ಸ್ಕೂಟಿ ಕದ್ದ ಕಳ್ಳ ಹೋಟೆಲ್ ಶೌಚಾಲಯದಲ್ಲಿ ನಿದ್ದೆ ಮಾಡಿ ಸಿಕ್ಕಿ ಹಾಕಿಕೊಂಡ

0

ಗೂನಡ್ಕದಲ್ಲಿ ನಡೆದ ಘಟನೆ

ಕಳ್ಳನೊಬ್ಬ ಸ್ಕೂಟಿ  ವಾಹನವನ್ನು ಕದ್ದು ಬಂದು  ಹೋಟೆಲ್ ಒಂದರ  ಶೌಚಾಲಯದಲ್ಲಿ ನಿದ್ದೆ ಮಾಡಿ ಸಿಕ್ಕಿಹಾಕಿಕೊಂಡ ಘಟನೆ ವರದಿಯಾಗಿದೆ. 
ಮಂಡ್ಯದ ನಿವಾಸಿ ಸುಲ್ತಾನ್ ಎಂಬಾತ ಮಂಗಳೂರು ಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಸ್ಕೂಟಿ ಕದ್ದು ಬಂದು ಮಂಡ್ಯದತ್ತ ಹೋಗುತ್ತಿದ್ದ ಸಂದರ್ಭ ಏಪ್ರಿಲ್ 11 ರಂದು ರಾತ್ರಿ 7.30 ಕ್ಕೆ   ಗೂನಡ್ಕ ಸಮೀಪದ ದೊಡ್ಡಡ್ಕದಲ್ಲಿ ತಾಜುದ್ದೀನ್ ಟರ್ಲಿ ಎಂಬುವವರ ಇಂಡಿಯನ್ ಗೇಟ್ ಹೋಟೆಲ್ ನಲ್ಲಿ ಟೀ ಕುಡಿಯಲೆಂದು ನಿಲ್ಲಿಸಿದ್ದಾನೆ.
ಟೀ ಕುಡಿದ ಬಳಿಕ ಶೌಚಾಲಯಕ್ಕೆ ಎಂದು ಹೋದವನು ಸುಮಾರು ಅರ್ಧ ಗಂಟೆ ಕಳೆದರೂ ಹೊರ ಬಾರದೆ ಇದ್ದಾಗ ಹೋಟೆಲ್ ನಲ್ಲಿ ಇದ್ದವರು ಶೌಚಾಲಯದ ಬಾಗಿಲನ್ನು ಬಡಿದಿದ್ದಾರೆ. ಆದರೆ ಒಳಗಿನಿಂದ ಯಾವುದೇ ಶಬ್ದಗಳು ಬಾರದಿದ್ದಾಗ ಶೌಚಾಲಯದ ಬಾಗಿಲಿನ ಮೇಲ್ಭಾಗದ ರಂದ್ರದಿಂದ ಇಣುಕಿ ನೋಡಿದಾಗ ಆತ ಕೆಳಗೆ ಬಿದ್ದಿರುವುದು ಕಂಡುಬಂದಿದೆ.
ಗಾಬರಿಗೊಂಡ ಹೋಟೇಲಿನವರು ಆತನ ಮೇಲೆ ನೀರು ಹಾಕಿದ್ದಾರೆ.
ಈ ವೇಳೆ ನಿದ್ದೆಯಿಂದ ಎದ್ದ ಆತ  ಶೌಚಾಲಯದ ಬಾಗಿಲು ತೆಗೆದು ಹೊರಬಂದಿದ್ದಾನೆ.
ಈ ವೇಳೆ ಅವನ ಬಳಿ ವಿಚಾರಿಸಿದಾಗ ಸಂಶಯಸ್ಪದವಾಗಿ ಮಾತನಾಡಿದ್ದು ಬಳಿಕ ಅಲ್ಲಿಂದ ಸ್ಕೂಟಿಯಲ್ಲಿ ಮಡಿಕೇರಿ ಕಡೆ ತೆರಳಿದ್ದಾನೆ ಎನ್ನಲಾಗಿದೆ.
ಆತನ ಮೇಲೆ ಸಂಶಯಗೊಂಡ ಹೋಟೆಲ್ ನವರು ಕಲ್ಲುಗುಂಡಿ ಪೊಲೀಸರಿಗೆ ಮಾಹಿತಿ ನೀಡಿದ್ದು,  ಕಲ್ಲುಗುಂಡಿಯಲ್ಲಿ ತಪಾಸಣಾ ಕಾರ್ಯದಲ್ಲಿ ನಿರತರಾಗಿದ್ದ ಪೊಲೀಸರು ಆತನನ್ನು ತಡೆದು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.
ಬಳಿಕ ಆತನನ್ನು  ಸುಳ್ಯ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಕೋಟಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಾಗ ಸ್ಕೂಟಿ ವಾಹನವೊಂದು ಕಳ್ಳತನ ವಾಗಿರುವ ದೂರು ದಾಖಲಾಗಿರುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಬಳಿಕ ಅಲ್ಲಿಯ ಪೊಲೀಸರು ಸುಳ್ಯಕ್ಕೆ ಬಂದು ಆತನನ್ನು ಮತ್ತು ವಾಹನವನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.