ಮಾನವೀಯತೆಯಿಂದ ವಿಶ್ವಶಾಂತಿಯೆಡೆಗೆ

0

ಮೇ 8 : ವಿಶ್ವ ರೆಡ್‍ಕ್ರಾಸ್ ದಿನ

‘ಮಾನವೀಯತೆಯಿಂದಲೇ ವಿಶ್ವಶಾಂತಿ’ ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವದೆಲ್ಲೆಡೆ ಕಾರ್ಯಾಚರಿಸುವ ವಿಶ್ವ ರೆಡ್‍ಕ್ರಾಸ್ ಸಂಸ್ಥೆಯನ್ನು 1863ರಲ್ಲಿ ಶ್ರೀ ಹೆನ್ರಿ ಡ್ಯೂನಾಂಟ್ ಎಂಬಾತ “ಜನರಿಂದ ಜನರಿಗೆ ನೆರವು” ಎಂಬ ಪರಿಕಲ್ಪನೆಯೊಂದಿಗೆ ಹುಟ್ಟಿಹಾಕಿದರು. ಅವರ ಜನ್ಮ ದಿನಾಂಕವಾದ ಮೇ 8ರಂದು ಅವರ ಸವಿನೆನಪಿಗಾಗಿ ವಿಶ್ವದೆಲ್ಲೆಡೆ ವಿಶ್ವ ರೆಡ್‍ಕ್ರಾಸ್ ದಿನ ಎಂದು ಆಚರಿಸಲಾಗುತ್ತದೆ. 1859ರ ಜೂನ್ 24ರಂದು ಆರಂಭವಾದ ‘ಸಲ್ಫರಿನೊ’ ಕದನದ ಗಾಯಾಳುಗಳು ಮತ್ತು ಯುದ್ಧ ಕೈದಿಗಳ ರಣಭೀಕರ ಮನಕಲುಕುವ ದೃಶ್ಯವನ್ನು ಕಂಡ ವ್ಯಾಪಾರಿ ಹೆನ್ರಿ ಡ್ಯೂನಾಂಟ್ ಮಮ್ಮಲ ಮರುಗಿ ಯುದ್ಧಗಾಯಾಳುಗಳ ಸೇವೆಗಾಗಿ ‘ರೆಡ್‍ಕ್ರಾಸ್’ ಸಂಸ್ಥೆಯನ್ನು ಹುಟ್ಟುಹಾಕಿದರು. – ಇಂದು ರೆಡ್‍ಕ್ರಾಸ್ ಸಂಸ್ಥೆ ಜಾಗತಿಕವಾಗಿ ಸಾರ್ವಕಾಲಿಕÀ ಸೇವಾ ಸಂಘಟನೆಯಾಗಿ ಅಗಸದೆತ್ತರಕ್ಕೆ ಬೆಳೆದು ನಿಂತಿದೆ. ಈಗ ಬರೀ ಯುದ್ಧಕಾಲದಲ್ಲಿ ಅಲ್ಲದೆ, ಶಾಂತಿ ಸಮಯದಲ್ಲೂ, ನಿರಂತರವಾಗಿ ವಿಶ್ವದಲ್ಲಿ ಶಾಂತಿ ಕಾಪಾಡಲು ಟೊಂಕ ಕಟ್ಟಿ ನಿಂತಿದೆ. ನಮ್ಮ ಭಾರತದೇಶದಲ್ಲಿ 1920ರಲ್ಲಿ ರೆಡ್‍ಕ್ರಾಸ್ ಸಂಸ್ಥೆ ಉದಯವಾಯಿತು ಮತ್ತು ಕರ್ನಾಟಕ ರಾಜ್ಯದಲ್ಲಿ 1921ರಲ್ಲಿ ರೆಡ್‍ಕ್ರಾಸ್ ಸಂಸ್ಥೆ ಜನುಮ ತಾಳಿತು.
ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಅತ್ಯಂತ ವಿಶೇಷ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ದೇಶದೆಲ್ಲೆಡೆ ಶಾಂತಿ ಕಾಪಾಡುವ ಏಕಮೇವ ಸಂಸ್ಥೆಯಾಗಿ ಬೆಳೆದುನಿಂತಿದೆ. ಪ್ರಾಕೃತಿಕ ವಿಕೋಪಗಳು, ನೈಸರ್ಗಿಕ ವಿಷಮ ಪರಿಸ್ಥಿತಿಗಳು, ನಿರಂತರ ಆರೋಗ್ಯಸೇವೆಗಳು, ರಕ್ತಸಂಗ್ರಹಣಾ ಮತ್ತು ರಕ್ತಪೂರೈಕೆ ಸೇವೆಗಳು, ಹಿರಿಯ ಮತ್ತು ಕಿರಿಯ ರೆಡ್‍ಕ್ರಾಸ್ ಸೇವಾ ಚಟುವಟಿಕೆಗಳು ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ರೆಡ್‍ಕ್ರಾಸ್ ಸಂಘಟನೆಯ ಕಾರ್ಯಕರ್ತರು ಯಾವುದೇ ಜಾತಿ, ಮತ, ಧರ್ಮ ಮತ್ತು ಪಂಗಡಗಳ ಬೇಧಭಾವವಿಲ್ಲದೆ ಸಮಾಜದ ನೊಂದವರ, ಶೋಷಿತರ, ದುರ್ಬಲರ ಮತ್ತು ನಿರ್ಗತಿಕರ ಸೇವೆಗೆ ಸಮರ್ಪಿಸಿಕೊಂಡಿರುತ್ತಾರೆ.
1859ರ ಜೂನ್ 24ರಂದು ಫ್ರಾನ್ಸ್ ಮತ್ತು ಇಟೆಲಿಯ ಸಂಯುಕ್ತ ಸೈನ್ಯ ಹಾಗೂ ಆಸ್ಟ್ರೀಯಾ ದೇಶಗಳ ಸೈನ್ಯಗಳ ನಡುವೆ ರಣಭೀಕರ ಸಲ್ಫರಿನೋ ಕದನ ನಡೆದಿತ್ತು. ಸುಮಾರು 15 ಘಂಟೆಗಳ ಕಾಲ ಜರುಗಿದ ಈ ರುದ್ರಭೀಕರ ಕದನದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಸೈನಿಕರು ಕಾದಾಡಿದ್ದರು. ಸುಮಾರು ಸಾವಿರಗಟ್ಟಲೆ ಸೈನಿಕರು ಈ ಯುದ್ಧದಲ್ಲಿ ಜೀವ ಕಳಕೊಂಡರು ಮತ್ತು ಸಾವಿರಾರು ಮಂದಿ ಗಾಯಗೊಂಡರು. ಈ ರಕ್ತಸಿಕ್ತ ಯುದ್ಧದ ರಣರಂಗದಲ್ಲಿ ಸೈನಿಕರು ನೋವಿನಿಂದ ಚೀರಾಡುತ್ತಿದ್ದಾಗ, ಸಹಾಯಹಸ್ತ ನೀಡಲು ಕೈಗಳೇ ಇರಲಿಲ್ಲ. ವೈದ್ಯಕೀಯ ನೆರವೂ ಇರಲಿಲ್ಲ. ಸತ್ತ ದೇಹಗಳನ್ನು ಸಾಗಿಸಲು ಮತ್ತು ಬದುಕುಳಿದ ಸೈನಿಕರನ್ನು ಉಪಚರಿಸಲು ಜನರೇ ಇರಲಿಲ್ಲ. ವೈದ್ಯಕೀಯ ಸೌಲಭ್ಯದ ಕೊರತೆಯೂ ಕಂಡುಬಂದಿತ್ತು. ಈ ಮನಕಲಕುವ ರುದ್ರಭೀಕರ ದೃಶ್ಯವನ್ನು ಅದೇ ದಾರಿಯಿಂದ ಸಾಗುತ್ತಿದ್ದ ಸ್ವಿಜರ್‍ಲ್ಯಾಂಡ್ ದೇಶದ ವ್ಯಾಪಾರಿ ಹೆನ್ರಿ ಡ್ಯೂನಾಂಟ್ ನೋಡಿ ಬಹಳ ಮರುಕಪಟ್ಟರು. ರಣರಂಗದ ರಕ್ತದೋಕುಳಿ, ನೋವು ಕಿರುಚಾಟ, ನರಳಾಟ ಕಂಡು ಆತನ ಮನಸ್ಸು ಕರಗಿತು. ಸೂರ್ಯಾಸ್ತದ ಸಮಯದಲ್ಲಿ ಅಲ್ಲಿ ಬಂದ ಆತ, ಮರುದಿನ ಸೂರ್ಯೋದಯದ ಮೊದಲು ಸ್ಥಳೀಯ ಜನರು ಹಾಗೂ ಗ್ರಾಮಸ್ಥರ ನೆರವು ಪಡೆದು ಗಾಯಾಳುಗಳನ್ನು ಎತ್ತಿನ ಗಾಡಿಗಳಲ್ಲಿ ಕ್ರಾಸ್ಟೆಗ್ಲಿಯನ್ ಪ್ರದೇಶಕ್ಕೆ ಸಾಗಿಸಿ, ಯುದ್ಧದ ಗಾಯಾಳುಗಳನ್ನು ಮಸೀದಿ, ಚರ್ಚು, ಮಂದಿರ, ಆಶ್ರಮ ಮತ್ತು ಸೇನಾ ಸ್ಥಳಗಳಲ್ಲಿ ಇರಿಸಿ ಉಪಚರಿಸಿದರು. ಪಕ್ಕಾ ವ್ಯಾಪಾರಿಯಾಗಿದ್ದ ಹೆನ್ರಿ ಡ್ಯೂನಾಂಟ್ ಅವರ ವ್ಯಾಪಾರಿಬುದ್ಧಿ, ಜನರ ನೋವು ಚೀರಾಟದಿಂದ ಕರಗಿ, ಮಾನವೀಯತೆಯ ಸಾಕಾರಮೂರ್ತಿಯಾಗಿ ಬದಲಾಗಿಬಿಟ್ಟರು. ಯುದ್ಧದಲ್ಲಿ ಗಾಯಾಳುಗಳಾದ ಸೈನಿಕರನ್ನು ಯಾವುದೇ ದೇಶ, ಜಾತಿ, ಮತ, ಕುಲ-ಗೋತ್ರ, ಬಣ್ಣ, ಧರ್ಮ ಪಂಗಡಗಳ ಭೇಧ ಭಾವ ಮಾಡದೆ ಎಲ್ಲಾ ದೇಶದ, ಧರ್ಮದ ಜನರನ್ನು ಉಪಚರಿಸಿ ಮಾನವೀಯತೆಗೆ ಹೊಸ ಭಾಷೆ ಬರೆದರು. ಒಬ್ಬ ಪಕ್ಕಾವ್ಯಾಪಾರಿಯಾಗಿ ಅಲ್ಜೇರಿಯಾದಲ್ಲಿ ಕಾರ್ನ್‍ಮಿಲ್ ಸ್ಥಾಪಿಸಲು ನೆಪೋಲಿಯನ್ ದೊರೆಯನ್ನು ಕಾಣಲು ಬಂದ ಪಕ್ಕಾ ವ್ಯಾಪಾರಿ, ಮಾನವೀಯತೆಯ ಹರಿಕಾರನಾಗಿ ಬದಲಾಗಿ ರೆಡ್‍ಕ್ರಾಸ್ ಸಂಸ್ಥೆ ಉಗಮಕ್ಕೆ ಕಾರಣಕರ್ತನಾದನು.
ಯುದ್ಧ ಮುಗಿದ ಬಳಿಕವೂ ಯುದ್ಧದ ಭೀಕರತೆ ಹೆನ್ರಿ ಡ್ಯೂನಾಂಟ್ ಮೇಲೆ ಅಗಾಧ ಪರಿಣಾಮ ಬೀರಿತ್ತು. ಜನ ಮರೆತರೂ ಹೆನ್ರಿ ಮಾತ್ರ ಕನಸಲ್ಲೂ ಬೆಚ್ಚಿ ಬೀಳುತ್ತಿದ್ದ. ಯುದ್ಧ ಕಾಲದಲ್ಲಿ ಮಾನವ ಜನಾಂಗ ಅನುಭವಿಸಿದ ಯಾತನೆ ತಪ್ಪಿಸಲು ತನ್ನದೇ ಎರಡು ಅಂಶಗಳನ್ನು ಮುಂದಿಟ್ಟುಕೊಂಡು “ದಿ ಮೆಮೊರಿ ಆಫ್ ಸಾಲ್ಫರಿನೊ’ ಎಂಬ ಪುಸ್ತಕ ಪ್ರಕಟಿಸಿ ವಿಶ್ವದಾದ್ಯಂತ ಹಂಚಿದನು. ಯುದ್ಧಕಾಲದಲ್ಲಿ ಮಾನವೀಯತೆ ಮೆರೆಯಲು ಎರಡು ಕಾರ್ಯಸೂಚಿ ತಯಾರಿಸಿ, ಜಾರಿಗೆ ತರಲು ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ಕರೆನೀಡಿದನು. ಇದರಂತೆ ಅಂತರಾಷ್ಟ್ರೀಯ ಸ್ವಯಂಸೇವಕರ ಸಂಘಟನೆಯನ್ನು ಶಾಂತಿಕಾಲದಲ್ಲಿ ಸ್ಥಾಪಿಸಬೇಕು. ಯುದ್ಧ ಮುಗಿದ ಬಳಿಕ ಗಾಯಾಳುಗಳ ಜಾತಿ, ಮತ, ಧರ್ಮ, ರಾಷ್ಟ್ರೀಯತೆಯನ್ನು ಗಮನಿಸದೆ ಉಪಚರಿಸಬೇಕು. ಗಾಯಾಳುಗಳನ್ನು ಉಪಚರಿಸಲು ಸಾಧ್ಯವಾಗಿಸಲು ರಾಷ್ಟ್ರಗಳು, ಗಾಯಾಳು ಸೈನಿಕರನ್ನು, ವೈದ್ಯರನ್ನು ಮತ್ತು ಸ್ವಯಂ ಸೇವಕರನ್ನು ತಟಸ್ಥರು ಎಂದು ಘೋಷಿಸಿ ಯಾವ ಪಕ್ಷಕ್ಕೂ ಸೇರದವರೆಂದು ಘೋಷಿಸಿ, ಅಂತರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಬೇಕು. ಇವರ ಸಲಹೆ ಮನ್ನಿಸಿ, ಜಿನಿವಾದ. ಸಮಾಜ ಕಲ್ಯಾಣ ಸಂಸ್ಥೆ 5 ಜನರ ಸಮಿತಿ ರಚಿಸಿ ಹೆನ್ರಿಯವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಿತು. ಈ ಸಮಿತಿಯಲ್ಲಿ ಒಬ್ಬ ವೈದ್ಯ, ಒಬ್ಬ ಸೇನಾ ಕಮಾಂಡರ್, ಒಬ್ಬ ವ್ಯಾಪಾರಿ, ಒಬ್ಬ ಸಮಾಜಸೇವಕ ಮತ್ತು ಒಬ್ಬ ಶಿಕ್ಷಕರನ್ನು ಒಳಗೊಂಡಿತ್ತು. 1963, ಅಕ್ಟೋಬರ್ 26ರಂದು ನಡೆದ ಜಿನಿವಾ ಸಮ್ಮೇಳನದಲ್ಲಿ “ಗಾಯಗೊಂಡ ಸೈನಿಕರ ಸಹಕಾರ ಸಂಘ” ಆರಂಭವಾಗಿ ಮುಂದೆ ಮೇ 8ರಂದು ವಿಶ್ವರೆಡ್ ಕ್ರಾಸ್ ಸಂಸ್ಥೆ ಎಂದು ಕರೆಯಲ್ಪಟ್ಟಿತು. ಹೆನ್ರಿ ಡ್ಯೂನಾಂಟ್ ಸೇವೆಗೆ ಮುಂದೆ 1901ರಲ್ಲಿ ನೋಬೆಲ್ ಶಾಂತಿ ಪುರಸ್ಕಾರ ದೊರಕಿತು. ಮುಂದೆ 1910 ಅಕ್ಟೋಬರ್ 30ರಂದು ಹೆನ್ರಿ ಡ್ಯೂನಾಂಟ್ ಹ್ರೇಡನ್ ನಗರದಲ್ಲಿ ಮರಣ ಹೊಂದಿದನು. ಅವರ ಸವಿನೆನಪಿಗಾಗಿ ಮೇ 8 ರಂದು ಅವರ ಜನ್ಮದಿನವಾದ ಮೇ 8ರಂದು ‘ವಿಶ್ವರೆಡ್‍ಕ್ರಾಸ್ ದಿನ’ ಆಚರಣೆ ಆರಂಭವಾಯಿತು.
ಜನತೆಯಿಂದ ಜನತೆಗೆ ನೆರವು ಎಂಬ ವಿಶಾಲ ಪರಿಕಲ್ಪನೆಯೊಂದಿಗೆ, ಮಾನವೀಯತೆಯಿಂದ ವಿಶ್ವಶಾಂತಿ ಎಂಬ ಧ್ಯೇಯವಾಕ್ಯದೊಂದಿಗೆ, 16ರಾಷ್ಟ್ರಗಳ ಸಹಕಾರದಿಂದ ಆರಂಭವಾದ ಸಂಸ್ಥೆ ಇಂದು 200ಕ್ಕೂ ಹೆಚ್ಚು ರಾಷ್ಟ್ರಗಳಿಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದೆ.

ರೆಡ್‍ಕ್ರಾಸ್ ಸಂಸ್ಥೆಯ ಧ್ಯೇಯವಾಕ್ಯಗಳನ್ನು (1) ಮಾನವೀಯತೆ (2) ನಿಷ್ಪಕ್ಷಪಾತ (3)ತಟಸ್ಥತೆ (4) ಸ್ವಾತಂತ್ರ್ಯ (5) ಸ್ವಯಂಪ್ರೇರಿತ ಸೇವೆ (6) ಏಕತೆ (7) ವಿಶ್ವವ್ಯಾಪಕತೆ ಎಂಬುದಾಗಿ ವಿವರಿಸಲಾಗಿದೆ.

ಮಾನವೀಯತೆಯನ್ನೇ ಬಂಡವಾಳವಾಗಿ ಇರಿಸಿ, ಲಾಭನಷ್ಟದ ಲೆಕ್ಕಾಚಾರಗಳನ್ನು ಬದಿಗಿರಿಸಿ, ವಿಶ್ವ ಭಾತೃತ್ವ ಮತ್ತು ಸಹೋದರತ್ವದ ಐಕ್ಯಮಂತ್ರದೊಂದಿಗೆ ವಿಶ್ವದೆಲ್ಲೆಡೆ ವಿಶ್ವವ್ಯಾಪ್ತಿಯಾಗಿ, ಸ್ವತಂತ್ರವಾಗಿ ರಾಜಕೀಯ, ಜನಾಂಗೀಯ, ಧಾರ್ಮಿಕ ವಿಚಾರಗಳನ್ನು ಬದಿಗಿರಿಸಿ, ಎಲ್ಲರನ್ನು ಸಮಾನವಾಗಿ ಕಾಣುವ ಮತ್ತು ಉಪಚರಿಸುವ ಏಕಮೇವ ಸಂಸ್ಥೆ ರೆಡ್‍ಕ್ರಾಸ್ ಆಗಿರುತ್ತದೆ.

ರೆಡ್‍ಕ್ರಾಸ್ ಲಾಂಛನ:

ಬಿಳಿ ಹಿನ್ನೆಲೆಯಲ್ಲಿ ಕೆಂಪು ಕ್ರಾಸ್ ಹೊಂದಿರುವ ಲಾಂಛನ ರೆಡ್‍ಕ್ರಾಸ್ ಸಂಸ್ಥೆಯ ಸಂಕೇತ ಚಿಹ್ನೆ. ಕ್ರಾಸ್‍ನ ಎಲ್ಲಾ ಬಾಹುಗಳು ಪರಸ್ಪರ ಸಮನಾಗಿವೆ. ಈ ಚಿಹ್ನೆಯನ್ನು ಯುದ್ಧ ತಟಸ್ಥ ಸಂಕೇತವೆಂದು ಸಾರ್ವತ್ರಿಕವಾಗಿ ಗುರುತಿಸಲಾಗುತ್ತದೆ. ವೈದ್ಯಕೀಯ ಸೇವೆಗಾಗಿ ಬಳಸುವ ಉಪಕರಣಗಳ ಮೇಲೆ ಮತ್ತು ಧ್ವಜದ ಮೇಲೆ ಈ ಲಾಂಛನ ಬಳಸಬಹುದಾಗಿದೆ. ಯುದ್ಧಕಾಲದಲ್ಲಿ, ಸೇನಾ ದಂಗೆಯ ಸಮಯದಲ್ಲಿ, ಅಗತ್ಯವಿರುವ ಸೇವೆ, ಸಹಕಾರ, ಉಪಕಾರ, ಉಪಚಾರ ಮತ್ತು ತುರ್ತು ವೈದ್ಯಕೀಯ ಸೇವೆ ಒದಗಿಸುವಾಗ, ಈ ಸೇವಾ ಸಂಘಟನೆಯ ಸ್ವಯಂಸೇವಕರು ಈ ಲಾಂಛನ ಬಳಸಿದ್ದಲ್ಲಿ, ಅವರು ಯುದ್ಧದಿಂದ ಹೊರತಾದವರು ಎಂಬ ಸಂದೇಶ ರವಾನೆಯಾಗುತ್ತದೆ. ಒಟ್ಟಿನಲ್ಲಿ ಮಾನವೀಯ ಮತ್ತು ಪರಿಹಾರಕಾರಕ ಸೇವೆ ನೀಡುವ ರೆಡ್‍ಕ್ರಾಸ್ ಸ್ವಯಂ ಸೇವಕರು ಈ ಲಾಂಛನ ಬಳಸುವುದರಿಂದ ಅವರಿಗೆ ‘ತಟಸ್ಥ’ ಎಂಬ ಭಾವನೆ ಬಂದು ಯಾವುದೇ ಅಪಾಯ ಆಗುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಜಾತಿ, ಮತ, ಧರ್ಮ ಜನಾಂಗ ಎಂದು ಜನರು ಬಡಿದಾಡುತ್ತಾ, ನನ್ನದೇ ಧರ್ಮ ಶ್ರೇಷ್ಠ ಎಂದು ಪ್ರತಿಪಾದಿಸುತ್ತಾ, ಜಗಳಾಡುತ್ತಾ, ಮಾನವೀಯ ಮೌಲ್ಯಗಳನ್ನು ಮಣ್ಣು ಮಾಡುತ್ತಿರುವ ಕೆಲಸ ನಮ್ಮ ಮುಂದೆ ಕಂಡುಬರುತ್ತಿದೆ. ಮಾನವೀಯತೆಗಿಂತ ಮಿಗಿಲಾದ ಧರ್ಮ ಇನ್ನೊಂದಿಲ್ಲ, ಮಾನವೀಯತೆ ಇಲ್ಲದ ಧರ್ಮ, ಅದು ಧರ್ಮವೇ ಅಲ್ಲ ಎಂಬ ಭಾವನೆ ಜನರಲ್ಲಿ ದಿನೇ ದಿನೇ ಜೋರಾಗುತ್ತಿದೆ. ಧರ್ಮ ಯಾವುದೇ ಇರಲಿ ಮಾನವೀಯ ಮೌಲ್ಯ ಮತ್ತು ವಿಶ್ವಾಶಾಂತಿಯನ್ನು ಪ್ರತಿಪಾದಿಸುವುದೇ ಜಗತ್ತಿನ ಅತೀ ಶ್ರೇಷ್ಠ ಧರ್ಮವಾಗಲಿ. ಮಾನವೀಯತೆಯನ್ನೇ ಜೀವಾಳ ಮತ್ತು ಬಂಡವಾಳವಾಗಿರಿಸಿ ಧರ್ಮವನ್ನು ಉಳಿಸಿ ಬೆಳೆಸಬೇಕೆಂಬುದೇ ಬಲ್ಲಿದರ ಒಕ್ಕೊರಲಿನ ಅಭಿಲಾಷೆ. ಈ ನಿಟ್ಟಿನಲ್ಲಿ ಮಾನವೀಯತೆಗಾಗಿ ಜೀವನವನ್ನೇ ಮುಡಿಪಾಗಿಸಿ, ಸರ್ವಸ್ವವನ್ನೇ ತ್ಯಾಗ ಮಾಡಿ ರೆಡ್ ಕ್ರಾಸ್ ಸಂಸ್ಥೆಯನ್ನು ಹುಟ್ಟು ಹಾಕಿದ ಮಹಾನ್ ಚೇತನ ಶ್ರೀ ಹೆನ್ರಿ ಡ್ಯೂನಾಂಟ್ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದಲ್ಲಿ ನಾವೆಲ್ಲರೂ ಮಾನವೀಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದುವೇ ಆ ಮಹಾನ್ ಚೇತನಕ್ಕೆ ನೀಡುವ ಬಹುದೊಡ್ಡ ಗೌರವ.

ಡಾ. ಮುರಲೀ ಮೋಹನ ಚೂಂತಾರ್