ಗುತ್ತಿಗಾರು : ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ

0


ತಂದೆ ಮನೆ ಬಿಟ್ಟು ಹೋದ ಕೊರಗಿನಿಂದ ಆತ್ಮಹತ್ಯೆ ಶಂಕೆ


ಮಗನ ಸಾವಿನ ಸುದ್ದಿ ತಿಳಿದು ಊರಿಗೆ ಬಂದ ತಂದೆ


ನಿನ್ನೆ ಗುತ್ತಿಗಾರಿನ ಆಚಳ್ಳಿಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸಿರಿಯಾಕ್ ಮ್ಯಾಥ್ಯೂ ಅವರ ಪುತ್ರ ಸೈಬಿನ್ ಸಿರಿಯಾಕ್ ಅವರ ಮೃತದೇಹದ ಅಂತ್ಯಸಂಸ್ಕಾರ ಇನ್ನಷ್ಟೇ ನಡೆಯಬೇಕಾಗಿದೆ. ಈ ಮಧ್ಯೆ ಮೂರು ತಿಂಗಳ ಹಿಂದೆ ಮನೆಬಿಟ್ಟು ಹೋಗಿದ್ದ ಸಿರಿಯಾಕ್ ಮ್ಯಾಥ್ಯೂ ಗುತ್ತಿಗಾರಿಗೆ ಬಂದಿರುವುದಾಗಿ ತಿಳಿದುಬಂದಿದೆ.


ಗುತ್ತಿಗಾರಿನ ಆಚಳ್ಳಿಯ ಸಿರಿಯಾಕ್ ಮ್ಯಾಥ್ಯೂ ರವರ ಮಗ ಸೈಬಿನ್ ಸಿರಿಯಾಕ್ ಪೆಟ್ರೋಲ್ ಸುರಿದು ನಿನ್ನೆ ಮಧ್ಯಾಹ್ನ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂಜೆಯ ವೇಳೆಗೆ ಈ ಪ್ರಕರಣ ಬೆಳಕಿಗೆ ಬಂದಿತ್ತು. ಸಿರಿಯಾಕ್ ಮ್ಯಾಥ್ಯೂ ಅವರು ೩ ತಿಂಗಳ ಹಿಂದೆ ಮನೆಬಿಟ್ಟು ಹೋಗಿದ್ದರು. ಇದರಿಂದ ಸೈಬಿನ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರೆನ್ನಲಾಗಿದೆ. ತಂದೆ ಮನೆಬಿಟ್ಟು ಹೋದ ಪ್ರಕರಣದಲ್ಲಿ ತನ್ನನ್ನು ಸಮಾಜ ಅಪರಾಧಿಯಂತೆ ನೋಡುತ್ತಿರುವುದಾಗಿ ಅವರು ಕೆಲವರಲ್ಲಿ ಹೇಳಿಕೊಂಡಿದ್ದರೆನ್ನಲಾಗಿದೆ. ಸೈಬಿನ್ ಅವರ ಪತ್ನಿ ತಿಂಗಳ ಹಿಂದೆ ಅವರ ಮನೆಗೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ಅವರೊಬ್ಬರೇ ಇದ್ದರು.


ಮೃತದೇಹವನ್ನು ಪೋಸ್ಟ್‌ಮಾರ್ಟಂಗಾಗಿ ಸುಳ್ಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿಂದ ಮೃತದೇಹ ಬಂದ ಬಳಿಕ ಗುತ್ತಿಗಾರು ಚರ್ಚ್‌ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ. ಈ ಮಧ್ಯೆ ಮಗನ ಸಾವಿನ ಸುದ್ದಿ ಗೊತ್ತಾಗಿ ಸಿರಿಯಾಕ್ ಮ್ಯಾಥ್ಯೂ ಅವರು ಗುತ್ತಿಗಾರಿಗೆ ಬಂದಿರುವುದಾಗಿ ಮಾಹಿತಿ ಲಭಿಸಿದೆ.