ಅರಂಬೂರಿನಲ್ಲಿ ಭಕ್ತಿ ಸಂಭ್ರಮದ ಅಯ್ಯಪ್ಪ ವೃತಧಾರಿಗಳ ಅಯ್ಯಪ್ಪ ಸ್ವಾಮಿಯ ದೀಪೋತ್ಸವ- ಆಕರ್ಷಕ ಕುಣಿತಭಜನೆ, ವಿಜೃಂಭಣೆಯ ಪಾಲ್ ಕೊಂಬು ಮೆರವಣಿಗೆ, ಅಪ್ಪ ಸೇವೆ – ಅಗ್ನಿ ಸೇವೆ

0

ಅರಂಬೂರು ಸಾರ್ವಜನಿಕ ಶ್ರೀ ಅಯ್ಯಪ್ಪ ಸೇವಾ ಸಮಿತಿ ಮತ್ತು ಶ್ರೀ ಅಯ್ಯಪ್ಪ ದೀಪೋತ್ಸವ ಸಮಿತಿಯ ಆಶ್ರಯದಲ್ಲಿ 13 ನೇ ವರ್ಷದ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೀಪೋತ್ಸವವು ಡಿ.3 ರಂದು ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದ ವಠಾರದಲ್ಲಿ‌ ಡಿ.ನಾರಾಯಣ ಗುರುಸ್ವಾಮಿ ದೊಡ್ಡೇರಿ ಮತ್ತು ಯಂ.ಈಶ್ವರ ಗುರುಸ್ವಾಮಿ ಮಜಿಗುಂಡಿ ಯವರ ನೇತೃತ್ವದಲ್ಲಿ ಭಕ್ತಿ ಸಂಭ್ರಮದಿಂದ ಜರುಗಿತು.

ಬೆಳಗ್ಗೆ ಪುರೋಹಿತ ಕೃಷ್ಣ ಭಟ್ ಸರಳಿಕುಂಜ ರವರ ನೇತೃತ್ವದಲ್ಲಿ ಗಣಪತಿ ಹವನವಾಗಿ ಉಷಾ ಪೂಜೆಯು ನಡೆಯಿತು. ಮಧ್ಯಾಹ್ನ ಮಹಾಪೂಜೆಯಾಗಿ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು. ಸಂಜೆ ಗಣೇಶ್ ಸ್ಟೀಲ್ ಇಂಡಸ್ಟ್ರೀಸ್ ಬಳಿಯಿಂದ ಮೂಕಾಂಬಿಕಾ ಭಜನಾ ಮಂದಿರದ ತನಕ ಚೆಂಡೆ ವಾದ್ಯಘೋಷಗಳೊಂದಿಗೆ ಬಾಲಕ ಬಾಲಕಿಯರ ದೀಪಾರಾಧನೆಯ ಬೆಳಕಿನೊಂದಿಗೆ ಸಿಡಿ ಮದ್ದಿನ ಪ್ರದರ್ಶನ ದೊಂದಿಗೆ ಅಯ್ಯಪ್ಪ ವೃತಧಾರಿಗಳ ಸಮ್ಮುಖದಲ್ಲಿ ಪಾಲ್ ಕೊಂಬು ಮೆರವಣಿಗೆಯು ಸಾಗಿ ಬಂತು. ಬಳಿಕ ಮೂಕಾಂಬಿಕಾ ಭಜನಾ ಮಂಡಳಿಯ ಸದಸ್ಯರಿಂದ ಆಕರ್ಷಕ ಕುಣಿತ ಭಜನೆಯು ನಡೆಯಿತು. ರಾತ್ರಿಮಹಾಮಂಗಳಾರತಿಯಾಗಿ ಪ್ರಸಾದ ವಿತರಣೆಯಾಯಿತು. ಆಗಮಿಸಿದ ಎಲ್ಲರಿಗೂ ರಾತ್ರಿ ಅನ್ನ ಸಂತರ್ಪಣೆಯಾಯಿತು.

ಬಳಿಕ ರಾತ್ರಿ ಅಯ್ಯಪ್ಪ ವೃತಧಾರಿಗಳಿಂದ ಮೇಲೆರಿಗೆ ಅಗ್ನಿ ಸ್ಪರ್ಶವಾಗಿ ವಿಶೇಷವಾಗಿ ಕುದಿಯುವ ಎಣ್ಣಿಯಿಂದ ಅಯ್ಯಪ್ಪ ವೃತಧಾರಿಗಳು ಭಕ್ತಿಯಿಂದ ಅಪ್ಪ ವನ್ನು ತೆಗೆಯುವ ಸೇವೆಯು ನಡೆಯಿತು. ಮರುದಿನ ಪ್ರಾತ:ಕಾಲ ಅಯ್ಯಪ್ಪ ವೃತಧಾರಿಗಳಿಂದ ಅಗ್ನಿ ಸೇವೆಯಾಗಿ ಮಂಗಳಾರತಿಯೊಂದಿಗೆ ದೀಪವಿಸರ್ಜನೆಯಾಯಿತು. ಸುಮಾರು 200 ಕ್ಕೂ ಮಿಕ್ಕಿ ಅಯ್ಯಪ್ಪ ವೃತಧಾರಿಗಳು ಸೇವೆಯಲ್ಲಿ ಪಾಲ್ಗೊಂಡರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ
ದೇಂತಡ್ಕ ಶ್ರೀ ವನದುರ್ಗಾ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರಿಂದ ಸಿರಿ ಚಂದನ ಎಂಬ ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಸ್ವಾಮಿಯ ಪ್ರಸಾದ ಸ್ವೀಕರಿಸಿದರು. ಜಂಟಿ
ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಭಜನಾ ಮಂದಿರದ ಅಧ್ಯಕ್ಷರು ಮತ್ತು ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಿದರು.