ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧವಿಲ್ಲ: ಹರೀಶ್ ಇಂಜಾಡಿ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯಾತ್ರಿಕರ ಮೇಲೆ ಹಲ್ಲೆ ನಡೆಯಿತು ಎನ್ನಲಾದ ವಿಡಿಯೋ ಗೆ ಸಂಬಂಧಿಸಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಅಥವಾ ದೇವಸ್ಥಾನದ ಸಿಬ್ಬಂದಿ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಲಾಡ್ಜ್ ಗಳಿಗೆ ಗ್ರಾಹಕರನ್ನು ಸೆಳೆಯುವ ಸಲುವಾಗಿ ಖಾಸಗಿ ವಸತಿ ಗೃಹಗಳ ಏಜೆಂಟ್ಗಳು ತಮ್ಮ ವ್ಯಾಪಾರದ ನಿಮಿತ್ತ ಯಾತ್ರಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ಇದಾಗಿದೆ ಎಂದವರು ತಿಳಿಸಿದ್ದಾರೆ.
ಈ ವಿಷಯ ನಮ್ಮ ಗಮನಕ್ಕೆ ಬಂದ ತಕ್ಷಣ, ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅಧಿಕಾರಿಗಳಿಗೆ ವಿಷಯವನ್ನು ತಿಳಿಸಲಾಗಿದ್ದು, ಅವರು ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳುತಿದ್ದಾರೆ. ಭಕ್ತಾದಿಗಳು ಭಯಭೀತರಾಗಬೇಕಾಗಿಲ್ಲ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭದ್ರತೆ ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ.








ಸುಬ್ರಹ್ಮಣ್ಯ ದೇವಸ್ಥಾನದ ವಸತಿ ಗೃಹಗಳು ಎಂದು ಬಿಂಬಿಸಲಾಗಿದೆ, ಇದು ತಪ್ಪು ಮಾಹಿತಿಯಾಗಿದ್ದು ಈ ಘಟನೆ ನಡೆದಿರುವುದು ಖಾಸಗಿ ವಸತಿ ಗೃಹಗಳ ಏಜೆಂಟುರುಗಳಿಂದ ಈ ಕೃತ್ಯಗಳು ನಡೆದಿರುತ್ತದೆ ಹೊರತು ಯಾವುದೇ ದೇವಸ್ಥಾನದ ಅಧಿಕೃತ ವಸತಿಗೃಹದ ನಿರ್ವಾಹಕರಿಂದ ಅಲ್ಲ.
ದೇವಸ್ಥಾನದ ವತಿಯಿಂದ ವಸತಿ ಗೃಹಗಳ ಹಾಗೂ ಕೊಟ್ಟಡಿಗಳ ಸಂಖ್ಯೆ ಕಡಿಮೆ ಇದ್ದು ಮುಂದಿನ ದಿನಗಳಲ್ಲಿ ಒಂದು ಸಾವಿರ ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿರುವ ವಸತಿಗೃಹಗಳನ್ನು ನಿರ್ಮಾಣ ಮಾಡಲಿದ್ದೇವೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರಿಗೆ ಇನ್ನಷ್ಟು ಹೆಚ್ಚಿನ ಅನುಕೂಲತೆಗಳನ್ನು ಮಾಡುತ್ತೇವೆ ಎಂದಿದ್ದಾರೆ.
ಅಲ್ಲದೆ ಸುಬ್ರಹ್ಮಣ್ಯದಲ್ಲಿ ತುರ್ತು ಚಿಕಿತ್ಸೆ ವ್ಯವಸ್ಥೆ ಲಭ್ಯವಿಲ್ಲದಿರುವ ಬಗ್ಗೆ ಆರೋಪವು ಇದ್ದು ಇದಕ್ಕೂ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ
ಭಕ್ತಾದಿಗಳು ಯಾವುದೇ ಆತಂಕವಿಲ್ಲದೆ ಕ್ಷೇತ್ರಕ್ಕೆ ಬಂದು ತಮ್ಮ ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ವಿನಂತಿಸಿದ್ದಾರೆ.










