ಪುತ್ತೂರು ವಿಧಾನಸಭಾ ಕ್ಷೇತ್ರದ ಸ್ಪರ್ಧೆಯಲ್ಲಿ ಸುಳ್ಯದ ಐವರು!

0

ಬಿಜೆಪಿ, ಜೆಡಿಎಸ್ ಸಹಿತ ಪ್ರಮುಖ ಪಕ್ಷಗಳಿಂದ ಸ್ಪರ್ಧೆ

ಕಳೆದ 60 ವರ್ಷಗಳಿಂದಲೂ ಸುಳ್ಯ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರ. ಹಾಗಾಗಿ ಇಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗೆ ಹೊರತುಪಡಿಸಿ ಉಳಿದ ಸಮುದಾಯದ ನಾಯಕರಿಗೆ ಇಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ. ಆದರೆ ಇದೀಗ ಪಕ್ಕದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಐವರು ಸ್ಪರ್ಧಾ ಕಣದಲ್ಲಿರುವುದು ವಿಶೇಷ.

ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಈಗ ಸ್ಪರ್ಧಿಯಾಗಿರುವ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ತವರುಮನೆ ಸುಳ್ಯ. ಈಗ ವಾಸ್ತವ್ಯ ಇರುವ ಕಡಬ ಕೂಡಾ ಸುಳ್ಯ ವಿಧಾನಸಭಾ ಕ್ಷೇತ್ರ. ಇದೇ ಕ್ಷೇತ್ರದಲ್ಲಿ ಅವರು ಒಂದು ಬಾರಿ ನಗರ ಪಂಚಾಯತ್ ಅಧ್ಯಕ್ಷರಾಗಿ, ಮೂರು ಬಾರಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದಾರೆ.

ಇತ್ತೀಚೆಗಷ್ಟೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿ ಚುನಾವಣೆಗೆ ಸ್ಪರ್ಧಿಸುತ್ತಿರುವ ದಿವ್ಯಪ್ರಭಾ ಚಿಲ್ತಡ್ಕ ಸುಳ್ಯ ತಾಲೂಕಿನ ಗುತ್ತಿಗಾರಿನವರು. ರಾಜಕೀಯ ಹಿನ್ನೆಲೆಯಿಂದಲೇ ಬಂದಿರುವ ದಿವ್ಯ ಪ್ರಭಾ ಈ ಹಿಂದೆ ರಾಜ್ಯ ಸಮಾಜ‌ ಕಲ್ಯಾಣ ಮಂಡಳಿಯ ಅಧ್ಯಕ್ಷರಾಗಿದ್ದವರು.

ಈ ಬಾರಿ ಪುತ್ತೂರಿನಲ್ಲಿ ಎಸ್‌ಡಿಪಿಐ ಅಭ್ಯರ್ಥಿಯಾಗಿರುವ ಶಾಫಿ ಬೆಳ್ಳಾರೆಯವರು ಸುಳ್ಯ ತಾಲೂಕಿನ ಬೆಳ್ಳಾರೆಯವರು. ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿಯಾಗಿರುವ ಇವರು ಈಗ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿದ್ದು, ಅಲ್ಲಿಂದಲೇ ಸ್ಪರ್ಧೆ ನಡೆಸುತ್ತಿದ್ದಾರೆ.

ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಯಾಗಿರುವ ಡಾ. ಬಿ.ಕೆ. ವಿಶುಕುಮಾರ್ ಅವರು ಮೂಲತಃ ಸುಳ್ಯ ತಾಲೂಕಿನವರು. ಇಲ್ಲಿನ ಪಂಜದಲ್ಲಿ ಹುಟ್ಟಿ ಬೆಳೆದ ಅವರು . ಮೈಸೂರಿನಲ್ಲಿ ಕೃಷಿ ವಿಜ್ಞಾನಿಯಾಗಿ ಸ್ವಂತ ಸಂಸ್ಥೆಗಳನ್ನು ಸ್ಥಾಪಿಸಿದ್ದರು.
ಪ್ರಸ್ತುತ ಪುತ್ತೂರಿನಲ್ಲಿ ವಾಸ್ತವ್ಯ ಹೊಂದಿದ್ದಾರೆ.

ಕರ್ನಾಟಕ ರಾಷ್ಟ್ರ ಸಮಿತಿಯಿಂದ ಸ್ಪರ್ಧಿಸುತ್ತಿರುವ ಐವನ್ ಫೆರಾವೋ ಸುಳ್ಯ ತಾಲೂಕಿನ ಬೆಳ್ಳಾರೆಯ ಪನ್ನೆಯವರು.

ಸುಳ್ಯ , ಪುತ್ತೂರು, ಬೆಳ್ತಂಗಡಿ ದ್ವಿಸದಸ್ಯ ಕ್ಷೇತ್ರ ಇರುವಾಗ ಹಾಗೂ ಸುಳ್ಯ, ಪುತ್ತೂರು ದ್ವಿಸದಸ್ಯ ಕ್ಷೇತ್ರ ಇರುವಾಗ ಎರಡು ಬಾರಿ ಸುಳ್ಯ ತಾಲೂಕಿನ ಕೂಜುಗೋಡು ವೆಂಕಟ್ರಮಣ ಗೌಡರು ಶಾಸಕರಾಗಿದ್ದರು. ಆ ಬಳಿಕ ಸುಳ್ಯ ತಾಲೂಕಿನ ಕೂಜುಗೋಡು ಸುಬ್ರಹ್ಮಣ್ಯ ಗೌಡರು ಬೆಳ್ತಂಗಡಿಯಲ್ಲಿ ಶಾಸಕರಾಗಿದ್ದರು. ಬಹಳ ವರ್ಷಗಳ ಬಳಿಕ ಈ ಕ್ಷೇತ್ರದ ಡಿ..ವಿ.ಸದಾನಂದ ಗೌಡರು ಪುತ್ತೂರಿನಲ್ಲಿ ಶಾಸಕರಾದರು. ನಂತರ ಸುಳ್ಯ ವಿಧಾನಸಭಾ ಕ್ಷೇತ್ರದವರಾಗಿದ್ದ ಶಕುಂತಲಾ ಶೆಟ್ಟಿ ಪುತ್ತೂರಿನಲ್ಲಿ ಶಾಸಕರಾದರೆ, ಶೋಭಾ ಕರಂದ್ಲಾಜೆಯವರು ಬೆಂಗಳೂರಿನಲ್ಲಿ ಶಾಸಕರಾಗಿದ್ದರು.

ಈ ಬಾರಿ ಸುಳ್ಯ ತಾಲೂಕಿನ ಐವರು ಪುತ್ತೂರಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅದೃಷ್ಟ ಒಲಿದು ಬರಲಿದೆಯೇ ಎಂದು ಕಾದುನೋಡಬೇಕಾಗಿದೆ.