ನಾರ್ಣಕಜೆ : ಕುಂಟಿಹಿತ್ಲು ತೋಡಿಗೆ ಕಾಲು ಜಾರಿ ಬಿದ್ದು ವೃದ್ಧೆ ಮೃತ್ಯು

0

ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವೃದ್ಧೆಯೊಬ್ಬರು ಕಾಲು ಜಾರಿ ತೋಡಿಗೆ ಬಿದ್ದು ಧಾರುಣವಾಗಿ ಮೃತಪಟ್ಟ ಘಟನೆಯೊಂದು ನಾರ್ಣಕಜೆ ಬಳಿಯ ಅಮರಮುಡ್ನೂರು ಗ್ರಾಮದ ಕುಂಟಿಹಿತ್ಲುವಿನಿಂದ ವರದಿಯಾಗಿದೆ.

ಕೋಣಕಜೆ ಸೀತಾಮ್ಮ ಎಂಬವರೇ ಮೃತ ದುರ್ದೈವಿ. ಅವರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು.

ಸೀತಾಮ್ಮರವರು ಮನೆಯವರಲ್ಲಿ ನಾರ್ಣಕಜೆಗೆ ಹೋಗಿ ಬರುತ್ತೇನೆಂದು ಅ.21 ಬುಧವಾರದಂದು ಬೆಳಿಗ್ಗೆ 9 ಗಂಟೆಗೆ ಹೋಗಿದ್ದರು. ಆದರೆ ಅವರು ನಾರ್ಣಕಜೆಗೂ ಹೋಗದೇ, ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದರು. ಹೀಗಾಗಿ ಮನೆಯವರು ಹುಡುಕಾಟ ಆರಂಭಿಸಿದ್ದರು. ಇದೀಗ ನಾರ್ಣಕಜೆ ಬಳಿಯ ಕುಂಟಿಹಿತ್ಲು ತೋಡಿನ ಮಧ್ಯೆ ಸೀತಮ್ಮರವರ ಮೃತದೇಹ ಪತ್ತೆಯಾಗಿದೆ.

ತೋಡು ದಾಟಿ ಹೋಗುವ ಸ್ಥಳದಿಂದ ಸ್ವಲ್ಪ ಕೆಳಭಾಗದಲ್ಲಿ ಕಲ್ಲಿನ ಮಧ್ಯೆ ಮೃತದೇಹ ಪತ್ತೆಯಾಗಿದೆ. ತೋಡು ದಾಟುವ ವೇಳೆ ನೀರಿನ‌ ಸೆಳೆತಕ್ಕೆ ಸಿಕ್ಕಿ ಜಾರಿ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ‌. ಈ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಮೃತರು ಓರ್ವ ಪುತ್ರ ಆನಂದ ಕೋಣಕಜೆ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.