ಜ್ಯೋತಿ ವೃತ್ತದ ಬಳಿ ಬೈಕ್ ಮತ್ತು ಆಟೋ ಡಿಕ್ಕಿ

0

ಶಾಲಾ ಬಾಲಕಿಯ ಕಾಲಿಗೆ ಗಾಯ

ಸಿಟ್ಟಿಗೆದ್ದ ಬಾಲಕಿಯ ತಂದೆಯಿಂದ ಆಟೋ ಚಾಲಕನಿಗೆ ಥಳಿತ

ಆಟೋ ಚಾಲಕ ಆಸ್ಪತ್ರೆಗೆ ದಾಖಲು ,ಠಾಣೆಯಲ್ಲಿ ದೂರು

ಸುಳ್ಯ ಜ್ಯೋತಿ ವೃತ್ತದ ಬಳಿ ಇಂದು ಸಂಜೆ ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಶಾಲಾ ವಿದ್ಯಾರ್ಥಿನಿಯ ಪಾದಕ್ಕೆ ಗಾಯವಾಗಿದ್ದು ಈ ವೇಳೆ ಸಿಟ್ಟಿಗೆದ್ದ ಬಾಲಕಿಯ ತಂದೆ ಆಟೋ ಚಾಲಕನಿಗೆ ಥಳಿಸಿದ ಘಟನೆ ನಡೆದಿದೆ.

ಬೈಕ್ ಸವಾರರು ಪೆರಾಜೆ ನಿವಾಸಿಯೆಂದು ತಿಳಿದುಬಂದಿದ್ದು, ಸಂಜೆ ಸುಮಾರು 4.30 ಕ್ಕೆ ಸೈಂಟ್ ಜೋಸೆಫ್ ಶಾಲೆಯಿಂದ ತಮ್ಮ ಮಗಳನ್ನು ಕರೆ ತರುವ ವೇಳೆ ಜಂಕ್ಷನ್ ಪಕ್ಕದಿಂದ ಬಂದ ಆಟೋ ರಿಕ್ಷಾ ಬೈಕಿಗೆ ತಾಗಿದೆ ಎನ್ನಲಾಗಿದೆ.
ಈ ವೇಳೆ ಆಟೋ ರಿಕ್ಷಾದ ಮುಂಭಾಗದ ಮಡ್ ಗಾರ್ಡ್ ವಿದ್ಯಾರ್ಥಿನಿಯ ಪಾದಕ್ಕೆ ತಾಗಿ ಗಾಯವಾಗಿ ರಕ್ತ ಬಂದಿದೆ.

ಈ ವೇಳೆ ವಿದ್ಯಾರ್ಥಿನಿಯ ತಂದೆ ಮತ್ತು ಆಟೋ ಚಾಲಕನ ನಡುವೆ ಮಾತಿಗೆ ಮಾತು ಬೆಳೆದು ಜಗಳ ಉಂಟಾಗಿ ಕೈಕೈಮಿಲಾಯಿಸಿಕೊಂಡರು. ಹೊಡೆದಾಟದಲ್ಲಿ ಆಟೋ ಚಾಲಕನಿಗೆ ಮುಖಕ್ಕೆ ಗಾಯವಾಗಿ ಅವರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಬೈಕ್ ಚಾಲಕರ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಿಂದ ಕಾಲಿಗೆ ಗಾಯವಾದ ವಿದ್ಯಾರ್ಥಿನಿಯನ್ನು ಕೆ ವಿ ಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.