ಕೌಡಿಚಾರಿನಲ್ಲಿ ಕಾರು – ಬೈಕ್ ಅಪಘಾತ

0

ಅಡ್ಕಾರಿನ ನವದಂಪತಿಗಳಿಗೆ ಗಂಭೀರ ಗಾಯ

ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ , ಬೈಕ್ ನಲ್ಲಿದ್ದ ಅಡ್ಕಾರಿನ ನವದಂಪತಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಕೌಡಿಚಾರಿನಲ್ಲಿ ಎ.8ರಂದು ಮಧ್ಯಾಹ್ನ ಸಂಭವಿಸಿದೆ.

ಜಾಲ್ಸೂರು ಗ್ರಾಮದ ಅಡ್ಕಾರು ಕೋನಡ್ಕಪದವಿನ ಸಂದೇಶ್ ಹಾಗೂ ಅವರ ಪತ್ನಿ ಶ್ರೀಮತಿ ರಕ್ಷಿತಾ ಅವರು ಬೈಕ್ ನಲ್ಲಿ ಪುತ್ತೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕೌಡಿಚಾರಿನಲ್ಲಿ ಪುತ್ತೂರಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರೊಂದಕ್ಕೆ ಢಿಕ್ಕಿ ಸಂಭವಿಸಿದ್ದು, ಬೈಕ್ ನಲ್ಲಿದ್ದ ನವದಂಪತಿಗಳು ಬೈಕ್ ನಿಂದ ರಸ್ತೆಗೆ ಎಸೆಯಲ್ಪಟ್ಟು, ಕಾಲಿಗೆ ಗಂಭೀರವಾಗಿ ಗಾಯಗೊಂಡರೆನ್ನಲಾಗಿದೆ.


ಕಾರು ಚಾಲಕ ವಿರುದ್ದ ದಿಕ್ಕಿನಲ್ಲಿ ಸಂಚರಿಸಿ, ಬೈಕ್ ಗೆ ಢಿಕ್ಕಿ ಹೊಡೆದಿದ್ದು, ಸ್ಥಳೀಯರು ಸೇರಿ ಗಾಯಾಳುಗಳನ್ನು ಪುತ್ತೂರಿ‌ನ ಆಸ್ಪತ್ರೆಗೆ ಸಾಗಿಸಿ, ಅಲ್ಲಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.


ಸಂದೇಶ್ ಅವರಿಗೆ ಕಳೆದ ವಾರವಷ್ಟೆ ವಿವಾಹವಾಗಿದ್ದು, ನವದಂಪತಿಗಳು ಪುತ್ತೂರಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.


ಅಪಘಾತದಲ್ಲಿ ಸಂದೇಶ್ ಹಾಗೂ ಅವರ ಪತ್ನಿ ರಕ್ಷಿತಾ ಅವರ ಕಾಲು ಪ್ರಾಕ್ಚರ್ ಆಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಾರು ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದ್ದು, ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ತಿಳಿದುಬಂದಿದೆ.