ಕೋಲ್ಚಾರಿನಲ್ಲಿ‌ ಸುಳ್ಯ ಡಿಗ್ರಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಸಮಾರೋಪ

0

ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ 2022-23 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವು ಕೋಲ್ಚಾರು ದ. ಕ. ಜಿ. ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜು.3 ರಿಂದ 9ರವರೆಗೆ ನಡೆಸಲಾಯಿತು. ಶಿಬಿರದ ಉದ್ಘಾಟನೆಯನ್ನು ಆಲೆಟ್ಟಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಪುಷ್ಪಾವತಿ ಕಡೆಕಲ್ಲು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ಬಿ. ಈ ರವರು ಆಗಮಿಸಿದ್ದರು. ಇವರು ಮಾತನಾಡುತ್ತಾ ಶಿಬಿರಾರ್ಥಿಗಳು ಸೇವಾ ಮನೋಭಾವನೆಯೊಂದಿಗೆ ಸ್ಪರ್ಧಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ರವರು ವಹಿಸಿಕೊಂಡಿದ್ದರು.


ಶಿಬಿರದ ದೈನಂದಿನ ಚಟುವಟಿಕೆಗಳಾದ ಧ್ವಜಾರೋಹಣ, ಶ್ರಮದಾನ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಅವಲೋಕನ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಹೊಸ-ಹೊಸ ಅನುಭವಗಳನ್ನು ಪಡೆದುಕೊಂಡರು. ಶೈಕ್ಷಣಿಕ ಕಾರ್ಯಕ್ರಮದಲ್ಲಿ ಪ್ರತಿದಿನವೂ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಹಾಗೂ ಸಂವಾದ ಏರ್ಪಡಿಸಲಾಗಿತ್ತು. ಮನಮೋಹನ ಬಿ, ವಲಯ ತರಬೇತುದಾರು, ಜೆ ಸಿ ಐ ಸುಳ್ಯ, ಮಂಜುನಾಥ ಎನ್, ವಲಯ ಅರಣ್ಯಾಧಿಕಾರಿಗಳು, ಸುಳ್ಯ ವಲಯ, ಡಾ| ಅವಿನಾಶ್ ಕೆ ವಿ, ಪ್ರಾಧ್ಯಾಪಕರು, ಕೆ ವಿ ಜಿ ಆಯುರ್ವೇದ ಕಾಲೇಜು, ಸುಳ್ಯ, ಶಫೀಕ್ ಕೊಯ್ಂಗಾಜೆ, ಉರಗ ತಜ್ಞರು ಪ್ರತಿದಿನ ನಡೆಯುವ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.


ಜು.6 ರಂದು ವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ್ ಎನ್ ರವರು ವನಮಹೋತ್ಸವಕ್ಕೆ ಚಾಲನೆ ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಶಾರದಾ ಭಜನಾ ಮಂದಿರ ಕೋಲ್ಚಾರು ಇದರ ಅಧ್ಯಕ್ಷರಾದ ಆನಂದ ಕುಡೆಂಬಿ ಇವರು ಡೋಲು ಬಾರಿಸುವುದರ ಮೂಲಕ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ವೀಣಾ ಎಂ ಟಿ ರವರು ಆಗಮಿಸಿದ್ದರು.


ಜು.9ರಂದು ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ರವರು ವಹಿಸಿಕೊಂಡಿದ್ದರು. ಮುಖ್ಯ ಭಾಷಣಕಾರರಾಗಿ ಕೋಲ್ಚಾರು ಗ್ರಾಮದ ದ. ಕ. ಜಿ. ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಜಲಜಾಕ್ಷಿ ಕೆ ಡಿ ರವರು ಮಾತನಾಡಿ, ಶಿಬಿರಾರ್ಥಿಗಳಲ್ಲಿ ಸೇವಾ ಮನೋಭಾವನೆಯ ಆಗತ್ಯತೆ, ಕಷ್ಟವನ್ನು ಸಹಿಸುವ ತಾಳ್ಮೆ ಬಗ್ಗೆ ಹೇಳುತ್ತಾ ಶಿಬಿರಾರ್ಥಿಗಳಲ್ಲಿರುವ ಶಿಸ್ತನ್ನು ಪ್ರಶಂಸಿಸಿದರು.

ಮುಖ್ಯ ಅತಿಥಿಗಳಾಗಿ ಆಲೆಟ್ಟಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ದಿನೇಶ್ ಕಣಕ್ಕೂರು ಹಾಗೂ ಕೋಲ್ಚಾರು ಗ್ರಾಮದ ದ. ಕ. ಜಿ. ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುದರ್ಶನ ಪಾತಿಕಲ್ಲು ರವರು ಮಾತನಾಡಿದರು.

ಕಾರ್ಯಕ್ರಮಕ್ಕೆ ರಾಷ್ಟ್ರೀಯ ಸೇವಾ ಯೋಜನೆಯ ಘಟಕ -1 ರ ಶಿಬಿರಾಧಿಕಾರಿಗಳಾದ ಡಾ. ಲತಾ ಎನ್ ಸ್ವಾಗತಿಸಿದರೆ ಘಟಕ -2 ರ ಶಿಬಿರಾಧಿಕಾರಿಗಳಾದ ಶ್ರೀ ರಾಮಕೃಷ್ಣ ಕೆ ಎಸ್ ರವರು ವಂದಿಸಿದರು. ಶಿಬಿರಾರ್ಥಿ ನವ್ಯಶ್ರೀ ಪಿ ಆರ್ ಕಾರ್ಯಕ್ರಮ ನಿರೂಪಿಸಿದರು.