ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಪ್ರಭಾವಳಿ ಹಾಗೂ ಕಾಲಭೈರವೇಶ್ವರ ಗುಡಿ ನಿರ್ಮಾಣದ ಕೊಡುಗೆ

0

ಆಂಧ್ರಪ್ರದೇಶದ ಎ.ಎಂ.ಆರ್. ಗ್ರೂಪ್ ನ ಎ. ಮಹೇಶ್ ರೆಡ್ಡಿ ಘೋಷಣೆ

ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಪ್ರಭಾವಳಿ ಹಾಗೂ ಕಾಲಭೈರವೇಶ್ವರ ಗುಡಿ ನಿರ್ಮಾಣದ ಕೊಡುಗೆ ನೀಡುವುದಾಗಿ ಆಂಧ್ರಪ್ರದೇಶದ ಎ.ಎಂ.ಆರ್. ಗ್ರೂಪ್ ನ ಎ. ಮಹೇಶ್ ರೆಡ್ಡಿ ಘೋಷಣೆ ಮಾಡಿದ್ದಾರೆ.
ಇಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಅವರು ಕರೆದ ಪತ್ರಿಕಾ ಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.


ಆಶ್ಲೇಷ ನಕ್ಷತ್ರದ ಶುಭದಿನದಂದು ಶ್ರೀ ದೇವಳಕ್ಕೆ ಆಗಮಿಸಿದ ಹೈದರಾಬಾದ್ ಎ.ಎಂ.ಆರ್. ಇಂಡಿಯಾ ಲಿಮಿಟೆಡ್ನ ಎ. ಮಹೇಶ್ ರೆಡ್ಡಿ ಅವರು ಮುಂದಿನ ದಿನಗಳಲ್ಲಿ ದೇವಳದ ಸುತ್ತುಪೌಳಿ ನಿರ್ಮಾಣದ ಸಂದರ್ಭದಲ್ಲಿ ತಾನು ಕಾಲಭೈರವೇಶ್ವರ ಗುಡಿಯನ್ನು ನಿರ್ಮಿಸಿ ಕೊಡುವುದಾಗಿ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಪ್ರಭಾವಳಿಯನ್ನು ನೀಡುವುದಾಗಿ ತಿಳಿಸಿದರು. ಅವರು ಕಳೆದ ಕೆಲ ದಿನಗಳ ಹಿಂದೆ ಪುಂಗನೂರು ತಳಿಯ ಗೋವುಗಳನ್ನ ಈ ದೇವಳಕ್ಕೆ ಹಸ್ತಾಂತರಿಸಿದ್ದರು. ಪುಂಗನೂರು ತಳಿಯ ಗೋವುಗಳನ್ನು ಈ ದೇವಳದಲ್ಲಿ ನಡೆಯುವ ಗೋಪೂಜೆ ಹಾಗೂ ಮುಂದೆ ಸರ್ಪ ಸಂಸ್ಕಾರ ಯಾಗ ಶಾಲೆಯಲ್ಲಿ ನಡೆಯುವ ಗೋಪೂಜೆಗೆ ಕೂಡ ಉಪಯೋಗಿಸಿಕೊಳ್ಳುವುದಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ತಿಳಿಸಿದರು.

ಈಗಾಗಲೇ ಈ ದೇವಳದ ಅನ್ನದಾನ ಶಾಲೆಗೆ ಬೇಕಾಗುವ ಅನ್ನದಾನ ತಯಾರಿಸುವ ಪರಿಕರಗಳನ್ನು ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನೀಡಿರುತ್ತಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಹೇಶ್ ರೆಡ್ಡಿ ಅವರ ಧರ್ಮಪತ್ನಿ ಶ್ರೀಮತಿ ಎ. ರಾಧಿಕಾ ,ಶ್ರೀ ನಂದಕಿಶೋರ್ ರೆಡ್ಡಿ ನೆಲ್ಲೂರು ,ವ್ಯವಸ್ಥಾಪನ ಸಮಿತಿಯ ಸದಸ್ಯರುಗಳಾದ ವನಜ.ವಿ.ಭಟ್, ಶೋಭಾ ಗಿರಿಧರ್, ಮನೋಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.