ಎಲಿಮಲೆ : ರಬ್ಬರ್ ಟ್ಯಾಪರ್ ದಂಪತಿ ಆತ್ಮಹತ್ಯೆ ಪ್ರಕರಣ

0

ಜನಾನುರಾಗಿಯಾಗಿದ್ದ ದಂಪತಿ ಅಗಲಿಕೆಗೆ ಊರವರ ಕಂಬನಿ

ಎಲಿಮಲೆಯ‌ಲ್ಲಿ ವಾಸವಾಗಿದ್ದು ಟ್ಯಾಪರ್ ಕಾರ್ಮಿಕರಾಗಿರುವ ತಮಿಳುನಾಡು ಮೂಲದ ಶಿವಕುಮಾರ ಯಾನೆ ರಾಜನ್ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿವೆ.

ಕಳೆದ ಹಲವು ವರ್ಷಗಳಿಂದ ನೆಲ್ಲೂರು ಕೆಮ್ರಾಜೆ ಗ್ರಾಮದ ಎಲಿಮಲೆಯಲ್ಲಿ ಸ್ವಂತ ಮನೆಯಲ್ಲಿ ವಾಸ್ತವ್ಯ ಮಾಡಿಕೊಂಡು, ಕಳೆದ ಕೆಲವು ವರ್ಷಗಳಿಂದ ದೇವಚಳ್ಳ ಗ್ರಾಮದ ಗುಡ್ಡೆ ಎಂಬಲ್ಲಿ ಜಾಗ ಖರೀದಿಸಿ ಟ್ಯಾಪಿಂಗ್ ಮಾಡುತ್ತಿದ್ದ ರಾಜನ್ ಮತ್ತು ಅವರ ಪತ್ನಿ ಜೀವನ ಸಾಗಿಸುತ್ತಿದ್ದರೆನ್ನಲಾಗಿದೆ. ಮೃತರ ಮಗ ಬೆಂಗಳೂರಿನಲ್ಲಿ ಕೆಲಸಕ್ಕಿದ್ದು ಓರ್ವ ಮಗಳನ್ನು ಉಪ್ಪಿನಂಗಡಿ ಸಮೀಪ ಮದುವೆ ಮಾಡಿ ಕೊಡಲಾಗಿದೆ. ಮತ್ತೋರ್ವರನ್ನು ವಳಲಂಬೆಗೆ ಮದುವೆ ಮಾಡಿ ಕೊಡಲಾಗಿದ್ದು ಅವರು ಸುಳ್ಯದಲ್ಲಿ ವಾಸವಿದ್ದಾರೆ.

ನಿನ್ನೆ ದೇವಚಳ್ಳ ದ ಗುಡ್ಡೆ ಎಂಬಲ್ಲಿಯ ತನ್ನ ತೋಟದಲ್ಲಿ ಅಡಿಕೆ ಗಿಡ ನೆಡಲು ಜನ ಹೇಳಿದ್ದು ಅವರು ಗುಡ್ಡೆಗೆ ಬಂದು ಕಾದರೂ ಬರದಿದ್ದಾಗ ಮತ್ತು ಪೋನ್ ಮಾಡಿದರೂ ಅವರು ಕರೆ ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ಎಲಿಮಲೆ ಮನೆಗೆ ಬಂದಾಗ ಎದುರು ಬಾಗಿಲು ಹಾಕಿಕೊಂಡಿತ್ತೆನ್ನಲಾಗಿದೆ‌. ಟಿವಿ ಚಾಲನೆಯಲ್ಲಿಯೇ ಇತ್ತೆನ್ನಲಾಗಿದೆ. ಹೀಗಾಗಿ ಅವರು ಪಕ್ಕದ ಮನೆಯವರಿಗೆ ವಿಷಯ ತಿಳಿಸಿ ಅವರೆಲ್ಲ ಬಂದು ಕರೆದರೂ ಯಾರ ಪ್ರತಿಕ್ರಿಯೆ ಯು ಬಾರದ ಕಾರಣ ಹಿಂದಿನ ಬಾಗಿಲಿನ ಮೂಲಕ ಒಳ ಹೊಕ್ಕು ನೋಡಿದಾಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಇದರಲ್ಲಿ ರಾಜನ್ ರವರು ಮೊದಲು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದ್ದು ಬಳಿಕ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಹೇಳಲಾಗುತ್ತಿದೆ‌. ನಿನ್ನೆ ರಾತ್ರಿ ಗಂಡ ಹೆಂಡತಿ ಯ ಮಧ್ಯೆ ಸಣ್ಣ ಪುಟ್ಟ ಜಗಳ ನಡೆದಿದ್ದು, ತಾಯಿ ಸುಳ್ಯದ ತನ್ನ ಮಗಳೊಂದಿಗೆ ಈ ಬಗ್ಗೆ ಹೇಳಿಕೊಂಡಿದ್ದರೆನ್ನಲಾಗಿದೆ. ಆತ್ಮಹತ್ಯೆ ಗೆ ನಿಖರ ಕಾರಣ ತಿಳಿದು ಬಂದಿಲ್ಲ.