ಅಲೆಕ್ಕಾಡಿಯಲ್ಲಿ ಯುವಕನಿಂದ ದಾಂಧಲೆ, ಪೊಲೀಸ್ ವಶ

0

 

ಮುರುಳ್ಯ ಗ್ರಾಮದ ಅಲೆಕ್ಕಾಡಿಯಲ್ಲಿ ಯುವಕನೊಬ್ಬ ಅಂಗಡಿಯೊಂದಕ್ಕೆ ಬಂದು ದಾಂಧಲೆ ನಡೆಸಿರುವ ಘಟನೆ ವರದಿಯಾಗಿದೆ.
ಯುವಕನನ್ನು ಯತೀಶ ಎಂದು ಗುರುತಿಸಲಾಗಿದ್ದು, ಅಲೆಕ್ಕಾಡಿಯ ಸಂಕಪ್ಪ ಸಾಲಿಯಾನ್ ಅಂಗಡಿಗೆ ಬಂದು ಸಿಗರೇಟ್ ಕೇಳಿದಾಗ ಅಂಗಡಿಯವರು ಸಿಗರೇಟ್ ಖಾಲಿಯಾಗಿದೆ ಎಂದು ಹೇಳಿದರು. ಇದರಿಂದ ಕೋಪಗೊಂಡ ಯುವಕ ಅಂಗಡಿಯವರಿಗೆ ಬೈದನಲ್ಲದೆ ಅಂಗಡಿಯ ಹೊರಗೆ ಇರಿಸಲಾಗಿದ್ದ ಜ್ಯೂಸ್ ಬಾಟಲಿಯನ್ನು ತೆಗೆದುಕೊಂಡು ಹೋಗಿ ಎದುರಿನ ರಸ್ತೆಗೆ ಎಸೆದು ದಾಂಧಲೆ ನಡೆಸಿದ.

ಬಾಟಲಿಗಳು ರಸ್ತೆಯಲ್ಲಿ ಒಡೆದು ನಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ. ಬಳಿಕ ಅಂಗಡಿಯವರು ಬೆಳ್ಳಾರೆ ಪೊಲೀಸರಿಗೆ ತಿಳಿಸಿದ ಮೇರೆಗೆ ಅವರು ಸ್ಥಳಕ್ಕೆ ಬಂದು ಆ ಯುವಕನನ್ನು ವಶಕ್ಕೆ ಪಡೆದರೆಂದು ತಿಳಿದು ಬಂದಿದೆ.

ವಿಚಾರಿಸುವಾಗ ಆತ ಮಾನಸಿಕ ಅಸ್ವಸ್ಥನೆಂದೂ, ಬಳಿಕ ಆತನನ್ನು ಅಂಬ್ಯುಲೆನ್ಸ್‌ನಲ್ಲಿ ಮಂಗಳೂರು ಆಸ್ಪತ್ರೆಗೆ ಕಳುಹಿಸಿಕೊಡಲಾಯಿತೆಂದು ತಿಳಿದು ಬಂದಿದೆ. ಇದೇ ಯುವಕ ನಿನ್ನೆ ರಾತ್ರಿ ನರ್‍ಲಡ್ಕದಲ್ಲಿ ಅಂಗಡಿಯವರೊಬ್ಬರಿಗೂ ಇದೇ ರೀತಿ ಮಾಡಿದ್ದರೆಂದು, ಅಲ್ಲದೆ ಮೂರ್‍ನಾಲ್ಕು ಮನೆಗಳಿಗೆ ಹೋಗಿ ಬೈದರೆಂದೂ ತಿಳಿದು ಬಂದಿದೆ.