ಸುಬ್ರಹ್ಮಣ್ಯ: ಚಂಪಾಷಷ್ಠಿ ಪ್ರಯುಕ್ತ ಸಭೆ, ಸಚಿವ ಅಂಗಾರ, ಜಿಲ್ಲಾಧಿಕಾರಿ, ಎ.ಸಿ ಭಾಗಿ, ಎಡೆಸ್ನಾನಕ್ಕೆ ಅವಕಾಶ, ಸಂಚಾರಿ ಆಸ್ಪತ್ರೆ, ತಾತ್ಕಾಲಿಕ ಆಸ್ಪತ್ರೆಯ ವ್ಯವಸ್ಥೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.೨೧ರಿಂದ ನಡೆಯಲಿರುವ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ನ.14 ರಂದು ನಡೆಯಿತು. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ವಿವಿಧ ವಿಷಯಗಳು ಚರ್ಚೆಗೆ ಬಂದಿದ್ದು ಬ್ರಹ್ಮರಥೋತ್ಸವ ಸೇವೆ ಬಗ್ಗೆ ಚರ್ಚೆ ನಡೆಯಿತು. ಬ್ರಹ್ಮರಥೋತ್ಸವ ಸೇವೆಯಲ್ಲಿ ಭಕ್ತರಿಗೆ ಗರಿಷ್ಠ ೧೦೦ ಸೇವಾ ರಶೀದಿಗಳನ್ನು ನೀಡಲು ಮತ್ತು ಸೇವಾರ್ಥಿಗಳಿಗೆ ವಸತಿ, ಊಟೋಪಚಾರ ವ್ಯವಸ್ಥೆ ಕಲ್ಪಿಸುವ ಕ್ರಮಕೈಗೊಳ್ಳಲಾಯಿತು. ಉಳಿದಂತೆ ವಿವಿಐಪಿಗಳಿಗೆ ನೀಡುವ ಗುರುತಿನ ಚೀಟಿಯಲ್ಲಿ ಮೊದಲೇ ಅಂದಾಜು ಲೆಕ್ಕ ಪಡೆದು ವಿಭಾಗಿಸಿ ಅವಕಾಶ ನೀಡಲು ಸಲಹೆ ವ್ಯಕ್ತವಾಯಿತು. ಬ್ರಹ್ಮರಥ ಎಳೆಯುವ ವೇಳೆ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವುದು ಹಾಗೂ ಸೂಕ್ತ ಮುಂಜಾಗ್ರತಾ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಯಿತು.

ಎಡೆಸ್ನಾನಕ್ಕೆ ಅವಕಾಶ;
ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನಲೆಯಲ್ಲಿ ನಿರ್ಬಂಧಿಸಲಾಗಿದ್ದ ಎಡೆಸ್ನಾನ ಸೇವೆಗೆ ಈ ಬಾರಿ ಅವಕಾಶ ನೀಡಲು ಸಮ್ಮತಿಸಲಾಯಿತು. ಚೌತಿ, ಪಂಚಮಿ, ಷಷ್ಠಿ ದಿನದಂದು ಮದ್ಯಾಹ್ನ ಮಹಾಪೂಜೆ ಬಳಿಕ ಭಕ್ತಾಧಿಗಳು ಸ್ವ-ಇಚ್ಛೆಯಿಂದ ಭಾಗವಹಿಸುವವರಿಗೆ ಜಿಲ್ಲಾಧಿಕಾರಿಗಳ ನಿರ್ದೇಶನವನ್ನು ಪಾಲಿಸಿಕೊಂಡು ಸೇವೆಗೆ ಅವಕಾಶ ನೀಡಲು ತೀರ್ಮಾಣಿಸಲಾಯಿತು. ಬೀದಿ ಉರುಳು ಸೇವೆ ಮಾಡುವವರಿಗೆ ಲಕ್ಷ ದಿಪೋತ್ಸವ ದಿನದಂದು ರಾತ್ರಿ ರಥೋತ್ಸವದ ಬಳಿಕ ಸಂಜೆ ಗಂಟೆ ೫ರಿಂದ ಬೆಳಗ್ಗೆ ೬ಗಂಟೆ ವರೆಗೆ ಅವಕಾಶ ನೀಡಲು ಸಲಹೆ ವ್ಯಕ್ತವಾಯಿತು.

ಅಲೆಮಾರಿ ಜಾನುವಾರು, ಬೀದಿನಾಯಿ ನಿಯಂತ್ರಿಸಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಲೆಮಾರಿ ಜಾನುವಾರು ಹಾಗೂ ಬೀದಿ ನಾಯಿ, ಹುಚ್ಚು ನಾಯಿಗಳ ಹಾವಳಿ ವ್ಯಾಪಕವಾಗಿರುವ ಬಗ್ಗೆ ದೂರು ವ್ಯಕ್ತವಾಯಿತು. ಜಾತ್ರಾ ಸಮಯದಲ್ಲಿ ಅನಾಹುತ ಸಂಭವಿಸುವ ಮುನ್ನಚ್ಚರಿಕೆಯಾಗಿ ಪೂರಕ ಕ್ರಮಕ್ಕೆ ಆಗ್ರಹ ಕೇಳಿಬಂತು. ಅಲೆಮಾರಿ ಜಾನುವಾರುಗಳ ಸಂಖ್ಯೆಗಳ ಬಗ್ಗೆ ಪಟ್ಟಿ ಮಾಡಿ ಅವುಗಳನ್ನು ಗೋ ಶಾಲೆಗೆ ಸಾಗಿಸುವ ವ್ಯವಸ್ಥೆ ಮಾಡಲು ಸಚಿವರು ಸೂಚಿಸಿದರು. ಪೊಲೀಸ್ ಇಲಾಖೆ, ಪಶುಸಂಗೋಪನಾ ಇಲಾಖೆ,. ಸ್ಥಳೀಯಾಡಳಿತ ಒಟ್ಟಾಗಿ ಸಭೆ ನಡೆಸಿ, ಬೀದಿನಾಯಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಸೂಚಿಸಿದ ಡಿಸಿ ರವಿಕುಮಾರ್ ಅವರು ಜಿಲ್ಲಾಡಳಿತದಿಂದ ವಾಹನ ಕಲ್ಪಿಸುವಬಗ್ಗೆ ತಿಳಿಸಿದರು.

ಸ್ವಚ್ಚತೆ, ಕುಡಿಯುವ ನೀರಿಗೆ ಆದ್ಯತೆಗೆ ಸಲಹೆ
ಚಂಪಾಷಷ್ಠಿ ಮಹೋತ್ಸವ ಸುಸೂತ್ರವಾಗಿ ನಡೆಯಲು ಎಲ್ಲರ ಸಹಕಾರ ಬೇಕು ಎಂದು ಹೇಳಿದ ಜಿಲ್ಲಾಧಿಕಾರಿ ರವಿಕುಮಾರ್ ಅವರು ಜನತೆಗೆ ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಎಲ್ಲೆಲ್ಲಿ ನೀರಿನ ವ್ಯವಸ್ಥೆ ಬೇಕೋ ಅಲ್ಲಿ ಕುಡಿಯುವ ನೀರು, ಮೋಬೈಲ್ ಶೌಚಾಲಯ ಕಲ್ಪಿಸುವಂತೆ ಸೂಚಿಸಿದರು.

ಸಂಚಾರಿ ಆಸ್ಪತ್ರೆ, ತಾತ್ಕಾಲಿಕ ಆಸ್ಪತ್ರೆ;
ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ಭಕ್ತಾಧಿಗಳಿಗೆ ಸೇವೆ ನೀಡಲು ದೇವಸ್ಥಾನದ ಬಳಿ ತಾತ್ಕಲಿಕ ಆಸ್ಪತ್ರೆ ಹಾಗೂ ಸಂಚಾರಿ ಆಸ್ಪತ್ರೆ ತೆರೆಯಲಾಗುವುದು ಎಂದು ವೈದಾಧಿಕಾರಿಗಳು ಮಾಹಿತಿ ನೀಡಿದರು. ವೈದ್ಯರು, ಸಿಬ್ಬಂದಿಗಳು ಸದಾ ಕರ್ತವ್ಯದಲ್ಲಿರುವಂತೆ ಹಾಗೂ ಎಲ್ಲಾ ಸಮಯದಲ್ಲೂ ಔಷಧಿ ಲಭ್ಯವಿರುವಂತೆ ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಪೇಟೆಯಲ್ಲಿ ಸೂಕ್ತ ರೀತಿಯಲ್ಲಿ ಬೀದಿ ದೀಪ ಅಳವಡಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ, ವಿಶೇಷ ಬಸ್ ವ್ಯವಸ್ಥೆಗೆ, ಲಕ್ಷ ದೀಪೋತ್ಸವಕ್ಕೆ ಭಾಗವಹಿಸುವಂತೆ, ಕುಡಿಯುವ ನೀರು, ಪಾರ್ಕಿಂಗ್, ಒಳಚರಂಡಿ ದುರಸ್ತಿ ಮಾಡುವಂತೆ, ಜಾತ್ರಾ ವೇಳೆ ರಸ್ತೆ ಬದಿಯ ತಾತ್ಕಲಿಕ ಅಂಗಡಿ ತೆರೆವು ಮಾಡುವಂತೆ ಮೊದಲಾದ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ, ಜಿಲ್ಲಾಧಿಕಾರಿ ರವಿಕುಮಾರ್, ಸಹಾಯಕ ಆಯುಕ್ತ ಗಿರೀಶ್ ನಂದನ್, ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ, ಕಡಬ ತಹಶೀಲ್ದಾರ್ ರಮೇಶ್‌ಬಾಬು, ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಲಲಿತಾ ಕೆ., ಸೇರಿದಂತೆ ವ್ಯವಸ್ಥಾಪನಾ ಸಮಿತಿ ಸದಸ್ಯರು, ಮಾಸ್ಟರ್ ಪ್ಲಾನರಿ ಸದಸ್ಯರು, ಗ್ರಾ.ಪಂ. ಸದಸ್ಯರು, ಅಧಿಕಾರಿಗಳು-ಸಿಬ್ಬಂದಿಗಳು, ಸಂಘ-ಸಂಸ್ಥೆ, ಶೈಕ್ಷಣಿಕ ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ ಸ್ವಾಗತಿಸಿದರು. ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಕಾರ್ಯಕ್ರಮ ನಿರ್ವಹಿಸಿದರು. ರತ್ನಾಕರ ಎಸ್. ಕಾರ್ಯಕ್ರಮ ನಿರೂಪಿಸಿದರು.