ಅಮರ ಸುಳ್ಯ ಸಂಗ್ರಾಮ ರಾಷ್ಟ್ರೀಯ ವಿಚಾರ ಸಂಕಿರಣ – ಸಮಾರೋಪ

0

” ಜಗತ್ತಿನ ಎಲ್ಲಾ ಕ್ರಾಂತಿಗಳು ನಡೆದಿರುವುದು ಉಳ್ಳವರು ಮತ್ತು ಇಲ್ಲದವರ ನಡುವೆ. ಅನೇಕ ರಾಜರುಗಳು ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಆದರೆ ಸುಳ್ಯದಲ್ಲಿ ನಡೆದಂತಹ ಅಮರ ಸುಳ್ಯ ಸಂಗ್ರಾಮ ನಡೆದಿರುವುದು ರೈತರು ಮತ್ತು ರಾಜರುಗಳ ನಡುವೆ ಎನ್ನುವುದೇ ಈ ಸಂಗ್ರಾಮದ ವಿಶೇಷ ” ಎಂದು ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಕಾರ್ಯದರ್ಶಿ ಕೆ.ವಿ ಹೇಮನಾಥ್ ಅವರು ಹೇಳಿದರು.

ಅವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ನಡೆದ ಡಾ. ವಿಜಯ ಪೂಣಚ್ಚ ತಂಬಂಡ ವಿರಚಿತ ಕೃತಿ, “ಅಮರಸುಳ್ಯ ಸಂಗ್ರಾಮ 1837” ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದ ಸರ್ವರನ್ನು ಶ್ಲಾಘಿಸಿದರು.

ಬಂಟಮಲೆ ಅಕಾಡೆಮಿಯ ನಿರ್ದೇಶಕ ಎ.ಕೆ ಹಿಮಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು, ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಮತಿ ರತ್ನಾವತಿ ಡಿ, ಇತಿಹಾಸ ವಿಭಾಗದ ಉಪನ್ಯಾಸಕ ಲತೀಶ್ ಕುಮಾರ್ ಕೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಂದಿನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಮನೆತನದವರು ಕೃತಿಕಾರ ಡಾ. ವಿಜಯ್ ಪೂಣಚ್ಚ ತಂಬಂಡ ಅವರಿಗೆ ಹೋರಾಟದ ಸಾಂಕೇತಿಕ ಕತ್ತಿಯನ್ನು ನೀಡಿ ಗೌರವಿಸಿದರು. ಅದೇ ರೀತಿ ರಾಷ್ಟ್ರೀಯ ವಿಚಾರ ಸಂಕಿರಣದ ಯಶಸ್ಸಿಗೆ ಶ್ರಮಿಸಿದ ಬಂಟಮಲೆ ಅಕಾಡೆಮಿಯ ನಿರ್ದೇಶಕ ಎ.ಕೆ ಹಿಮಕರ,ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ ಹಾಗೂ ಕಾರ್ಯಕ್ರಮ ಸಂಯೋಜಕಿ ಡಾ. ಅನುರಾಧಾ ಕುರುಂಜಿಯವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ವತಿಯಿಂದ ಅಭಿನಂದಿಸಲಾಯಿತು.

ಸಂಜೀವ ಕುದ್ಪಾಜೆ ಸ್ವಾಗತಿಸಿ, ಡಾ. ಮಮತಾ ಕೆ ವಂದಿಸಿ, ಕಾರ್ಯಕ್ರಮ ಸಂಯೋಜಕಿ ಡಾ. ಅನುರಾಧಾ ಕುರುಂಜಿ ನಿರೂಪಿಸಿದರು.