ಪೆರಾಜೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪಂಚಾಯತ್ ಸದಸ್ಯನಿಂದ ಹಲ್ಲೆ ಆರೋಪ

0

ಪೆರಾಜೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮೂಲೆ ಮಜಲು ಗೌತಮ್ ರವರ ಮೇಲೆ ಪೆರಾಜೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಹಾಗೂ ಪೆರಾಜೆ ಗ್ರಾಮ ಪಂಚಾಯತಿ ಸದಸ್ಯ ಸುಭಾಶ್ ಚಂದ್ರ ಬಂಗಾರುಕೋಡಿ ಹಾಗೂ ಬಿಜೆಪಿ ಮುಖಂಡ ಗುಡ್ಡೆಮನೆ ಮಹಾಬಲಾ ಎಂಬುವರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದ್ದು, ಗಾಯಗೊಂಡ ಗೌತಮ್ ಕೊಡಗು ವೈದ್ಯಕೀಯ ಭೋದಕ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿ ತಿಳಿದುಬಂದಿದೆ.

ಎ.22 ರಂದು ಸಂಜೆ ಗೌತಮ್ ರವರು ಚುನಾವಣಾ ಪ್ರಚಾರ ಕಾರ್ಯ ನಡೆಸಿ ಮನೆಗೆ ಬೈಕ್ ನಲ್ಲಿ ಮರಳುತ್ತಿದ್ದಾಗ ಕೋಟೆ ಪೆರಾಜೆ ಬಸ್ ಸ್ಟಾಪ್ ಬಳಿ ಸುಭಾಷ್ ಚಂದ್ರ ಬಂಗಾರುಕೋಡಿ ಮತ್ತು ಮಹಾಬಲ ಗುಡ್ಡೆ ಮನೆಯವರು ಅಡ್ಡ ಹಾಕಿ ಪೆರಾಜೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನನ್ನು ಜೀವಸಹಿತ ಉಳಿಸುವುದಿಲ್ಲ ಎಂದು ಹೇಳಿ ದೊಣ್ಣೆ ಮತ್ತು ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ಸಾರೆಂದು‌ ಹೇಳಲಾಗಿದ್ಸು, ಹಲ್ಲೆಗೊಳಗಾದ ಗೌತಮ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.‌ ಗೌತಮ್ ನೀಡಿದ ದೂರಿನಂತೆ ಮಡಿಕೇರಿ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಸುಭಾಷ್ ಚಂದ್ರ ಬಂಗಾರುಕೋಡಿ ಹಾಗೂ ಮಹಾಬಲ ಗುಡ್ಡೆ ಮನೆ ಇವರ ವಿರುದ್ದ IPC ಸೆಕ್ಷನ್ 427,324,323,504 ರಡಿ FIR ದಾಖಲಾಗಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಮುಖಂಡರಾದ ತೆನ್ನಿರ ಮೈನಾ,ಹೊಸೂರು ಸೂರಜ್,ಪೆರುಮಂಡ ಮನು ಸೇರಿದಂತೆ ಕಾಂಗ್ರೆಸ್ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಗೌತಮ್ ಗೆ ಸಾಂತ್ವನ ಹೇಳಿದ್ದಾರೆ. ಈ ಘಟನೆಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಖಂಡಿಸಿದ್ದಾರೆ.