ದೇವರಕೊಲ್ಲಿ: ಕಾರು -ಬೈಕ್ ಮಧ್ಯೆ ಭೀಕರ ಅಪಘಾತ

0

ಗಂಭೀರವಾಗಿ ಗಾಯಗೊಂಡ ಮಡಿಕೇರಿ ಮೂಲದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮದೆನಾಡು ಗ್ರಾಮದ ದೇವರಕೊಲ್ಲಿಯ ಗಾರೆಮುರಿ ಎಂಬಲ್ಲಿ ಕಾರು ಮತ್ತು ಬೈಕ್ ಮಧ್ಯೆ ಮುಖಾಮುಖಿ ಭೀಕರ ಅಪಘಾತ ಸಂಭವಿಸಿದ ಪರಿಣಾಮವಾಗಿ ‌ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದ ಘಟನೆ ಎ.26ರಂದು ಅಪರಾಹ್ನ ಸಂಭವಿಸಿದೆ.

ಮಡಿಕೇರಿಯಿಂದ ವಿಟ್ಲಕ್ಕೆ ಮತ ಚಲಾಯಿಸಲು ಬರುತ್ತಿದ್ದ ದೀಕ್ಷಿತ್ ಶೆಟ್ಟಿ ಎಂಬವರು ಚಲಾಯಿಸುತ್ತಿದ್ದ ಕಾರು ದೇವರಕೊಲ್ಲಿಯ ಗಾರೆಮುರಿ ಎಂಬಲ್ಲಿಗೆ ತಲುಪಿದಾಗ ಚಾಲಕನ ನಿಯಂತ್ರಣ ಕಳೆದು ವಿರುದ್ದ ದಿಕ್ಕಿನಲ್ಲಿ ಸಂಚರಿಸಿ ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ. ಮಡಿಕೇರಿಯ ಚೇರಂಬಾಣೆ ನಿವಾಸಿ ಮಂಜುನಾಥ್ ಎಂಬವರು ಚಲಾಯಿಸುತ್ತಿದ್ದ ಬೈಕಿಗೆ ಕಾರು ಢಿಕ್ಕಿಯಾಗಿದ್ದು, ರಸ್ತೆಗೆ ಎಸೆಯಲ್ಪಟ್ಟು ತಲೆ ಹಾಗೂ ಕೈ -ಕಾಲುಗಳಿಗೆ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಮಂಜುನಾಥ್ ಅವರು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದುಬಂದಿದೆ.

ಕಾರಿನಲ್ಲಿದ್ದ ಚಾಲಕ ದೀಕ್ಷಿತ್ ಶೆಟ್ಟಿ ಅವರು ಸೇರಿದಂತೆ ನಾಲ್ವರು ಪ್ರಯಾಣಿಕರಿದ್ದು, ಅವರೆಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಅಂಬ್ಯುಲೆನ್ಸ್ ಮೂಲಕ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.