ದೇಶದ ದೊಡ್ಡ ಪವಿತ್ರ ಗ್ರಂಥ ಸಂವಿಧಾನ – ಅದರ ಆಶಯದಂತೆ ನಡೆಯಬೇಕು : ಸುಧೀರ್ ಕುಮಾರ್ ಮುರೊಳ್ಳಿ

0

ಸುಳ್ಯದಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮ

ತಾಲೂಕು ಕಚೇರಿ ಎದುರು ಡಾ.ಬಿ.ಆರ್. ಅಂಬೇಡ್ಕರ್ ‌ಪುತ್ಥಳಿಗೆ ಮನವಿ

ಭಾರತ ದೇಶದ ಸತ್ಪ್ರಜೆಯಾಗಿ ಬಾಳುವವನಿಗೆ ಸಂವಿಧಾನ ಬೇಕು. ಪ್ರತೀ ಜಾತಿ, ಧರ್ಮ ಗಳಿಗೆ ಆದರದೇ ಆದ ಗ್ರಂಥಗಳಿದ್ದರೆ, ಈ ದೇಶದ ಎಲ್ಲವರು ಜತೆಯಾಗಿ ಬಾಳಲು ಕಾರಣವಾಗಿರುವ ಸಂವಿಧಾನ ದೇಶದ ದೊಡ್ಡಗ್ರಂಥ. ಅದನ್ನು ಕಾಪಾಡುವ ಹೊಣೆಗಾರಿಕೆಯೊಂದಿಗೆ ಸಂವಿಧಾನದ ಆಶಯದಂತೆ ನಡೆಯಬೇಕು ಎಂದು ನ್ಯಾಯವಾದಿ, ವಾಗ್ಮಿ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.

ಫೆ.20ರಂದು ಕಂದಾಯ ಹಾಗೂ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸುಳ್ಯ ಕೆ.ವಿ.ಜಿ. ಪುರಭವನದಲ್ಲಿ ನಡೆದ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ದಿಕ್ಸೂಚಿ‌ ಭಾಷಣಗಾರರಾಗಿದ್ದರು.

ಅಸ್ಪ್ರಶ್ಯತೆ, ಅಸಮಾನತೆ, ಸ್ತ್ರೀ ಶೋಷಣೆ ಈ ದೇಶದಲ್ಲಿತ್ತು. ಸಂವಿಧಾನ ಬಂದ ಬಳಿಕ ಕನಸು ಕಾಣುವ ಮತ್ತು ಅದನ್ನು ಗುರಿ ತಲುಪಲು ಎಲ್ಲರಿಗೂ ಸಾಧ್ಯವಾಯಿತು. ದೇಶದಲ್ಲಿ ನಮ್ಮ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ, ವಿವಿಧತೆಗಳನ್ನು ಇಂದಿಗೂ ಉಳಿಸಿಕೊಟ್ಟಿರುವುದು ಸಂವಿಧಾನ ಎಂದ ಅವರು, ಈ ಸಂವಿಧಾನವನ್ನು ಉಳಿಸುವ ಹೊಣೆಗಾರಿಗೆ ನಮ್ಮದು. ನಾವು ಭಾರತೀಯರು ಸಂವಿಧಾನದ ಆಶಯದಡಿಯಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಹೇಳಿದರು.

ಸಭಾಧ್ಯಕ್ಷತೆಯಲ್ಲಿ‌ ವಹಿಸಿದ್ದ ಸುಳ್ಯ ತಹಶೀಲ್ದಾರ್ ಮಂಜುನಾಥ್ ಅಧ್ಯಕ್ಷತೆ ವಹಿಸಿ, ಡಾ.ಬಿ.ಆರ್.ಅಂಬೇಡ್ಕರ್ ರ ಭಾವಚಿತ್ರಕ್ಕೆ ಹಾರಾರ್ಪಣೆಗೈದು, ಸಂವಿಧಾನ ಪೀಠಿಕೆ ವಾಚಿಸಿದರು.

ಸುಳ್ಯ ತಾಲೂಕು ಇ.ಒ. ಪರಮೇಶ್, ಸಮಾಜಕಲ್ಯಾಣ ಅಧಿಕಾರಿ ಮೋಹನ್ ಕುಮಾರ್, ಕಾರ್ಮಿಕ ಮುಖಂಡ ಕೆ.ಪಿ.ಜಾನಿ, ನ.ಪಂ. ಮಾಜಿ ಅಧ್ಯಕ್ಷರುಗಳಾದ ಎಂ.ವೆಂಕಪ್ಪ ಗೌಡ, ವಿನಯ ಕುಮಾರ್ ಕಂದಡ್ಕ, ಸದಸ್ಯ ಕೆ.ಎಸ್. ಉಮ್ಮರ್, ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ, ಸುಳ್ಯ ಎಸ್.ಐ. ಈರಯ್ಯ ದೂಂತೂರು, ದಲಿತ ಸಂಘಟನೆಗಳ ಜಿಲ್ಲಾ ಮುಖಂಡ ಆನಂದ ಬೆಳ್ಳಾರೆ, ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ.ಲೀಲಾಧರ್ ಡಿ.ವಿ. ಸಂವಿಧಾನದ ಆಶಯದ ಕುರಿತು ಮಾತನಾಡಿದರು.

ಕೆಡಿಪಿ ಸದಸ್ಯೆ ಸುಜಯ ಕೃಷ್ಣ, ಸುಳ್ಯ‌ ನಗರ ಪಂಚಾಯತ್ ಸದಸ್ಯರುಗಳಾದ ಬುದ್ಧ ನಾಯ್ಕ, ಶರೀಫ್ ಕಂಠಿ, ಧೀರಾ ಕ್ರಾಸ್ತ, ಪ್ರವಿತಾ ಪ್ರಶಾಂತ್, ಶಿಲ್ಪಾ ಸುದೇವ್, ಶಶಿಕಲಾ ನೀರಬಿದಿರೆ, ಸುಶೀಲ ಕಲ್ಲುಮುಟ್ಲು, ಶೀಲಾ ಕುರುಂಜಿ, ಕೃಷಿ ಸಹಾಯಕ ನಿರ್ದೇಶಕ ಗುರುಪ್ರಸಾದ್, ಎ.ಎ.ಪಿ.ಯ ಸುಮನಾ ಬೆಳ್ಳಾರ್ಕರ್ ವೇದಿಕೆಯಲ್ಲಿ ಇದ್ದರು.

ಅಂಬೇಡ್ಕರ್ ಪ್ರತಿಮೆ : ಸುಳ್ಯ ತಾಲೂಕು‌ ಕಚೇರಿ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಒತ್ತಾಯಿಸಿ ಕಾರ್ಮಿಕ ಮುಖಂಡ ಕೆ.ಪಿ. ಜಾನಿ ನೇತೃತ್ವದಲ್ಲಿ ತಹಶೀಲ್ದಾರ್ ರಿಗೆ ಮನವಿ ಮಾಡಲಾಯಿತು. ಮನವಿ ಸ್ವೀಕರಿಸಿದ ತಹಶೀಲ್ದಾರ್, ತಾಲೂಕು ಕಚೇರಿ ಎದುರು‌ ಜಾಗ ಇದೆ. ಈ ಕುರಿತು‌ ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ಚಿಂತಕ ಲಕ್ಷ್ಮೀಶ್ ಗಬಲಡ್ಕ ಪ್ರಾಸ್ತಾವಿಕ ಮಾತನಾಡಿದರು. ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಎಂ.ಹೆಚ್. ಸ್ವಾಗತಿಸಿದರು. ಅಶ್ರಫ್ ವಂದಿಸಿದರು. ಲೂಕಾಸ್ ಟಿ.ಐ. ಕಾರ್ಯಕ್ರಮ ನಿರೂಪಿಸಿದರು.