ಎಸ್ಸೆಸ್ಸೆಲ್ಸಿಯಲ್ಲಿ ಮೂರನೇ ರ್‍ಯಾಂಕ್ ಪಡೆದ ಮಹತಿಗೆ ಶೃಂಗೇರಿ ಶ್ರೀ ಗೌರವಾರ್ಪಣೆ

0

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ರಲ್ಲಿ 623 ಅಂಕ ಪಡೆದು ರಾಜ್ಯಕ್ಕೆ ಮೂರನೇ ರ್‍ಯಾಂಕ್ ಪಡೆದ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ, ಬಳ್ಪ ನಿವಾಸಿ ಬಿ.ವಿಶ್ವೇಶ್ವರ ಭಟ್- ಪುಷ್ಪಲತಾ ದಂಪತಿ ಪುತ್ರಿ ಮಹತಿ ಬಿ. ಅವರನ್ನು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ತತ್ಕರಕಮಲಸಂಜಾತ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿ ಗೌರವಿಸಿದರು.

ಶೃಂಗೇರಿ ಮಠದಲ್ಲಿ ನಡೆಯುತ್ತಿರುವ ಜಗದ್ಗುರುಗಳ ಚಾತುರ್ಮಾಸ್ಯ ಕಾರ್ಯಕ್ರಮ ಪ್ರಯುಕ್ತ ಕರಾಡ ಬ್ರಾಹ್ಮಣ ಸಮಾಜ ಶೃಂಗೇರಿ ಸಂಪರ್ಕ ಸಮಿತಿ ವತಿಯಿಂದ ನಡೆದ ಗುರುದರ್ಶನ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಕರಾಡ ಬ್ರಾಹ್ಮಣ ಸಮಾಜ ಸಂಘದ ವತಿಯಿಂದ ಕೊಡಮಾಡಿದ ಚಿನ್ನದ ಪದಕ ನೀಡಿ ಮಹತಿ ಬಿ. ಅವರನ್ನು ಜಗದ್ಗುರುಗಳು ಗೌರವಿಸಿದರು.

ಈ ಸಂದರ್ಭ ಶೃಂಗೇರಿ ಸಂಪರ್ಕ ಸಮಿತಿ ಸಂಚಾಲಕ ಬಾಲಕೃಷ್ಣ ಭಟ್ ಕೋಳಿಕ್ಕೆಜೆ, ಸುಳ್ಯ ತಾಲೂಕು ಕರ್‍ಹಾಡ ಬ್ರಾಹ್ಮಣ ಸಮಾಜ ಸಂಘದ ಅಧ್ಯಕ್ಷ ಶ್ರೀನಿವಾಸ ಭಟ್ ಜಾಲ್ಸೂರು, ಸಮಾಜದ ಹಿರಿಯರಾದ ಕನಕಮಜಲು ಪದ್ಮನಾಭ ಭಟ್ ಉಪಸ್ಥಿತರಿದ್ದರು.