
ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಶ್ರೀ ಕ್ಷೇತ್ರದ ಪವಿತ್ರ ಮಹಾಪ್ರಸಾದ ಮೂಲಮೃತ್ತಿಕೆ (ಹುತ್ತದ ಮಣ್ಣು)ನ್ನು ತೆಗೆಯಲಾಯಿತು. ಶ್ರೀ ದೇವಳದ ಗರ್ಭಗುಡಿಯಿಂದ ದೇವಳದ ಪ್ರಧಾನ ಅರ್ಚಕರಾ ಸೀತಾರಾಮ ಯಡತ್ತಾಯ ವಿವಿಧ ವೈದಿಕ ವಿದಿವಿಧಾನಗಳೊಂದಿಗೆ ಮುಂಜಾನೆಯ ಶುಭ ಮುಹೂರ್ತದಲ್ಲಿ ಮೂಲಪ್ರಸಾದ ತೆಗೆದರು.









ಕ್ಷೇತ್ರದ ಮೂಲಸ್ಥಾನವಾದ ಗರ್ಭಗುಡಿಯಿಂದ ಈ ಮೃತ್ತಿಕಾ ಪ್ರಸಾದವನ್ನು ದೇವಳದ ಪ್ರಧಾನ ಅರ್ಚಕರು ತೆಗೆದು ಭಕ್ತಾಧಿಗಳಿಗೆ ನೀಡಿದರು. ಮೂಲಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯ ದೇವಳದ ಗರ್ಭಗುಡಿಯಿಂದ ತೆಗೆಯುವ ಕ್ಷೇತ್ರದ ಅತ್ಯಂತ ಪವಿತ್ರ ಮಹಾಪ್ರಸಾದ. ಮತ್ಯಾವುದೇ ದೇವಳದಲ್ಲಿ ಕೂಡಾ ಇಂತಹ ಪ್ರಸಾದ ದೊರಕುವುದಿಲ್ಲ. ಇದು ಕುಕ್ಕೆ ಕ್ಷೇತ್ರದಲ್ಲಿ ಮಾತ್ರ ಭಕ್ತರಿಗೆ ದೊರಕುವ ವಿಶೇಷ ಪ್ರಸಾರ.
ಮೂಲಮೃತ್ತಿಕಾ ಪ್ರಸಾದವನ್ನು ವರ್ಷದಲ್ಲಿ ಒಂದೇ ಬಾರಿ ತೆಗೆಯಲಾಗುವುದು.ಈ ಮೃತ್ತಿಕಾ ಪ್ರಸಾದವು ರೋಗ ನಿರೋಧಕ, ಸಂತಾನ ಕಾರಕ ಮತ್ತು ಚರ್ಮರೋಗಗಳ ಪರಿಹಾರಕ್ಕೆ ದಿವ್ಯ ಔಷಧ. ಕ್ಷೇತ್ರದ ಈ ಮುಖ್ಯ ಪ್ರಸಾದವನ್ನು ಶುಭ ಕಾರ್ಯಗಳ ಒಳಿತಿಗೂ, ವ್ಯಾದಿಗಳ ನಿವಾರಣೆಗೂ ಭಕ್ತ ಜನರು ಕೊಂಡೊಯ್ಯುತ್ತಾರೆ.ಇದನ್ನು ತೀರ್ಥದಲ್ಲಿ ಸೇವಿಸುವುದರ ಮೂಲಕ ಅಥವಾ ಶರೀರಕ್ಕೆ ರಕ್ಷೆಯಾಗಿ ಕಟ್ಟಿಕೊಳ್ಳುವುದರ ಮೂಲಕ ಭಕ್ತಾಧಿಗಳು ಈ ಪ್ರಸಾದವನ್ನು ತಮ್ಮೊಳಗೆ ಧಾರಣೆ ಮಾಡುತ್ತಾರೆ. ಆದರೆ ಇದನ್ನು ಶರೀರದಲ್ಲಿ ಇರಿಸಿಕೊಂಡಾಗ ಅಪವಿತ್ರವಾಗದಂತೆ ತಡೆಯುವುದು ಮಾತ್ರ ಅತ್ಯಂತ ಪ್ರಮುಖವಾದ ಅಂಶವಾಗಿದೆ.
ದೇವಸ್ಥಾನದ ಆಡಳಿತ ಮಂಡಳಿಯವರು, ಅಧಿಕಾರಿ ವರ್ಗದವರು, ಸಿಬ್ಬಂದಿಗಳು, ಸಾವಿರಾರು ಭಕ್ತರು ಉಪಸ್ಥಿತರಿದ್ದರು.










