ಕುಕ್ಕನ್ನೂರು ಶ್ರೀ ಕಿನ್ನಿಮಾಣಿ -ಪೂಮಾಣಿ ದೈವಗಳ ಕಾಲಾವಧಿ ಉತ್ಸವದ ಪ್ರಯುಕ್ತ ಕೊಡಿಬಂಡಿ ಉತ್ಸವ

0

ಇಂದು ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ನಾಳೆ ಕಿರಿಯರ ನೇಮ ಹಾಗೂ ನಾಯರ್ ನೇಮ

ಜಾಲ್ಸೂರು ಗ್ರಾಮದ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಗಳ ಕಾಲಾವಧಿ ಉತ್ಸವವು ಮೇ.1ರಂದು ಬೆಳಿಗ್ಗೆ ಮುಂಡೈಗೆ ಶೃಂಗಾರದೊಂದಿಗೆ ಪ್ರಾರಂಭಗೊಂಡಿದ್ದು, ರಾತ್ರಿ ದೇವರ ಪೂಜೆ ನಡೆಯಿತು.

ಮೇ2ರಂದು ಪೂರ್ವಾಹ್ನ ಪೂರ್ವ ಸಂಪ್ರದಾಯದಂತೆ ಗುರುಮಾಳ್ಯದಲ್ಲಿ ಗಣಪತಿ ಹೋಮ ನಡೆಯಿತು. ಬಳಿಕ ಕಟ್ಟಮುಚ್ಚಿರು ಮಾಡದಲ್ಲಿ ಧ್ವಜಾರೋಹಣ, ರಾತ್ರಿ ಗುರುಮಾಳ್ಯ ಚಾವಡಿಯಲ್ಲಿ ಸಂಕ್ರಮಣ ವಾಲಸಿರಿ ಕೊಡಿಬಂಡಿ ಉತ್ಸವ ಜರುಗಿತು.


ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಎನ್.ಎಸ್. ಬಾಲಕೃಷ್ಣ ಗೌಡ ನಡುಬೆಟ್ಟು, ದೈವದ ಪ್ರಧಾನ ಅರ್ಚಕ ಸುಭಾಷ್ ರೈ ಕುಕ್ಕನ್ನೂರು, ಕುಕ್ಕನ್ನೂರು ಹದಿನಾರು ಒಕ್ಕಲು ಹಾಗೂ ಸೋಣಂಗೇರಿ ಹತ್ತು ಒಕ್ಕಲಿನವರು, ಆಡಳಿತ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.

ಮೇ3ರಂದು ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದ್ದು, ನಾಳೆ ಬೆಳಗ್ಗಿನ ಜಾವ 3 ಗಂಟೆಯಿಂದ ಉತ್ಸವ ಹಾಗೂ ಸಿಡಿಮದ್ದು ಪ್ರದರ್ಶನ ನೆರವೇರಲಿದೆ.
ಮೇ.4ರಂದು ಬೆಳಿಗ್ಗೆ ಕಿರಿಯರ ನೇಮ, ಬಳಿಕ ನಾಯರ್ ನೇಮ, ಹರಿಕೆ ಕಾಣಿಕೆ ಸ್ವೀಕಾರ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಸಂಕ್ರಮಣ ಪೂಜೆ, ಸಮಾರಾಧನೆ ನಡೆಯಲಿದ್ದು, ಮೇ‌.5ರಂದು ಬೆಳಿಗ್ಗೆ ವಾಲಸಿರಿ ಕಡೆಬಂಡಿ ಉತ್ಸವ, ಹಿರಿಯರ ನೇಮ, ಹರಿಕೆ ಕಾಣಿಕೆ ಸ್ವೀಕಾರ, ಆರಾಟ , ಧ್ವಜಾವರೋಹಣ, ಅಂಬುಕಾಯಿ , ಹಣ್ಣುಕಾಯಿ ನಡೆಯಲಿದೆ.