ಅರಂಬೂರು ಮೂಕಾಂಬಿಕಾ ಭಜನಾ ಮಂದಿರದ ವಠಾರದಲ್ಲಿ 14 ನೇ ವರ್ಷದ ವಿಜ್ರಂಭಣೆಯ ಅಯ್ಯಪ್ಪ ದೀಪೋತ್ಸವ

0

ಅರಂಬೂರು ಸಾರ್ವಜನಿಕ ಶ್ರೀ ಅಯ್ಯಪ್ಪ ಸೇವಾ ಸಮಿತಿ ಮತ್ತು ಶ್ರೀ ಅಯ್ಯಪ್ಪ ದೀಪೋತ್ಸವ ಸಮಿತಿಯ ಆಶ್ರಯದಲ್ಲಿ 14 ನೇ ವರ್ಷದ ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೀಪೋತ್ಸವವು ಡಿ.02 ರಂದು ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದ ವಠಾರದಲ್ಲಿ ಡಿ.ನಾರಾಯಣ ಗುರುಸ್ವಾಮಿ ದೊಡ್ಡೇರಿ ಮತ್ತು ಯಂ. ಈಶ್ವರ ಗುರುಸ್ವಾಮಿ ಮಜಿಗುಂಡಿ ಯವರ ನೇತೃತ್ವದಲ್ಲಿ ವಿಜ್ರಂಭಣೆಯಿಂದ ಜರುಗಿತು.

ಡಿ.2 ರಂದು ಪೂರ್ವಾಹ್ನ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವಾಗಿ ದೀಪಾರಾಧನೆಯಾಗಿ ಉಷಾ ಪೂಜೆಯು ನಡೆಯಿತು. ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.
ಸಂಜೆ ಅಯ್ಯಪ್ಪ ವೃತಧಾರಿಗಳ ಪಾಲ್ ಕೊಂಬು ಮೆರವಣಿಗೆಯು ಸರಳಿಕುಂಜ ಗಣೇಶ್ ಇಂಡಸ್ಟ್ರೀಸ್ ಬಳಿಯಿಂದ ಹೊರಟು ರಾಜ್ಯ ಹೆದ್ದಾರಿಯಲ್ಲಿ ಸಾಗಿತು. ಬಾಲಕ ಬಾಲಕಿಯರ ದೀಪಾರಾಧನೆ ಚೆಂಡೆ ವಾದ್ಯಘೋಷಗಳೊಂದಿಗೆ ಬೆಳಕಿನ ಪ್ರಭಾವಳಿ ಹಾಗೂ ಸಿಡಿಮದ್ದು ಪ್ರದರ್ಶನದೊಂದಿಗೆ ಭಜನಾ ಮಂದಿರದ ಮುಂಭಾಗದಲ್ಲಿ ಅಯ್ಯಪ್ಪ ಸ್ವಾಮಿಗಳು ನಿರ್ಮಿಸಿದ ಅಯ್ಯಪ್ಪ ಸ್ವಾಮಿಯ ಮಂಟಪದ ತನಕ ಸಾಗಿ ಬಂತು.
ಬಳಿಕ ಭಜನಾ ಮಂದಿರದಲ್ಲಿ ಪ್ರತಿ ಶನಿವಾರದಂದು ನಡೆಯುವ ಭಜನಾ ಸೇವೆಯು ಆಕರ್ಷಕ ಕುಣಿತ ಭಜನೆಯೊಂದಿಗೆ ನಡೆದು ಮಂಗಳಾರತಿಯಾಗಿ ಪ್ರಸಾದ ವಿತರಣೆಯಾಗಿ ರಾತ್ರಿ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯು ನೆರವೇರಿತು.
ಅಯ್ಯಪ್ಪ ವೃತಧಾರಿಗಳಿಂದ ಅಗ್ನಿ ಸೇವೆಗೆ ನಿರ್ಮಿಸಲಾದ ಮೇಲೆರಿಗೆ ಅಗ್ನಿಸ್ಪರ್ಶ ಮಾಡಲಾಯಿತು.
ಈ ಸಂದರ್ಭದಲ್ಲಿ
ವಿಶೇಷವಾಗಿ ಅಯ್ಯಪ್ಪ ವೃತಧಾರಿಗಳಿಂದ ಅಪ್ಪ ಸೇವೆಯು ನಡೆಯಿತು.
ಡಿ.3 ರಂದು ಪ್ರಾತ:ಕಾಲ ಅಯ್ಯಪ್ಪವೃತಧಾರಿಗಳಿಂದ ಅಗ್ನಿ ಸೇವೆಯು ನಡೆದು ಮಂಗಳಾರತಿಯೊಂದಿಗೆ ದೀಪವಿಸರ್ಜನೆಯಾಯಿತು. ಸುಮಾರು 400 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪ ವೃತಧಾರಿಗಳು ಸೇವೆಯಲ್ಲಿ ಪಾಲ್ಗೊಂಡರು.
ರಾತ್ರಿ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಬಜ್ಪೆ ಇವರಿಂದ “ದೇವು ಪೂಂಜ ಪ್ರತಾಪ” ಎಂಬ ತುಳು ಯಕ್ಷಗಾನ ಬಯಲಾಟ ಪ್ರದರ್ಶನವಾಯಿತು.
ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಭಜನಾ ಮಂದಿರದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಅಯ್ಯಪ್ಪ ಸೇವಾ ಸಮಿತಿಯಕಾರ್ಯಾಧ್ಯಕ್ಷರು,ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಿದರು.