ವಿನೋಬನಗರ: ವಿವೇಕಾನಂದ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ ಅವರಿಗೆ ಸಾಧಕರತ್ನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

0

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ನಾಡಿನ ಸಮಾಚಾರ ಕನ್ನಡ ದಿನಪತ್ರಿಕೆ, ನಾಡಿನ ಸಮಾಚಾರ ಸೇವಾ ಸಂಘ ಗೋಕಾಕ್ ಇದರ ಸಂಯುಕ್ತಾಶ್ರಯದಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಗುರುವಂದನಾ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಸೇವೆಯನ್ನು ಪರಿಗಣಿಸಿ ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ ಅವರಿಗೆ ಸಾಧಕರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ಸೆ.24ರಂದು ಪ್ರಧಾನ ಮಾಡಲಾಯಿತು.


ಬೆಳಗಾವಿಯ ಕುಮಾರ ಗಂದರ್ವ ಕಲಾ ಮಂದಿರದಲ್ಲಿ ನಾಡಿನ ಸಮಾಚಾರ ಸೇವಾ ಸಂಘ, ನಾಡಿನ ಸಮಾಚಾರ ಕನ್ನಡ ದಿನಪತ್ರಿಕೆ ಆಶ್ರಯದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗಿದ್ದು, ಜಯಪ್ರಸಾದ್ ಅವರ ಪತ್ನಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕಿಯಾಗಿರುವ ಶ್ರೀಮತಿ ಪೂರ್ಣಿಮಾ ಜಯಪ್ರಸಾದ್ ಅವರಿಗೆ ಸಾವಿತ್ರಿಬಾಪುಲೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಜಯಪ್ರಸಾದ್ ಕಾರಿಂಜ ಅವರು ಕಳೆದ ಹನ್ನೆರಡು ವರ್ಷಗಳಿಂದ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಶಿಕ್ಷಣದ ಜೊತೆಗೆ ಕನಕಮಜಲಿನ ಯುವಕ ಮಂಡಲದ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಧಾರ್ಮಿಕ ಹಾಗೂ ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದು, ಇವೆಲ್ಲವನ್ನು ಪರಿಗಣಿಸಿ ಸಾಧಕರತ್ನ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದರು.