ಭಕ್ತಿ, ಸಡಗರ ಸಂಭ್ರಮದಿಂದ ನಡೆದ ರೆಂಜಾಳ‌ ವಾರ್ಷಿಕ ಜಾತ್ರೋತ್ಸವ

0

ಈ ಬಾರಿ ಶ್ರೀ ದೇವರಿಗೆ ನಡೆಯಿತು ತುಲಾಭಾರ ಸೇವೆ, ಸಿಡಿಮದ್ದು ಸೇವೆ

ಸಂಜೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ

ಕಲಾಭಿಮಾನಿಗಳ ಜನಮನಗೆದ್ದ ಹಾಸ್ಯಮಯ ನಾಟಕ “ಶಾಂಭವಿ”

ಮರ್ಕಂಜ ಮತ್ತು‌ ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಲ್ಲಿ ಒಂದಾದ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವವು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಭಕ್ತಿ, ಸಡಗರ, ಸಂಭ್ರಮದಿಂದ ನಡೆಯಿತು.

ನಿನ್ನೆ ಬೆಳಗ್ಗಿನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಜನಾ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ 7ಕ್ಕೆ ಪೂಜೆ ನಡೆದ ಬಳಿಕ ನೃತ್ಯ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ :
ಸಂಜೆ ರೆಂಜಾಳ, ದಾಸರಬೈಲು, ಬೊಳ್ಳಾಜೆ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ರಸಸಂಜೆ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ಮುದ್ದು ಪುಟಾಣಿ ಕು| ಪ್ರಣನ್ಯ ಕುದ್ಪಾಜೆ ಇವರಿಂದ “ನೃತ್ಯ ವೈಭವ” ನಡೆಯಿತು.

ರಾತ್ರಿ ಉತ್ಸವದ ಬಳಿಕ ಸುಳ್ಯ ತಾಲೂಕಿನಲ್ಲಿ ಪ್ರಪ್ರಥಮ ಭಾರಿಗೆ ಅಭಿನಯ ಕಲಾವಿದರು ಉಡುಪಿ ಅಭಿನಯಿಸಿದ ಸಾಮಾಜಿಕ‌ ತುಳು ಹಾಸ್ಯಮಯ “ಶಾಂಭವಿ” ನಾಟಕ ಪ್ರದರ್ಶನ ಗೊಂಡು, ತುಂಬಿಕೊಂಡ ಸಭಾಪ್ರೇಕ್ಷಕರ ಜನಮನಗೆದ್ದಿತು.

ಸಿಡಿಮದ್ದು ಪ್ರದರ್ಶನ
ವಸಂತ ಕಟ್ಟೆಪೂಜೆಯ ಸಂದರ್ಭದಲ್ಲಿ ವಿಪ್ರ ವೇದಿಕೆ ಮರ್ಕಂಜದ ವತಿಯಿಂದ ರೆಂಜಾಳ ಕ್ಷೇತ್ರದಲ್ಲಿ ಪ್ರಥಮ‌ ಬಾರಿಗೆ ಸೇವೆಯಾಗಿ ಸಿಡಿಮದ್ದು ಪ್ರದರ್ಶನ ನಡೆಯಿತು.

ತುಲಾಭಾರ ಸೇವೆ
ರೆಂಜಾಳ‌ ಕ್ಷೇತ್ರದಲ್ಲಿ ಈ ವರ್ಷದಿಂದ ಶ್ರೀ ದೇವರಿಗೆ ತುಲಾಭಾರ ಸೇವೆ ಆರಂಭಗೊಂಡಿತು. ವಾರ್ಷಿಕ ಜಾತ್ರೋತ್ಸವದ ಜ.31ರಂದು ನಡೆಯುವ ತುಲಾಭಾರ ಸೇವೆ
ಶ್ರೀ ಕ್ಷೇತ್ರದ ತಂತ್ರಿಗಳ ಸಮಕ್ಷಮದಲ್ಲಿ ಮಧ್ಯಾಹ್ನ ನಡೆದುದು ವಿಶೇಷವಾಗಿತ್ತು.

ಭಜನಾ ಕಾರ್ಯಕ್ರಮ ಜಾತ್ರೋತ್ಸವದ ಪ್ರಯುಕ್ತ ಜ.24ರಿಂದ ಜ.31ರವರೆಗೆ ಶಿವಪ್ರಿಯ ಭಜನಾ ತಂಡ ರೆಂಜಾಳ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮಿನುಂಗೂರು- ಮರ್ಕಂಜ, ಭ್ರಾಮರಿ ಭಜನಾ ಮಂಡಳಿ ಬೊಳ್ಳಾಜೆ, ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಕೊರತ್ತೋಡಿ, ನೆಲ್ಲೂರು ಕೆಮ್ರಾಜೆ, ಶ್ರೀ ಮಹಾವಿಷ್ಣು ಭಜನಾ ಮಂಡಳಿ ಕಾವೂರು – ಮರ್ಕಂಜ, ಶ್ರೀ ಮಂಜುನಾಥ ಭಜನಾ ತಂಡ ಗಟ್ಟಿಗಾರು, ನೆಲ್ಲೂರು ಕೆಮ್ರಾಜೆ, ಶ್ರೀ ಶಿವ ಪಂಚಾಕ್ಷರೀ ಭಜನಾ ಮಂಡಳಿ ರೆಂಜಾಳ, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಅಂಗಡಿಮಜಲು, ಶೃತಿ ಯುವತಿ ಮಂಡಲ ಮರ್ಕಂಜ, ಸ್ಪೂರ್ತಿ ಮಹಿಳಾ ಮಂಡಲ ಮರ್ಕಂಜ, ಶ್ರೀ ಧರ್ಮಶಾಸ್ತಾ ಭಜನಾ ಮಂಡಳಿ ಪಿಲಿಕಜೆ ಅಮರಮುಡ್ನೂರು ಇವರಿಂದ ಭಜನಾ ಸೇವೆ ನಡೆಯಿತು.

ಅನ್ನದಾನ
ರೆಂಜಾಳ‌ ಶ್ರೀ ಕ್ಷೇತ್ರದಲ್ಲಿ ಜ.24ರಿಂದ ಜ.31ರವರೆಗೆ ಪ್ರತಿನಿತ್ಯ ಅನ್ನದಾನ, ಉಪಹಾರದ ವ್ಯವಸ್ಥೆ ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ‌ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ರೈ ಹೈದಂಗೂರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸೇವಾ ಸಮಿತಿ ಅಧ್ಯಕ್ಷ ಬಾಣೂರು ಪುಟ್ಟಣ್ಣ ಗೌಡ, ಶ್ರೀ ಶಿವಪಂಚಾಕ್ಷರಿ ಭಜನಾ ಮಂಡಳಿ ಅಧ್ಯಕ್ಷ ರಾಜೇಶ ಮಾಸ್ತರ್ ರೆಂಜಾಳ, ಅನ್ನ ಪೂರ್ಣ ಸಮಿತಿ ಅಧ್ಯಕ್ಷ ಚಿನ್ನಪ್ಪ ಗೌಡ ಬೇರಿಕೆ, ಮರ್ಕಂಜ ಗ್ರಾಮ ಆಡಳಿತಾಧಿಕಾರಿ ಅಜ್ಜಯ್ಯ, ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಬಳ್ಳಕ್ಕಾನ ಸೇರಿದಂತೆ ಶ್ರೀ ಕ್ಷೇತ್ರದ ವಿವಿಧ ಸಮಿತಿ, ಉಪಸಮಿತಿಗಳ ಸರ್ವಸದಸ್ಯರು ಸೇರಿದಂತೆ ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡರು.

ಶ್ರೀ ಶಾಸ್ತಾವು ಯುವಕ ಮಂಡಳ ರೆಂಜಾಳ ಸೇರಿದಂತೆ ವಿಪತ್ತು ನಿರ್ವಹಣಾ ಘಟಕ ಸಂಪಾಜೆ, ದೊಡ್ಡತೋಟ ವಲಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮರ್ಕಂಜ, ನೆಲ್ಲೂರು ಕೆಮ್ರಾಜೆ, ಸ್ತ್ರೀ ಶಕ್ತಿ ಸಂಘ ರೆಂಜಾಳ ಮತ್ತಿತರ ಸ್ಥಳೀಯ ಸಂಘಟನೆಗಳ ಸದಸ್ಯರು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದರು.