ಅಡ್ಕಾರು ಅಂಜನಾದ್ರಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದಲ್ಲಿ ಕಾಲಾವಧಿ ಜಾತ್ರಾಮಹೋತ್ಸವ ಪ್ರಾರಂಭ

0

ಇಂದು ರಾತ್ರಿ ಹನುಮ ನೇಮೋತ್ಸವ ಹಾಗೂ ಗುಳಿಗರಾಜ ದೈವದ ಕೋಲ – ದೈವ -ದೇವರ ಭೇಟಿ

ಜಾಲ್ಸೂರು ಗ್ರಾಮದ ಅಡ್ಕಾರಿನ ಮಾಯಿಲಕೋಟೆ ಅಂಜನಾದ್ರಿಯ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದ ಕಾಲಾವಧಿ ಜಾತ್ರಾಮಹೋತ್ಸವವು ಬ್ರಹ್ಮಶ್ರೀ ವೇ. ಮೂ. ಪುರೋಹಿತ ನಾಗರಾಜ ಭಟ್ ಅವರ ಮಾರ್ಗದರ್ಶನದಲ್ಲಿ ಫೆ.26ರಂದು ಬೆಳಿಗ್ಗೆ ಹಸಿರುವಾಣಿ ಸಮರ್ಪಣೆಯೊಂದಿಗೆ ಆರಂಭಗೊಂಡಿದ್ದು, ಜಾತ್ರಾಮಹೋತ್ಸವದ ಪ್ರಯುಕ್ತ ಇಂದು ರಾತ್ರಿ ಶ್ರೀ ಹನುಮ ನೇಮೋತ್ಸವ, ಗುಳಿಗರಾಜ ದೈವಕ್ಕೆ ಕೋಲ ಸಮರ್ಪಣೆ ಹಾಗೂ ದೈವ -ದೇವರ ಭೇಟಿ ನಡೆಯಲಿದೆ.

ಫೆ.26ರಂದು ಬೆಳಿಗ್ಗೆ ಸ್ಥಳಶುದ್ಧಿ , ಶುದ್ಧಿಕಲಶ, ಗಣಪತಿ ಹವನ, ಶ್ರೀ ನಾಗ ಸನ್ನಿಧಿಯಲ್ಲಿ ನಾಗತಂಬಿಲ ನಡೆದು, ಹಸಿರುವಾಣಿ ಸಮರ್ಪಣೆಯೊಂದಿಗೆ ಉಗ್ರಾಣ ಮುಹೂರ್ತ ನಡೆಯಿತು.
ಮಧ್ಯಾಹ್ನ ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.

ಸಂಜೆ ಕಲಾಕೇಸರಿ ನೃತ್ಯ ತಂಡದಿಂದ ನೃತ್ಯ ಸಂಭ್ರಮ , ರಾತ್ರಿ ಶ್ರೀ ಆಂಜನೇಯ ಸ್ವಾಮಿಗೆ ರಂಗಪೂಜೆ, ಅನ್ನಸಂತರ್ಪಣೆ ಜರುಗಿತು.
ಈ ಸಂದರ್ಭದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಫೆ.27ರಂದು ಬೆಳಿಗ್ಗೆ ಶ್ರೀ ದೇವರಿಗೆ ಸೀಯಾಳ ಅಭಿಷೇಕ, ಪಂಚಾಮೃತ ಅಭಿಷೇಕ, ಪವಮಾನ ಅಭಿಷೇಕ ನಡೆಯಲಿದ್ದು, ದೀಪ ಪ್ರತಿಷ್ಠೆಯೊಂದಿಗೆ ಆಹ್ವಾನಿತ ತಂಡಗಳಿಂದ ಅಹ:ಪೂರ್ಣ ಭಜನಾ ಕಾರ್ಯಕ್ರಮ ನೆರವೇರಲಿದೆ.
ಪೂರ್ವಾಹ್ನ ಶ್ರೀ ಗುಳಿಗರಾಜ ಸನ್ನಿಧಿಯಲ್ಲಿ ದೇವಕ್ರಿಯಾ ತಂಬಿಲ ಸೇವೆ, ಶ್ರೀ ದೇವರಿಗೆ ಮಹಾಪೂಜೆ, ಬ್ರಹ್ಮಸಂತರ್ಪಣೆ, ಅನ್ನದಾನ ನಡೆಯಲಿದೆ.

ಅಪರಾಹ್ನ ಇಳಂತಾಜೆ ತರವಾಡಿನಲ್ಲಿ ವೀಳ್ಯ ನೀಡಿ ಹನುಮ ದೈವದ ಭಂಡಾರ ತರಲಾಗುವುದು. ಸಂಜೆ ಭಜನಾ ಕಾರ್ಯಕ್ರಮದ ಮಗಳಂ ನಡೆಯಲಿದೆ. ರಾತ್ರಿ ಗುಳಿಗರಾಜ ದೈವದ ಭಂಡಾರ ತೆಗೆದು ಶ್ರೀ ಆಂಜನೇಯ ಸ್ವಾಮಿಯ ಅಂಗಣಪ್ರವೇಶ, ಶ್ರೀ ಹನುಮ ನೇಮೋತ್ಸವ ನಡೆಯಲಿದೆ. ಬಳಿಕ ಗುಳಿಗರಾಜ ದೈವದ ಕೋಲ, ಶ್ರೀ ದೇವರಿಗೆ ಅಲಂಕಾರ ಪೂಜೆ ಬಳಿಕ ಶ್ರೀ ದೇವರ ಬಲಿ ಹೊರಟು ಉತ್ಸವ, ಶ್ರೀ ಭೂತಬಲಿ, ಕಟ್ಟೆಪೂಜೆ, ದರ್ಶನಬಲಿ, ದೈವ – ದೇವರ ಭೇಟಿ, ಬಟ್ಟಲುಕಾಣಿಕೆ, ಶ್ರೀಮುಡಿ ಗಂಧಪ್ರಸಾದ ವಿತರಣೆ ಜರುಗಲಿದೆ.
ಫೆ.28ರಂದು ಬೆಳಿಗ್ಗೆ ಶ್ರೀ ದೇವರಿಗೆ ನವಕ ಕಲಶಾಭಿಷೇಕ, ಎಳನೀರು ಅಭಿಷೇಕ, ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಸಂಪ್ರೋಕ್ಷಣೆ, ಮಂತ್ರಾಕ್ಷತೆ, ಅನ್ನಸಂತರ್ಪಣೆಯೊಂದಿಗೆ ಜಾತ್ರಾಮಹೋತ್ಸವವು ಸಂಪನ್ನಗೊಳ್ಳಲಿದೆ.