ಗ್ರಾ.ಪಂ. ಅಧ್ಯಕ್ಷರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ :ಕೊಡಗು ಸಂಪಾಜೆ ಗ್ರಾ.ಪಂ.ರಿಂದ ಖಂಡನೆ

0

ಕಾನೂನು ಹೋರಾಟದ ಎಚ್ಚರಿಕೆ

ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಮಾದೇವಿ ಕಳಗಿಯವರು‌ ಮಲೆಕುಡಿಯ ದಂಪತಿಗಳಿಗೆ ಅವಾಚ್ಯವಾಗಿ ನಿಂದಿಸಿದ್ದಾರೆಂಬ ವರದಿ ವೆಬ್ ಸೈಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿದ್ದು ಅದು ಸತ್ಯಕ್ಕೆ ದೂರವಾಗಿದೆ. ಈ ರೀತಿಯ ಆರೋಪವನ್ನು ನಾವು ಖಂಡಿಸುತ್ತೇವೆ ಹಾಗೂ ಆ ವೆಬ್ ಸೈಟ್ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಕೊಡಗು ಸಂಪಾಜೆ ಗ್ರಾಮಸ್ಥರು ಹಾಗೂ ಗ್ರಾ.ಪಂ. ಸದಸ್ಯರು‌ ಹೇಳಿದ್ದಾರೆ.

ಅ.17 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಗ್ರಾಮಸ್ಥರಾದ ಯಶೋಧರ ಬಿ.ಜೆ.ಯವರು “ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷರಾಗಿದ್ದ ದಿ.ಕಳಗಿ ಬಾಲಚಂದ್ರರ ಪತ್ನಿ ರಮಾದೇವಿ ಕಳಗಿಯವರು ಎರಡೂವರೆ ತಿಂಗಳ ಹಿಂದೆ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಗ್ರಾಮದ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಪಣತೊಟ್ಟು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಸಮಸ್ಯೆಗಳಿದ್ದ ಪ್ರದೇಶಕ್ಕೆ ಹೋಗಿ ಪರಿಶೀಲನೆ ನಡೆಸುತ್ತಾರೆ. ಹೀಗೆ ಜನಪರ ಕೆಲಸ ಮಾಡುವುದನ್ನು‌ ಸಹಿಸಲಾಗದ ಕೆಲವು ಕಿಡಿಗೇಡಿಗಳು‌ ಅವರ ವಿರುದ್ಧ ವೆಬ್ ಸೈಟ್ ಒಂದರಲ್ಲಿ ಕಪೋಲಕಲ್ಪಿತ ವರದಿಗಳನ್ನು‌ ಬರೆಯಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತಿದ್ದಾರೆ. ಆ ವರದಿಯಲ್ಲಿ ಇರುವುದು ಸತ್ಯಕ್ಕೆ ದೂರವಾದ ಮಾತು ಇದನ್ನು‌ ಗ್ರಾಮಸ್ಥರಾಗಿ ನಾವು ಖಂಡಿಸುತ್ತೇವೆ ಎಂದು‌ ಹೇಳಿದರು.

ಹಿರಿಯರಾದ ಓ.ಆರ್. ಮಾಯಿಲಪ್ಪರು ಮಾತನಾಡಿ ಪಂಚಾಯತ್ ಅಧ್ಯಕ್ಷೆ ರಮಾದೇವಿಯವರು ಆ ರೀತಿಯ ಮಾತು‌ ಬಳಸುವವರೇ ಅಲ್ಲ. ಅವರ‌ ಬಗ್ಗೆ ನಮಗೆ ಗೊತ್ತಿದೆ. ಸಮಸ್ಯೆಗಳಿದ್ದರೆ ಮಾತನಾಡಿ ಪರಿಹರಿಸಿಕೊಳ್ಳಬೇಕು ಹೊರತು ಅಪಪ್ರಚಾರ ಸರಿಯಲ್ಲ ಎಂದು ಹೇಳಿದರು.

ಗ್ರಾ.ಪಂ. ಸದಸ್ಯೆ ಅನಿತಾ ಚಂದ್ರಶೇಖರ ಮಾತನಾಡಿ ಪಂಚಾಯತ್ ನ ಸಾಮಾಜಿಕ ನ್ಯಾಯ‌ಸಮಿತಿಯ ಅಧ್ಯಕ್ಷೆಯಾದ ನನ್ನ ಅಧ್ಯಕ್ಷತೆಯಲ್ಲಿ ಆ ದಿನ ಸಭೆ ನಡೆದಿದ್ದು, ಅಲ್ಲಿ ಯಾರೂ ಕೂಡಾ ಕೆಟ್ಟ ಶಬ್ದಗಳನ್ನು ಬಳಸಿ‌ ಮಾತನಾಡಿಲ್ಲ. ಹೀಗಿದ್ದರೂ ‌ಈ ರೀತಿಯ ಬರಹ‌ ಬೇಸರ ತರಿಸಿದೆ ಎಂದು‌ಹೇಳಿದರು.

ಪಂಚಾಯತ್ ಸದಸ್ಯ ನವೀನ್ ಕುಮಾರ್ ಬಿ.ಎಂ. ಮಾತನಾಡಿ, ಪಂಚಾಯತ್ ಗೆ ಬಂದ ಬೇಡಿಕೆ ಕುರಿತು ಸಾಮಾಜಿಕ ನ್ಯಾಯ ಸಮಿತಿಯಲ್ಲಿ ಇಡಲಾಗಿದೆ. ಆ ದಿನ ನಡೆದ ಸಭೆಯಲ್ಲಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ‌ಪಡಲಾಗಿದೆ ಎಂದು ಹೇಳಿದ ಅವರು, ವೆಬ್ ಸೈಟ್ ವರದಿ ಬರೆದವರು ಪಂಚಾಯತ್ ‌ನವರನ್ನು ಯಾಕೆ ವಿಚಾರಿಸಿಲ್ಲ. ನಾವು ಕಾನೂನು ರೀತಿ ಹೋರಾಟ‌ ಮಾಡಬೇಕಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಉದಯ ಹನಿಯಡ್ಕ, ಕೊರಗಪ್ಪ ಅರಮನೆತೋಟ, ಪೂರ್ಣಿಮಾ ಅರೆಕಲ್ಲು ಇದ್ದರು.