ಸುಳ್ಯ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಜಾಗೃತಿ ಅರಿವು ಸಪ್ತಾಹ

0

 

 

ಭ್ರಷ್ಟಾಚಾರ ವಿರೋಧಿ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಕಾನೂನು ಪ್ರಾಧಿಕಾರದ ವತಿಯಿಂದ ನವಂಬರ್ 1 ರಿಂದ 13 ರವರೆಗೆ ಭ್ರಷ್ಟಾಚಾರ ಜಾಗೃತಿ ಹರಿವು ಸಪ್ತಾಹದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದರ ಅಂಗವಾಗಿ ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಭ್ರಷ್ಟಾಚಾರ ಜಾಗೃತಿ ಅರಿವು ಕಾರ್ಯಕ್ರಮವನ್ನು ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ಆಚರಿಸಲಾಗುತ್ತಿದ್ದು,
4ನೇ ದಿನದ ಕಾರ್ಯಕ್ರಮವಾಗಿ ಇಂದು ಸುಳ್ಯ ತಾಲೂಕು ಕಚೇರಿ ಸಭಾಂಗಣದಲ್ಲಿ ಭ್ರಷ್ಟಾಚಾರ ಜಾಗೃತಿ ಅಭಿಯಾನ ಮತ್ತು ಪ್ರತಿಜ್ಞಾವಿಧಿ ಬೋಧನೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮವನ್ನು ತಾಲೂಕು ಕಾನೂನು ಸೇವೆಗಳ ಸಮಿತಿ ಸುಳ್ಯ, ತಾಲೂಕು ಆಡಳಿತ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ, ಸುದ್ದಿ ಸಮೂಹ ಮಾಧ್ಯಮ ಇವರ ಸಂಯುಕ್ತಾಶ್ರಯದಲ್ಲಿ ನಡೆಸಲಾಯಿತು.
ಸುಳ್ಯ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶೆ, ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿ ಕು.ಅರ್ಪಿತಾ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ತಹಶೀಲ್ದಾರ್ ಕು.ಅನಿತಾ ಲಕ್ಷ್ಮಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಹಿರಿಯ ನ್ಯಾಯವಾದಿ ಸುಳ್ಯ ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ ನಾರಾಯಣ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಭ್ರಷ್ಟಾಚಾರ ಜಾಗೃತಿ ಕುರಿತು ಮಾಹಿತಿಯನ್ನು ನೀಡಿ ಭ್ರಷ್ಟಾಚಾರ ಉಂಟಾಗಲು ಕಾರಣ, ಅದರಿಂದ ಆಗುವ ದುಷ್ಪರಿಣಾಮಗಳು ಮತ್ತು ಕಾನೂನಿನಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡವರಿಗೆ ಇರುವ ಶಿಕ್ಷೆಗಳ ಕುರಿತು, ಮತ್ತು ಅದರ ನಿರ್ಮೂಲನೆಗೆ ಜನರಿಗೆ ನೀಡುವ ಜಾಗೃತಿ ಅರಿವು ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಪಿ ಮಹದೇವ, ಸುಳ್ಯ ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಸುಳ್ಯ ನ್ಯಾಯಾಲಯದ ಪ್ಯಾನೆಲ್ ವಕೀಲರಾದ ಸಂದೀಪ್ ಎಂ, ಚರಣ್ ರಾಜ್ ಕೆ ಬಿ, ಸುಳ್ಯ ಪೊಲೀಸ್ ಠಾಣಾ ಕ್ರೈಂ ಎಸ್ ಐ ರತ್ನಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶೆ ಕು. ಅರ್ಪಿತಾ ಭ್ರಷ್ಟಾಚಾರ ನಿರ್ಮೂಲನೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಸುಳ್ಯ ವಕೀಲರ ಸಂಘದ ಪದಾಧಿಕಾರಿಗಳು ಸದಸ್ಯರು, ತಾಲೂಕು ಕಚೇರಿಯ ವಿವಿಧ ಇಲಾಖೆಯ ಅಧಿಕಾರಿಗಳು, ಸುಳ್ಯ ನ್ಯಾಯಾಲಯದ ಸಿಬ್ಬಂದಿಗಳು ಕಾನೂನು ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಪ ತಹಶೀಲ್ದಾರ್ ಮಂಜುನಾಥ್ ಸ್ವಾಗತಿಸಿದರು.

ತಾಲೂಕು ಕಚೇರಿಯ ಅಧಿಕಾರಿ ಚಂದ್ರಕಾಂತ್ ಕಾರ್ಯಕ್ರಮ ನಿರೂಪಿಸಿದರು.