ಜ. 10: ಬಳ್ಪದಲ್ಲಿ ನಡೆಯಲಿದೆ ವಿಜೃಂಭಣೆಯ ಗ್ರಾಮೋತ್ಸವ, ಸಾಧಕರಿಗೆ ಸನ್ಮಾನ, ಸರಕಾರಿ ಸೇವೆಗಳಿಗೆ ಸ್ಥಳದಲ್ಲೇ ನೋಂದಣಿ

0

ಗ್ರಾಮ ವಿಕಾಸ ಪ್ರತಿಷ್ಠಾನ ಬಳ್ಪ – ಕೇನ್ಯ, ಗ್ರಾಮ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ಸಂಸದರ ಆದರ್ಶ ಗ್ರಾಮದ ಗ್ರಾಮೋತ್ಸವ 2024 ಜ. 10ರಂದು ಬಳ್ಪ ಸ.ಹಿ.ಪ್ರಾ. ಶಾಲಾ ಆವರಣದಲ್ಲಿ ನಡೆಯಲಿದೆ.
ಬೆಳಿಗ್ಗೆ 10 ಗಂಟೆಗೆ ಕೃಷಿ ಹಾಗೂ ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆ ನಡೆಯಲಿದೆ. ಬಳಿಕ ಕೃಷಿ ವಿಜ್ಞಾನಿಗಳಿಂದ ಮಾಹಿತಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಬಳ್ಪ, ಕೇನ್ಯ ಅಂಗನವಾಡಿ ಪುಟಾಣಿಗಳಿಂದ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಬಳಿಕ ಸಾಂಸ್ಕೃತಿಕ ವೈಭವ, ಸಂಜೆ 5 ಗಂಟೆಯಿಂದ ಒಡಿಯೂರು ಶ್ರೀಗಳ ಉಪಸ್ಥಿತಿಯೊಂದಿಗೆ ಭಜನಾ ಸಂಕೀರ್ತನಾ ಮೆರವಣಿಗೆ ನಡೆಯಲಿದೆ. ಸಂಜೆ 6ರಿಂದ ಸಂಸದ ನಳಿನ್ ಕುಮಾರ್ ಕಟೀಲುರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ರಾಜ್ಯ ಸಚಿವ ಭಗವಂತ್ ಖೂಬಾ ಉದ್ಘಾಟನೆ ಮಾಡಲಿದ್ದಾರೆ. ಶ್ರೀ ಕ್ಷೇತ್ರ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಉಳಿದಂತೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಾಜಿ ಸಚಿವ ಎಸ್. ಅಂಗಾರ ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಕಲಾ ಸಂಗಮ ಕಲಾವಿದರಿಂದ ಶಿವದೂತ ಗುಳಿಗೆ ಎಂಬ ವಿಭಿನ್ನ ಶೈಲಿಯ ನಾಟಕ ನಡೆಯಲಿದೆ ಎಂದು ಬಳ್ಪ ಕೇನ್ಯ ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ ತಿಳಿಸಿದ್ದಾರೆ.

ಗ್ರಾಮೋತ್ಸವದ ವಿಶೇಷತೆ: *ಹಲವು ವಿಧದ ಕೃಷಿ ಉಪಕರಣಗಳ ಸ್ಟಾಲ್ ಗಳು
*ವಿಜ್ಞಾನಿಗಳಿಂದ ಕೃಷಿ ಮಾಹಿತಿ
*ಕುಂಬಾರರ ಮೂಲಕ ಮಡಿಕೆ ತಯಾರಿ ಮಾಡುವ ಪ್ರಾತ್ಯಕ್ಷಿಕೆ, *ಮುತ್ತು ಬೆಳಸುವವರ ಮಾಹಿತಿ,
*ಡ್ರೋನ್ ಮೂಲಕ ಕೀಟನಾಶಕ ಸಿಂಪಡಿಸುವ ಪ್ರಾತ್ಯಕ್ಷಿಕೆ,
*ವಿವಿಧ ಕೃಷಿ ಉಪಕರಣಗಳ ಪ್ರದರ್ಶನ, *ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳು, ಸೌಲಭ್ಯಗಳ ಮಾಹಿತಿ (ಬ್ಯಾಂಕ್ ಅಧಿಕಾರಿಗಳಿಂದ)
*ಹಾಗೂ ಗ್ಯಾಸ್ ಬಳಕೆದಾರರ KYC ಯನ್ನು ಸ್ಥಳದಲ್ಲೆ ಮಾಡಿಕೊಡವುದು (ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ,OTP ಗಾಗಿ ಮೊಬೈಲ್ ತರಬೇಕು)