶ್ರೀಯುತ ರವಿಶಂಕರ ರಾವ್ ದೇವ ಇವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಶ್ರೀ ಕೇಶವಕೃಪ ವೇದ ಮತ್ತು ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.