ಎನ್ನೆಂಸಿ ವಿದ್ಯಾರ್ಥಿ ಪ್ರೊ ಕಬಡ್ಡಿ 2022ರ ಚಾಂಪಿಯನ್ ತಂಡದ ಆಟಗಾರ ಅಭಿಷೇಕ್ ಗೆ ಭವ್ಯ ಸ್ವಾಗತ

0

ಎನ್ನೆಂಸಿ: ಜ.5, ನೆಹರೂ ಮೆಮೋರಿಯಲ್‌ ಕಾಲೇಜು ಸುಳ್ಯ ಇಲ್ಲಿನ ವಿದ್ಯಾರ್ಥಿ ಅಭಿಷೇಕ್‌.ಎಸ್‌ ಪ್ರೊ ಕಬಡ್ಡಿ ಸೀಸನ್-9ರಲ್ಲಿ ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌ ತಂಡದಲ್ಲಿ ಆಟವಾಡಿ ಚಾಂಪಿಯನ್‌ ಆಗಿ ಹೊರಹೊಮ್ಮಿ ಕ್ರೀಡಾಕೂಟವನ್ನು ಮುಗಿಸಿ ಕಾಲೇಜಿಗೆ ಆಗಮಿಸಿದಾಗ ಭವ್ಯ ಸ್ವಾಗತವನ್ನು ನೀಡಿ ಬರಮಾಡಿಕೊಳ್ಳಲಾಯಿತು.

ಕಬಡ್ಡಿ ಕ್ರೀಡಾ ಸಾಧಕ ಅಭಿಷೇಕ್‌.ಎಸ್ ಇವರನ್ನು ಕೆ.ವಿ.ಜಿ ವಿದ್ಯಾಸಂಸ್ಥೆಗಳ ಸ್ಥಾಪಕ ದಿ. ಕುರುಂಜಿ ವೆಂಕಟರಮಣ ಗೌಡರ ಸ್ಮಾರಕಕ್ಕೆ ಪುಷ್ಪ ನಮನವನ್ನು ಸಲ್ಲಿಸಿದ ನಂತರ ಸಿಂಗರಿಸಿದ ತೆರೆದ ಜೀಪ್ ನಲ್ಲಿ ಸಿಂಗಾರಿ ಮೇಳದೊಂದಿಗೆ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಕರೆ ತಂದರು.

ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ.ಎಂ.ಬಾಲಚಂದ್ರ ಗೌಡ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಹರಿಣಿ ಪುತ್ತೂರಾಯ ಹೂವಿನ ಹಾರ ಹಾಕಿ ಹೂಗುಚ್ಛ ನೀಡಿ ಸ್ವಾಗತಿಸಿ ವಿದ್ಯಾರ್ಥಿಗೆ ಶುಭಹಾರೈಕೆಯ ನುಡಿಗಳನ್ನಾಡಿದರು.

ಕ್ರೀಡಾಪಟು ಅಭಿಷೇಕ್‌ ಎಸ್‌ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತ ಅಕಾಡೆಮಿ ಅಫ್‌ ಲಿಬರಲ್‌ ಎಜುಕೇಶನ್ ಸುಳ್ಯದ ಅಧ್ಯಕ್ಷ ಡಾ. ಕೆ.ವಿ.ಚಿದಾನಂದರಿಗೆ, ಕಾರ್ಯದರ್ಶಿ ಆರ್ಕಿಟೆಕ್‌ ಅಕ್ಷಯ್‌ ಕೆ.ಸಿ ಯವರಿಗೆ ಹಾಗೂ ತರಬೇತಿ ನೀಡಿದ ಕೆ.ವಿ.ಜಿ ಕ್ರೀಡಾ ತರಬೇತಿ ಸಂಸ್ಥೆಗೆ, ಕಾಲೇಜಿನ ಅಧ್ಯಾಪಕ ವೃಂದದವರಿಗೆ ಮತ್ತು ಮಾರ್ಗದರ್ಶಕರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಕಾಲೇಜಿನ ದೈಹಿಕ ನಿರ್ದೇಶಕರಾದ ಲೆ. ಸೀತಾರಾಮ ಎಂ.ಡಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ಕುಲದೀಪ್‌ ಪೆಲ್ತಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ IQAC ಸಂಯೋಜಕಿ ಮಮತಾ.ಎಂ ವಂದಿಸಿದರು ಮತ್ತು ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಹಕರಿಸಿದರು.