ಮುಕ್ಕೂರು : ರೇಬಿಸ್ ನಿರ್ಮೂಲನೆಗೆ ಲಸಿಕಾ ಕಾರ್ಯಕ್ರಮ

0

 

ಲಸಿಕೆ ಅಭಿಯಾನ ಮೂಲಕ ಜಾಗೃತಿ : ಜಗನ್ನಾಥ ಪೂಜಾರಿ ಮುಕ್ಕೂರು

ದ.ಕ.ಜಿ.ಪಂ., ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಆಶ್ರಯದಲ್ಲಿ ಪೆರುವಾಜೆ ಗ್ರಾಮ ಪಂಚಾಯತ್, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘ, ಕುಂಡಡ್ಕ- ಮುಕ್ಕೂರು ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇವುಗಳ ಜಂಟಿ ಸಹಯೋಗದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಪ್ರಯುಕ್ತ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮಕ್ಕೆ ಅ.20 ರಂದು ಮುಕ್ಕೂರು ಹಾಲಿನ ಡಿಪೋ ಬಳಿ ಚಾಲನೆ ನೀಡಲಾಯಿತು.

 

*ಕಾರ್ಯಕ್ರಮ ಉದ್ಘಾಟಿಸಿದ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತಾನಾಡಿ,* ಸಾಕು ಪ್ರಾಣಿಗಳ ಬಗ್ಗೆ ಕಾಳಜಿ ಅತಿ ಅಗತ್ಯ. ರೋಗ ಬಾರದ ಹಾಗೆ ಕಾಲ ಕಾಲಕ್ಕೆ ಲಸಿಕೆ ನೀಡುವ ಮೂಲಕ ರೇಬಿಸ್ ನಂತಹ ಮಾರಕ ರೋಗಗಳಿಂದ ರಕ್ಷಣೆ ಪಡೆಯಲು ಸಾಧ್ಯವಿದ್ದು ಪಶುಪಾಲನಾ ಇಲಾಖೆಯು ಉಚಿತವಾಗಿ ರೇಬಿಸ್ ನಿಯಂತ್ರಣ ಲಸಿಕೆ ನೀಡುತ್ತಿರುವುದು ಶ್ಲಾಘನೀಯ ಎಂದರು.

*ಬೆಳ್ಳಾರೆ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ|ಸೂರ್ಯ ನಾರಾಯಣ ಭಟ್ ಮಾತನಾಡಿ,* ಸಾಕು ಪ್ರಾಣಿಗಳಿಗೆ ರೋಗ ಬಾರದಂತೆ ರಕ್ಷಿಸುವ ಮೂಲಕ ಅದರಿಂದ ಮನುಷ್ಯನ ಮೇಲೆ ಉಂಟಾಗುವ ಅಪಾಯಗಳಿಂದ ಸಂರಕ್ಷಣೆ ಪಡೆದುಕೊಳ್ಳಲು ಸಾಧ್ಯವಿದೆ. ರೇಬಿಸ್ ಮುಕ್ತ ದೇಶ ನಿರ್ಮಾಣಕ್ಕೆ ಸಂಕಲ್ಪ ತೊಡಲಾಗಿದ್ದು ಈ ಅಭಿಯಾನ ಪೂರಕ ಹೆಜ್ಜೆ ಎಂದರು.

ಈ ಸಂದರ್ಭದಲ್ಲಿ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ಗುಡ್ಡಪ್ಪ ಗೌಡ ಅಡ್ಯತಕಂಡ, ಕೇಶವ ಎನ್ ಕಂಡಿಪ್ಪಾಡಿ, ಪೆರುವಾಜೆ ಗ್ರಾ.ಪಂ.ಪಿಡಿಓ ಜಯಪ್ರಕಾಶ್ ಅಲೆಕ್ಕಾಡಿ, ಮುಕ್ಕೂರು ಶಾಲಾ ಹಿತಚಿಂತನಾ ಸಮಿತಿ ಕೋಶಾಧಿಕಾರಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ, ಪ್ರಗತಿಪರ ಕೃಷಿಕರಾದ ವಿಕಾಸ್ ರೈ ಕುಂಜಾಡಿ, ವಿಜಯ ರೈ ಪೆರುವೋಡಿ, ಪದ್ಮನಾಭ ಗೌಡ ಬೀರುಸಾಗು, ರಘುನಾಥ ಶೆಟ್ಟಿ ಬರಮೇಲು, ಪ್ರದೀಪ್ ಬೈಲಂಗಡಿ ಮೊದಲಾದವರು ಉಪಸ್ಥಿತರಿದ್ದರು. ಮುಕ್ಕೂರು ಹಾಗೂ ನೇಸರ ಯುವಕ ಮಂಡಲದ ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್.ನಿರೂಪಿಸಿದರು. 100 ಕ್ಕೂ ಅಧಿಕ ಶ್ವಾನಗಳಿಗೆ ಲಸಿಕೆ ನೀಡಲಾಯಿತು.