Home ಚಿತ್ರವರದಿ ಕೈಗೆ ಬಂದ ತುತ್ತು ಬಾಯಿಗಿಲ್ಲ : ಲ್ಯಾಂಪ್ ಸೊಸೈಟಿ ಸಾರಥ್ಯ ಮತ್ತೆ ಬಿಜೆಪಿ ಪಾಲಿಗೆ

ಕೈಗೆ ಬಂದ ತುತ್ತು ಬಾಯಿಗಿಲ್ಲ : ಲ್ಯಾಂಪ್ ಸೊಸೈಟಿ ಸಾರಥ್ಯ ಮತ್ತೆ ಬಿಜೆಪಿ ಪಾಲಿಗೆ

0

ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಆಪರೇಷನ್ ಕಮಲ

ಅಧ್ಯಕ್ಷರಾಗಿ ನೀಲಮ್ಮ ಕಣಿಪ್ಪಿಲ, ಉಪಾಧ್ಯಕ್ಷರಾಗಿ ಪುಂಡರೀಕ ಕಾಪುಮಲೆ

ಸುಳ್ಯ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡಪ್ರಮಾಣದ ವಿವಿದೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯ ವೇಳೆ ಆಪರೇಷನ್ ಕಮಲ ಕೆಲಸ ಮಾಡಿದ್ದು, ಎರಡು ಸ್ಥಾನಗಳೂ ಬಿಜೆಪಿ ಪಾಲಾಗಿದೆ. ಒಂದೂವರೆ ದಶಕದ ಬಳಿಕ ಲ್ಯಾಂಪ್ಸ್‌ನ ಚುಕ್ಕಾಣಿ ಹಿಡಿಯಬಹುದೆಂಬ ಕಾಂಗ್ರೆಸ್ ಕನಸು ಭಗ್ನವಾಗಿದ್ದು, ಬಿಜೆಪಿ ಬೆಂಬಲಿತರು ಅಧ್ಯಕ್ಷ ಉಪಾಧ್ಯಕ್ಷರಾಗಿ ಗೆದ್ದಿದ್ದಾರೆ.
ಲ್ಯಾಂಪ್ಸ್‌ನ 9 ಮಂದಿಯ ನಿರ್ದೇಶಕ ಸ್ಥಾನದಲ್ಲಿ ಅವಿರೋಧ ಹಾಗೂ ಚುನಾವಣೆ ನಡೆದ ಬಳಿಕ 5 ಸ್ಥಾನ ಕಾಂಗ್ರೆಸ್ ಹಾಗೂ 4 ಸ್ಥಾನ ಬಿಜೆಪಿ ಬೆಂಬಲಿತರಿದ್ದರು. ಹೀಗಾಗಿ ಕಾಂಗ್ರೆಸ್‌ನವರಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಸಿಗುವುದೆಂಬ ನಿರೀಕ್ಷೆ ಇತ್ತು.

ಕಾಂಗ್ರೆಸ್ ನಲ್ಲಿ ನೀಲಮ್ಮ ಅವರು ಅಧ್ಯಕ್ಷತೆಗೆ ಆಕಾಂಕ್ಷಿಯಾಗಿದ್ದರೆನ್ನಲಾಗಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷತೆಗೆ ಮಾಧವ ದೇವರಗದ್ದೆ ಯವರನ್ನು ನಿರ್ಧರಿಸಿತ್ತು. ಈ ಅವಕಾಶವನ್ನು ಬಳಸಿಕೊಂಡ ಮತ್ತು ಲ್ಯಾಂಪ್ಸ್ ಸಾರಥ್ಯ ತನ್ನಲ್ಲೇ ಉಳಿಸಬೇಕೆಂಬ ಗುರಿಯೊಂದಿಗೆ ಬಿಜೆಪಿ ನಾಯಕರು ಆಪರೇಷನ್ ಕಮಲಕ್ಕೆ ಮುಂದಾದರು. ಕಾಂಗ್ರೆಸ್‌ನಿಂದ ಗೆದ್ದಿದ್ದ, ಹಾಲಿ ನಿರ್ದೇಶಕರೂ ಆಗಿದ್ದ ಶ್ರೀಮತಿ ನೀಲಮ್ಮ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿ ಅವರೇ ಅಧ್ಯಕ್ಷತೆಗೆ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷತೆಗೆ ಪುಂಡರೀಕ ಕಾಪುಮಲೆ ನಾಮಪತ್ರ ಸಲ್ಲಿಸಿದರು. ನೀಲಮ್ಮರೊಂದಿಗೆ ಜಶ್ಮಿತಾ ಅವರು ಕೂಡಾ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ವತಿಯಿಂದ ಮಾಧವ ದೇವರಗದ್ದೆ ಅಧ್ಯಕ್ಷತೆಗೆ ಹಾಗೂ ನಾಮನಿರ್ದೇಶಿತ ಸದಸ್ಯರಾಗಿ ನಿಯುಕ್ತಿಗೊಂಡಿದ್ದ ಭವಾನಿಶಂಕರ ಕಲ್ಮಡ್ಕ ಉಪಾಧ್ಯಕ್ಷತೆಗೆ ನಾಮಪತ್ರ ಸಲ್ಲಿಸಿದ್ದರು.


ಈ ಚುನಾವಣೆಯಲ್ಲಿ ನಿರ್ದೇಶಕರನ್ನು ಹೊರತುಪಡಿಸಿ ನಾಮನಿರ್ದೇಶಿತ ಸದಸ್ಯರಿಗೆ, ಸಹಕಾರಿ ಸಂಘಗಳ ಸಹಾಯಕ ನಿಬಂಧಕರಿಗೆ ಲ್ಯಾಂಪ್ಸ್‌ನ ಮಹಾಮಂಡಲದ ಪ್ರತಿನಿಧಿಗೆ ಹಾಗೂ ಸುಳ್ಯ ವಲಯ ಅರಣ್ಯಾಧಿಕಾರಿಯವರಿಗೆ ಮತದಾನದ ಅವಕಾಶವಿತ್ತು.


ಚುನಾವಣೆ ನಡೆದು ಮತೆ ಎಣಿಕೆ ನಡೆದಾಗ ಬಿಜೆಪಿ ಅಭ್ಯರ್ಥಿಗಳಿಗೆ ತಲಾ ,7 ಮತಗಳು ಬಂದು ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. ಕಾಂಗ್ರೆಸ್ ಅಭ್ಯರ್ಥಿಗಳಿಗೆ 6 ಮತಗಳು ಬಂದು ಪರಾಭವಗೊಂಡರು. ಬಿಜೆಪಿ ಅಭ್ಯರ್ಥಿಗಳು ತಮ್ಮ ನಿರ್ದೇಶಕರಲ್ಲದೆ ಲ್ಯಾಂಪ್ಸ್ ಮಹಾಮಂಡಲದ ಪ್ರತಿನಿಧಿಯ ಮತ ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ನಿರ್ದೇಶಕರ ಮತಗಳಲ್ಲದೆ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ, ವಲಯಾರಣ್ಯಾಧಿಕಾರಿಗಳ ಮತ್ತು ನಾಮನಿರ್ದೇಶಿತ ಸದಸ್ಯರ ಮತ ಪಡೆದಿರಬಹುದೆಂಬ ನಿರೀಕ್ಷೆ ಇದೆ.

NO COMMENTS

error: Content is protected !!
Breaking