ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ನೈವೇದ್ಯ ಕೊಠಡಿ ಲೋಕಾರ್ಪಣೆ, ಹಾಗೂ ಧಾನಿಯೋರ್ವರಿಂದ ಚಿನ್ನದ ಪ್ರಭಾವಳಿ ಸಮರ್ಪಣೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಒಳಾಂಗಣದ ಅರಿ ಕೊಟ್ಟಿಲು (ನೈವೇದ್ಯ ಕೊಠಡಿ) ದುರಸ್ತಿ ಕಾರ್ಯ ಈ ಹಿಂದೆ ಆರಂಭಗೊಂಡು ಇದೀಗ ಪೂರ್ಣಗೊಂಡಿದ್ದು ಫೆ.24ರಂದು ದೇವಳದ ವಾರ್ಷಿಕ ಬ್ರಹ್ಮ ಕಲಶೋತ್ಸವದ ವಾರ್ಷಿಕ ದಿನದಂದು ಲೋಕಾರ್ಪಣೆಗೊಳ್ಳಲಿರುವುದಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಫೆ.17 ರಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.


ಇದರ ಅಂಗವಾಗಿ ಫೆ. 22 ರಂದು ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭಗೊಂಡು.ಫೆ. 24ರಂದು ಮುಕ್ತಾಯಗೊಳ್ಳಲಿದೆ. ಫೆ.22 ರಂದು ಪ್ರಾತಕಾಲ 12 ತೆಂಗಿನ ಕಾಯಿ ಗಣಪತಿ ಹವನ ,ವಾಸ್ತು ಪೂಜೆ, ರಾಕ್ಷೋಜ್ಞ ಹೋಮ, ಮತ್ತು ವಾಸ್ತು ಬಲಿ ನಡೆಯಲಿರುವುದು. ಫೆ.23 ರಂದು ಬೆಳಿಗ್ಗೆ ಪವಮಾನ ಹೋಮ ನಡೆಯಲಿದೆ. ಫೆ.24ರಂದು ಬ್ರಹ್ಮಕಲಶೋತ್ಸವದ ವಾರ್ಷಿಕ ದಿನದಂದು ಬೆಳಿಗ್ಗೆ 108 ಸಿಯಾಳ ಭಿಷೇಕ ಹೋಮ ಸಹಿತ 108 ಕಲಶ ರಾಧನೆ ,ಕಲಶಾಭಿಷೇಕ, ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿರುವುದಾಗಿ ಅವರು ತಿಳಿಸಿದರು.

ಫೆ.24ರಂದು ಖ್ಯಾತ ಉದ್ಯಮಿ ಎಎಂಆರ್ ಗ್ರೂಪ್ ಹೈದರಾಬಾದ್ ಇಲ್ಲಿಯ ಶ್ರೀ ಮಹೇಶ್ ರೆಡ್ಡಿ ಅವರು ಅಂದಾಜು ಒಂದು ಕೋಟಿ ಮೌಲ್ಯದ ಚಿನ್ನದ ಪ್ರಭಾವಳಿಯನ್ನು ಶ್ರೀ ದೇವರಿಗೆ ಸಮರ್ಪಣೆ ಮಾಡಲಿದ್ದಾರೆ ಎಂದವರು ತಿಳಿಸಿದರು.