ಬಿಜೆಪಿ ಮಂಡಲ ಅಧ್ಯಕ್ಷರ ನೇಮಕದ ಕುರಿತು ಅಸಮಾಧಾನ ಹಿನ್ನೆಲೆ

0

ಸುಳ್ಯ‌ ಬಿಜೆಪಿ ಮಂಡಲ ಸಮಿತಿಗೆ ನೂತನ ಅಧ್ಯಕ್ಷರಾಗಿ ವೆಂಕಟ್ ವಳಲಂಬೆಯವರನ್ನು ನೇಮಕಗೊಳಿಸಿದ ಬೆನ್ನಲ್ಲೇ ಸುಳ್ಯ‌ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ ಶಮನಕ್ಕೆ ಇಂದು ಪಕ್ಷದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲರು ಸುಳ್ಯಕ್ಕೆ ಆಗಮಿಸಿ ಸುದೀರ್ಘ ‌ಮಾತುಕತೆ ನಡೆಸಿದ್ದಾರೆ.

ಬೆಳಗ್ಗೆ ಸುಳ್ಯಕ್ಕೆ ಆಗಮಿಸಿದ ಸತೀಶ್‌ ಕುಂಪಲರು ಸುಳ್ಯ‌ ಬಿಜೆಪಿ ಕೋರ್‌ ಕಮಿಟಿಯವರೊಂದಿಗೆ‌ ಸಮಾಲೋಚನೆ ‌ನಡೆಸಿದರು. ಬಿಜೆಪಿ ಮಂಡಲ ನಿರ್ಗಮನಾಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ ಎಸ್.ಎನ್.ಮನ್ಮಥ, ವೆಂಕಟ್‌ ದಂಬೆಕೋಡಿ, ಸುಭೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿಯವರೊಂದಿಗೆ‌ ಸುದೀರ್ಘ ಸಮಾಲೋಚನೆ ನಡೆಸಿದರು. ಸುಳ್ಯ‌ದ ನಾಯಕರು ನೂತನ ಅಧ್ಯಕ್ಷರ ಆಯ್ಕೆಯ ಸಂದರ್ಭ ಮಂಡಲ ಸಮಿತಿಯೊಂದಿಗೆ ಚರ್ಚಿಸದಿರುವ ಕುರಿತು ಇಂದು ಕೂಡಾ‌ ಅಸಮಾಧಾನ ಮುಂದಿಟ್ಟರೆಂದು ಹೇಳಲಾಗಿದೆ. ಮಧ್ಯಾಹ್ನದವರೆಗೆ ಮಾತುಕತೆ ನಡೆಯಿತು.

ಮಧ್ಯಾಹ್ನ ಕೋರ್ ಕಮಿಟಿ ಸಭೆ ಮುಗಿದ ಬಳಿಕ, ಮಂಡಲ ಅಧ್ಯಕ್ಷರಾಗಿ ನೇಮಕಗೊಂಡಿರುವ ವೆಂಕಟ್ ವಳಲಂಬೆಯವರು‌ ಬಿಜೆಪಿ ಕಚೇರಿಗೆ ಆಗಮಿಸಿದರು. ಬಳಿಕ ಅವರೊಂದಿಗೆ ಜಿಲ್ಲಾಧ್ಯಕ್ಷರು ‌ಸಮಾಲೋಚನೆಗೆ ಮುಂದಾದರು.

ಈ ಸಂದರ್ಭದಲ್ಲಿ ಬಿಜೆಪಿ ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ಇದ್ದರು.