ಸುಳ್ಯದ ವಿವೇಕಾನಂದ ಸರ್ಕಲ್ ಬಳಿ ಗೂಡಂಗಡಿಯ ಸಮೀಪ ವ್ಯಕ್ತಿಯೋರ್ವರ ಮೃತದೇಹ ಇಂದು ಬೆಳಿಗ್ಗೆ ಸ್ಥಳೀಯರಿಗೆ ಕಂಡುಬಂದಿದೆ.
ಮೃತರನ್ನು ಅಜ್ಜಾವರ ಗ್ರಾಮದ ಮುಳಿಯ ಹೊಸಗದ್ದೆ ನಿವಾಸಿ ಬಾಬು (೬೦ವರ್ಷ)ಎಂದು ಗುರುತಿಸಲಾಗಿದ್ದು
ನಿನ್ನೆ ಸಂಜೆಯಿಂದಲೇ ಅವರು ಮದ್ಯಪಾನ ಮಾಡಿ ಸ್ಥಳೀಯ ಪರಿಸರದಲ್ಲಿಮಲಗಿಕೊಂಡಿದ್ದರೆನ್ನಲಾಗಿದೆ.
ಇಂದು ಬೆಳಿಗ್ಗೆ ವಿವೇಕಾನಂದ ಸರ್ಕಲ್ ಬಳಿಯ ಗುಜುರಿ ಅಂಗಡಿಯ ಬಳಿ ಇರುವ ಗೂಡಂಗಡಿಯ ಪಕ್ಕದ ಜಾಗದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಕಲ್ಲಿನ ಬೆಂಚಿನ ಮೇಲೆ ಅವರು ಮಲಗಿದ್ದಲ್ಲಿಯೇ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ಗೂಡಂಗಡಿಯ ಮಾಲಕ ಚಂದ್ರಶೇಖರ ಎಂಬುವವರು ಬೆಳಿಗ್ಗೆ ಬಂದು ತನ್ನ ಅಂಗಡಿ ತೆರೆಯುವ ವೇಳೆ ಘಟನೆ ತಿಳಿದು ಬಂದಿದ್ದು
ಕೂಡಲೇ ಅವರು ಬಾಬುವಿನ ಮನೆಯವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ನಂತರ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಬಾಬು ರವರು ಕೂಲಿ ಕಾರ್ಮಿಕರಾಗಿದ್ದು ಅತಿಯಾದ ಮದ್ಯ ಸೇವನೆ ಮಾಡುತ್ತಿದ್ದ ಕಾರಣ ಅವರು ಮನೆಗೆ ಸರಿಯಾಗಿ ಹೋಗದೆ ನಗರದ ಬೇರೆ ಬೇರೆ ಕಡೆಗಳಲ್ಲಿ ರಾತ್ರಿ ಸಮಯದಲ್ಲಿ ತಂಗುತ್ತಿದ್ದರು ಎನ್ನಲಾಗಿದೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ.