ದೇಸೀ ಕಾವ್ಯ ಚಾರುವಸಂತವನ್ನು ನಿರ್ದೇಶಿಸಲಿರುವ ಡಾ|| ಜೀವನ್ ರಾಂ ಸುಳ್ಯ

0

ಬೆಂಗಳೂರಿನಲ್ಲಿ ತಾಲೀಮಿಗೆ ಚಾಲನೆ ನೀಡಿದ ಡಾ. ಎಂ.ಮೋಹನ ಆಳ್ವ

‘ಹಲವು ಅತ್ಯುತ್ತಮ ಕೃತಿಗಳನ್ನು ಕನ್ನಡ ನಾಡಿಗೆ ನೀಡಿದ ನಾಡೋಜ ಹಂ.ಪ.ನಾಗರಾಜಯ್ಯ ವಿರಚಿತ ದೇಸೀಕಾವ್ಯ ಚಾರುವಸಂತ ಹದಿನಾಲ್ಕು ಭಾಷೆಗಳಿಗೆ ಅನುವಾದಗೊಂಡಿರುವ ಪ್ರಸಿದ್ಧ ಕೃತಿ. ಇದನ್ನು ರಂಗಕರ್ಮಿ ಜೀವನ್ ರಾಂ ಸುಳ್ಯರವರು ನಿರ್ದೇಶಿಸುತ್ತಿರುವುದು ಬಹಳ ಹೆಮ್ಮೆ ಅನಿಸಿದೆ’ ಎಂದು ಮೂಡುಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ
ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.

ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯಲಿರುವ ಚಾರುವಸಂತ ನಾಟಕದ ತಾಲೀಮನ್ನು ಬೆಂಗಳೂರಿನ ವುಡ್ ಲ್ಯಾಂಡ್ಸ್ ಹೋಟೇಲ್ ನಲ್ಲಿ ನಾಟಕದ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿದ್ದ ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆಯವರು
ಚಾರುವಸಂತದ ವಿಶೇಷತೆಯನ್ನು ವಿವರಿಸುತ್ತಾ
“ನನ್ನ ಗುರುಗಳಾದ ಹಂಪನಾ ಅವರ ಕೃತಿಯೊಂದು ರಂಗಕೃತಿಯಾಗುತ್ತಿರುವುದಕ್ಕೆ ಬಹಳ ಸಂತಸವಾಗುತ್ತಿದೆ. ಹಲವು ಮಹತ್ವದ ರಂಗ ಪ್ರಯೋಗಗಳನ್ನು ರಂಗಕ್ಕೆ ತಂದಿರುವ ಡಾ.ಜೀವನ್ ರಾಂ ಸುಳ್ಯರ ನಿರ್ದೇಶನದಲ್ಲಿ ಈ ಚಾರುವಸಂತವು ಕನ್ನಡ ರಂಗಭೂಮಿಯಲ್ಲಿ ಹೊಸ ಸಂಚಲನ ಮೂಡಿಸಲಿ” ಎಂದು ಶುಭ ಹಾರೈಸಿದರು.

ಕೃತಿಕಾರ ನಾಡೋಜ ಹಂ.ಪ.ನಾಗರಾಜಯ್ಯ ಚಾರುವಸಂತದ ರಂಗರೂಪವನ್ನು ಸಿದ್ಧ ಪಡಿಸಿದ ಸಾಹಿತಿ, ರಂಗಕರ್ಮಿ ಡಾ.ನಾ.ದಾ.ಶೆಟ್ಟಿ ಯವರ ಶ್ರಮವನ್ನು ಶ್ಲಾಘಿಸಿದರು.

ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರ ಜೊತೆ ನೀನಾಸಂ ರಂಗಾಯಣಗಳಲ್ಲಿ ಅನುಭವ ಪಡೆದ ಕೆಲವು ಕಲಾವಿದರೂ ಪಾತ್ರವಹಿಸಲಿದ್ದು ಅಕ್ಟೋಬರ್ ಕೊನೆಯ ವಾರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು
ನಾಟಕದ ನಿರ್ದೇಶಕ ಡಾ|| ಜೀವನ್ ರಾಂ ಸುಳ್ಯ ತಿಳಿಸಿದರು.