ಜಾಲ್ಸೂರು: ಕೆಮನಬಳ್ಳಿ ಪರಿಸರದಲ್ಲಿ ಒಂಟಿ ಸಲಗ ದಾಳಿ ಕೃಷಿ ನಾಶ

0

ಕೆಮನಬಳ್ಳಿ ಫಾಲ್ಸ್ ಬಳಿ ಕಾಡಿನಲ್ಲಿ ಬೀಡುಬಿಟ್ಟಿರುವ ಕಾಡಾನೆ

ಜಾಲ್ಸೂರು ಗ್ರಾಮದ ಕೆಮನಬಳ್ಳಿ ಪರಿಸರದಲ್ಲಿ ಒಂಟಿ ಸಲಗವೊಂದು ದಾಳಿ ನಡೆಸಿ, ಸ್ಥಳೀಯರ ಕೃಷಿ ನಾಶಗೊಳಿಸಿದ ಘಟನೆ ಜ.5ರಂದು ರಾತ್ರಿ ಸಂಭವಿಸಿದೆ.

ಕೆಮನಬಳ್ಳಿಯ ಜಯಾನಂದ ಅವರ ತೋಟಕ್ಕೆ ದಾಳಿ ನಡೆಸಿ, ಒಟ್ಟು ಆರು ತೆಂಗಿನ ಸಸಿಗಳನ್ನು ಹಾನಿಗೊಳಿಸಿದ್ದು, ತೋಟದಲ್ಲಿದ್ದ ಜಯಾನಂದರ ತಂದೆಯ ಸ್ಮಾರಕವನ್ನು ಮೆಟ್ಟಿ ಹಾನಿಗೊಳಿಸಿದೆ.‌


ಅಲ್ಲದೇ, ಸ್ಥಳೀಯ ಸದಾನಂದ ಮಣಿಯಾಣಿ ಅವರ ತೋಟದಲ್ಲಿ ಬೇಲಿ , ಜ್ಯೋತಿರಾಣಿ ಅವರ ಮನೆಯ ತಂತಿಬೇಲಿ ನಾಶಮಾಡಿದೆ.

ಪಂಜಿಕಲ್ಲು, ಮುರೂರು ಹಾಗೂ ಬೆಳ್ಳಿಪ್ಪಾಡಿ ಭಾಗದಲ್ಲಿ ಕೃಷಿಕರ ತೋಟಕ್ಕೆ ಹಾನಿ ಮಾಡುತ್ತಿದ್ದ ಒಂಟಿ ಸಲಗ ಅಲ್ಲಿಂದ ಕನಕಮಜಲು ದೇರ್ಕಜೆ, ಕುದ್ಕುಳಿ, ಕಾಪಿಲ, ಮುಗೇರು , ಪೆರ್ನಾಜೆ, ಪೆರ್ಲಂಪಾಡಿ, ಕೊಳ್ತಿಗೆ ಮೂಲಕ ಇದೀಗ ಕೆಮನಬಳ್ಳಿಗೆ ತಲುಪಿದ್ದು, ಅಲ್ಲಿ ಕೃಷಿಕರ ನಿದ್ದೆಗೆಡಿಸುತ್ತಿದೆ.

ಕೆಮನಬಳ್ಳಿ ಫಾಲ್ಸ್ ಸಮೀಪದ ಕಾಡಿನಲ್ಲಿ ಹಗಲುಹೊತ್ತಿನಲ್ಲಿ ಈ ಒಂಟಿ ಆನೆ ಬಿಡಾರ ಹೂಡಿದ್ದು, ರಾತ್ರಿ ವೇಳೆ ಕೃಷಿಕರ ತೋಟಕ್ಕೆ ದಾಳಿ ನಡೆಸುತ್ತಿದೆ.