ಶೆಟ್ಟಿಮಜಲಿನಲ್ಲಿ ಮತ್ತೆ ಚಿರತೆಯ ಅಟ್ಟ ಹಾಸ

0

ಆತಂಕದಲ್ಲಿ ಗ್ರಾಮಸ್ಥರು

ಸಾಕು ನಾಯಿಗಳು, ದನಕರುಗಳು ಚಿರತೆಯ ಪಾಲು

ಮರ್ಕಂಜ ಭಾಗದಲ್ಲಿ ಕಳೆ‌ದ ಕೆಲ ಸಮಯಗಳಿಂದ ಚಿರತೆ ಓಡಾಟ ಹೆಚ್ಚಾಗಿದ್ದು, ದನ ಕರು ನಾಯಿಗಳು ಚಿರತೆಯ ಪಾಲಾಗುತ್ತಿದೆ.

ರಾತ್ರಿ ವೇಳೆ ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿರುವ ಚಿರತೆ ಸಾಕುಪ್ರಾಣಿಗಳನ್ನು ಹೊತ್ತೊಯ್ಯುತ್ತಿದೆ.

ಮರ್ಕಂಜ ಭಾಗದ ಕಟ್ಟೆಕೋಡಿ, ಚೀಮಾಡು ಭಾಗಗಳಲ್ಲಿ ಕಾಣಿಸಿಕೊಂಡಿದ್ದ ಚಿರತೆ ಬಳಿಕ ಕೊರತ್ತೋಡಿ, ಬೊಳ್ಳಾಜೆ ಪರಿಸರದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಬಳಿಕ ಮರ್ಕಂಜ ಗ್ರಾಮದ ಆಸುಪಾಸಿನ ಅರಂತೋಡು ಗ್ರಾಮದ ಅಡ್ಕಬಳೆ ಯಲ್ಲಿ ದನದ ಕರುವೊಂದನ್ನು ಚಿರತೆ ಭೇಟೆಯಾಡಿತ್ತು.‌

ಇದೀಗ ಮರ್ಕಂಜ – ಮಡಪ್ಪಾಡಿ‌ ಭಾಗದ ಶೆಟ್ಟಿ ಮಜಲು ಎಂಬಲ್ಲಿ ಸಾಕು ನಾಯಿಗಳನ್ನು ಚಿರತೆ ಭೇಟೆಯಾಡಿದೆ. ಅಲ್ಲದೇ ಇದೇ ಪರಿಸರದ ಮೂರು ದನಗಳು‌ ಕಾಣದಾಗಿದ್ದು, ಚಿರತೆ ದನಗಳನ್ನು ಭೇಟೆಯಾಡಿರುವ ಶಂಕೆ ವ್ಯಕ್ತವಾಗಿದೆ. ಇದರಿಂದಾಗಿ ಮರ್ಕಂಜದ ಗ್ರಾಮಸ್ಥರಲ್ಲಿ ಭಯ ಮತ್ತು ಆತಂಕ ಹೆಚ್ಚಾಗಿದೆ.‌ ಚಿರತೆಯನ್ನು ಆದಷ್ಟು ಬೇಗ ಹಿಡಿದು ಸ್ಥಳಾಂತರಿಸುವಂತೆಯು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇಲ್ಲದೇ ಇದ್ದರೆ ಪ್ರತಿಭಟನೆಯ ಎಚ್ಚರಿಕೆಯನ್ನು‌ ನೀಡಿದ್ದಾರೆ.‌

ಅರಣ್ಯಾಧಿಕಾರಿಗಳು ಬೋನು ಇಟ್ಟು ಚಿರತೆ ಹಿಡಿಯುವ ಪ್ರಯತ್ನ ಮುಂದುವರಿಸಿರುವುದಾಗಿ ತಿಳಿದು ಬಂದಿದೆ.