ಅಡ್ಕಾರು: ಕಾರ್ಮಿಕರಿಗೆ ಕಾರು ಢಿಕ್ಕಿ ಹೊಡೆದ ಘಟನೆ

0

ಮೂರಕ್ಕೇರಿದ ಸಾವಿನ ಸಂಖ್ಯೆ; ಗಂಭೀರ ಗಾಯಗೊಂಡ ಮೂವರೂ ಮೃತ್ಯು

ಅಡ್ಕಾರಿನ ಹೊಟೇಲ್ ಕರಾವಳಿ ಬಳಿ ಇಂದು ಬೆಳ್ಳಂಬೆಳಗ್ಗೆ ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಹುಣಸೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರೊಂದು ಡಿಕ್ಕಿ ಹೊಡೆದು ಗಾಯಗೊಂಡ ಕಾರ್ಮಿಕರ ಪೈಕಿ ಮೂವರು ಸಾವನ್ನಪ್ಪಿದ್ದಾರೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿಗಳಾದ ಕಾರ್ಮಿಕರು ಕೆಲಸದ ನಿಮಿತ್ತ ನಿನ್ನೆ ಅಡ್ಕಾರಿಗೆ ಆಗಮಿಸಿ ಕರಾವಳಿ ಹೋಟೆಲ್ ಎದುರುಗಡೆ ಇರುವ ಅಂಗಡಿಯೊಂದರ ವರಾಂಡದಲ್ಲಿ ಆಶ್ರಯ ಪಡೆದಿದ್ದರು. ಇಂದು ಬೆಳಿಗ್ಗೆ ಅವರಲ್ಲಿ ಚಂದ್ರಪ್ಪ, ರೇಗಪ್ಪ, ವೆಂಕಪ್ಪ, ಮಾಂತೇಶ್ ಎಂಬವರು ಕಾರ್ಮಿಕರು ರಸ್ತೆ ಬದಿ ನಿಂತಿದ್ದರೆನ್ನಲಾಗಿದೆ.

ಬೆಳಗ್ಗೆ ಹುಣಸೂರು ಕಡೆಯಿಂದ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಬಂದು ರಸ್ತೆ ಬದಿ ನಿಂತಿದ್ದ ಈ ಕಾರ್ಮಿಕರಿಗೆ ಡಿಕ್ಕಿ ಹೊಡೆದು ಪಕ್ಕದಲ್ಲಿ ನಿಂತಿದ್ದ ಲಾರಿಗೂ ಡಿಕ್ಕಿ ಹೊಡೆಯಿತು.

ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರಿಗೂ ಗಾಯಗಳಾಗಿದ್ದು ಮೂವರಿಗೆ ಗಂಭೀರ ಗಾಯಗಳಾಗಿತ್ತು. ಗಾಯಾಳುಗಳನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಈ ಪೈಕಿ ಚಂದ್ರಪ್ಪ ಅಲ್ಲಿ ಸಾವನ್ನಪ್ಪಿದ್ದರು. ವೆಂಕಪ್ಪರಿಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು ಅವರಿಗೆ ಸುಳ್ಯದಲ್ಲೇ ಚಿಕಿತ್ಸೆ ಕೊಡಿಸಲಾಯಿತು. ರೇಗಪ್ಪ, ಮಾಂತೇಶ್ ಅವರನ್ನು ಮಂಗಳೂರಿಗೆ ಕೊಂಡೊಯ್ಯಲಾಗಿದ್ದು, ಅವರಿಬ್ಬರೂ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.