ಸಾರಕೆರೆ ಕಿಂಡಿ ಅಣೆಕಟ್ಟು ಪರಿಶೀಲಿಸಿದ ಇ.ಒ ಮತ್ತು ತಹಶಿಲ್ದಾರ್

0

ಅಣೆಕಟ್ಟಿನಲ್ಲಿ‌ ಸಿಲುಕಿದ ಮರದ ದಿಣ್ಣೆಗಳನ್ನು ತೆರವುಗೊಳಿಸಿ,ಸ್ಲ್ಯಾಬ್
ತಾತ್ಕಾಲಿಕ ದುರಸ್ತಿಗೆ ಸೂಚನೆ

ಪೆರುವಾಜೆ ಮತ್ತು ಕೊಡಿಯಾಲ ಗ್ರಾಮಕ್ಕೆ ಸಂಬಂಧಿಸಿದ ಸಾರಕೆರೆ ಎಂಬಲ್ಲಿ ಗೌರಿ ಹೊಳೆಗೆ ಕಳೆದ 40 ವರ್ಷಗಳ ಹಿಂದೆ ನಿರ್ಮಿಸಲಾದ ಕಿಂಡಿ ಅಣೆಕಟ್ಟು ಇದೀಗ ಶಿಥಿಲಗೊಂಡಿದೆ.

ಇತ್ತೀಚೆಗೆ ಸುರಿದ ಮಳೆಗೆ ಹೊಳೆಯಲ್ಲಿ ನೀರು ತುಂಬಿ ಹರಿದು ಮರದ ದಿಣ್ಣೆಗಳು ಮತ್ತು ಕಸ ಕಡ್ಡಿಗಳು ಕೊಚ್ಚಿಕೊಂಡು ಬಂದು ಅಣೆಕಟ್ಟಿನ ಪಿಲ್ಲರ್ ಗಳಿಗೆ ಬಡಿದು ಸಿಲುಕಿದೆ.
ಹೊಳೆಯ ಮತ್ತೊಂದು ಭಾಗದಲ್ಲಿ ಸುಮಾರು 100 ಕ್ಕೂ ಮನೆಗಳಿದ್ದು ಕಿಂಡಿ ಅಣೆಕಟ್ಟಿನ ಮೇಲೆ ನಡೆದುಕೊಂಡು ಹೋಗ ಬೇಕಾಗಿದೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ಬೆಳ್ಳಾರೆ ಬರುವ ಸಾರ್ವಜನಿಕರು ಇದರ ಮೇಲಿನಿಂದ ನಡೆದುಕೊಂಡು ಬರಬೇಕು.ಅಣೆಕಟ್ಟಿನ ಮೇಲ್ಭಾಗದ ಸ್ಲ್ಯಾಬ್ ಗಳು ಅಲುಗಾಡುತ್ತಿವೆ. ಮಳೆಗಾಲದಲ್ಲಿ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಪಂಚಾಯತ್ ವತಿಯಿಂದ ಎರಡು ಬದಿಯಲ್ಲಿ ಅಣೆಕಟ್ಟಿನ ಮೇಲೆ ಸಂಚರಿಸದಂತೆ ಎಚ್ಚರಿಕೆ ಬ್ಯಾನರ್ ಅಳವಡಿಸಲಾಗಿದೆ‌. ಈ ಬಗ್ಗೆ ವಿಷಯ ತಿಳಿದು


ಸ್ಥಳಕ್ಕೆ ಭೇಟಿ ನೀಡಿದ ತಹಶಿಲ್ದಾರ್ ಮಂಜುನಾಥ ಹಾಗೂ ಇ.ಒ ರಾಜಣ್ಣ ರವರು ಅಣೆಕಟ್ಟಿನಲ್ಲಿ‌ ಸಿಕ್ಕಿ ಹಾಕಿಕೊಂಡ ಮರದ ದಿಣ್ಣೆಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಸ್ಲ್ಯಾಬ್ ತುಂಡಾಗಿರುವ ಭಾಗದಲ್ಲಿ
ತಾತ್ಕಾಲಿಕವಾಗಿ ಅಡಿಕೆ ಮರಗಳನ್ನು ಹಾಕಿ ನಡೆದುಕೊಂಡು ಹೋಗಲು ವ್ಯವಸ್ಥೆ ಮಾಡುವುದು. ವಿಪರೀತ ನೀರಿನ ಹರಿವು ಇರುವ ಸಂದರ್ಭದಲ್ಲಿ ಸಂಚಾರ ನಿಷೇಧಿಸಬೇಕು ಎಂದು ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಅಲ್ಲಿ ಸೇರಿದ ಸ್ಥಳೀಯರು ನಮಗೆ ಒಂದು ಅಟೋ ರಿಕ್ಷಾ ಸಂಚರಿಸುವಂತೆ ಶಾಶ್ವತ ಸೇತುವೆ ನಿರ್ಮಿಸಿಕೊಡುವಂತೆ ಬೇಡಿಕೆ ಇರಿಸಿದರು. ಪ್ರತಿಕ್ರಿಯಿಸಿದ ಇ.ಒ. ರವರುಮುಂದಿನ ಕೆ.ಡಿ.ಪಿ ಸಭೆಯಲ್ಲಿ ಮೈನರ್ ಇರಿಗೇಷನ್ ಯೋಜನೆಯಡಿಯಲ್ಲಿ
ಸೇತುವೆ ನಿರ್ಮಾಣದ ಬಗ್ಗೆ ‌ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪೆರುವಾಜೆ ಪಂಚಾಯತ್ ಪಿ.ಡಿ.ಒ,ಅಮರಮುಡ್ನೂರು ಪಂಚಾಯತ್ ಪಿ.ಡಿ.ಒ, ಬೆಳ್ಳಾರೆ ಪೋಲಿಸ್ ಉಪನಿರೀಕ್ಷಕರು ಮತ್ತು‌ಪಂಚಾಯತ್ ಸಿಬ್ಬಂದಿ ವರ್ಗದವರು‌ ಉಪಸ್ಥಿತರಿದ್ದರು.