ಕೂರ್ನಡ್ಕದಲ್ಲಿ ನೀರು ಪಾಲಾಗಿದ್ದ ಕೂಲಿ ಕಾರ್ಮಿಕ ಮೃತದೇಹ ಪತ್ತೆ

0

ನಾಲ್ಕನೇ ದಿನದ ಕಾರ್ಯಾಚರಣೆಯಲ್ಲಿ ಪತ್ತೆಯಾದ ನಾರಾಯಣನ್ ಮೃತದೇಹ

ಕೂರ್ನಡ್ಕ ಗಡಿ ಪ್ರದೇಶದಲ್ಲಿ ನಾಲ್ಕು ದಿನಗಳ ಹಿಂದೆ ಹೊಳೆ ನೀರಿನಲ್ಲಿ ನೀರು ಪಾಲಾಗಿದ್ದ ಕೂಲಿ ಕಾರ್ಮಿಕನ ಮೃತದೇಹ ಇಂದು ಪತ್ತೆಯಾಗಿದೆ.

ಕುಂದಲ್ಪಾಡಿ ಪೆರಾಜೆ ಎಂಬಲ್ಲಿ ರಬ್ಬರ್ ಟ್ಯಾಪರ್ ಆಗಿದ್ದ ಕಾಸರಗೋಡು ಜಿಲ್ಲೆಯ ಚಿತ್ತಾರಿಕಲ್ ಸಮೀಪದ ನಾರಾಯಣನ್ ಎಂಬವರು ಕೂರ್ನಡ್ಕದಲ್ಲಿ ಪಾಲ ದಾಟಿ ಬರುತ್ತಿದ್ದಾಗ ನೀರು ಪಾಲಾಗಿದ್ದರು.

ಅಂದಿನಿಂದಲೇ ಶೋಧ ಕಾರ್ಯ ಆರಂಭಗೊಂಡಿತ್ತು. ಸುಳ್ಯ ಅಗ್ನಿಶಾಮಕ ದಳ, ಎಸ್.ಡಿ.ಆರ್.ಎಫ್ ತಂಡ, ಪೋಲಿಸ್ ಇಲಾಖೆಯವರ ಜತೆ ಅರಂತೋಡು ಕಲ್ಲುಗುಂಡಿ ವಿಖಾಯ ತಂಡ ಹಾಗೂ ಪೈಚಾರಿನ ಮುಳುಗು ತಜ್ಞರು ಕೂಡಾ ಶೋಧ ಕಾರ್ಯದಲ್ಲಿ ತೊಡಗಿದ್ದರು.

ಇದೀಗ ಆಲೆಟ್ಟಿಯ ಕನ್ನಿಗುಂಡಿ ಬಳಿಯಲ್ಲಿ ಪಯಸ್ವಿನಿ ಹೊಳೆ ಮಧ್ಯೆ ಪೊದೆಯಲ್ಲಿ ಸಿಲುಕಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆ ಪ್ರದೇಶದಲ್ಲಿ ಪೈಚಾರಿನ ಮುಳುಗು ತಜ್ಞರು ಶೋಧ ಕಾರ್ಯ ನಡೆಸುತ್ತಿದ್ದಾಗ ಮೃತದೇಹ ಪತ್ತೆಯಾಯಿತೆಂದು ತಿಳಿದುಬಂದಿದೆ.