ಅರೆಭಾಷೆ ಸೇರಿದಂತೆ ಸಣ್ಣ ಸಣ್ಣ ಭಾಷೆ ಉಳಿಸಿ ಬೆಳೆಸಿ : ಮಾಜಿ ಮುಖ್ಯಮಂತ್ರಿ ಡಿ.ವಿ.ಎಸ್.

“ಕೊಡಗು ಜಿಲ್ಲೆಯಲ್ಲಿ ಕೊಡವ, ಅರೆಭಾಷಿಕರು ಸೇರಿದಂತೆ ಹಲವು ಸಣ್ಣ ಸಣ್ಣ ಭಾಷಿಕ ಸಮಾಜದವರು ಬದುಕಿನ ಬಂಡಿ ಸಾಗಿಸುತ್ತಿದ್ದು, ಎಲ್ಲಾ ಸಣ್ಣ ಸಣ್ಣ ಭಾಷಿಕರೂ ಇಲ್ಲಿಯ ಇತಿಹಾಸ ತಿಳಿದು, ಅಭಿವೃದ್ಧಿಯತ್ತ ಮುನ್ನಡೆಯಬೇಕು” ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಡಿಕೇರಿಯ ಕೊಡಗು ಗೌಡ ಸಮಾಜದಲ್ಲಿ ಫೆ.28ರಂದು ನಡೆದ ಗೌರವ ಪ್ರಶಸ್ತಿ ಪ್ರದಾನ, ಸಂಶೋಧನಾ ಪ್ರಬಂಧ ಮತ್ತು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

‘ಜಾತಿ, ಭಾಷೆ ಮೇಲೆ ಸಂಘರ್ಷ ಮಾಡದೆ ಸಾಮರಸ್ಯದ ಬದುಕು ಕಾಣಬೇಕಿದೆ. ಎಲ್ಲರೂ ಒಂದಾಗಿ ಸಾಗಬೇಕಿದೆ. ಯಾವುದೇ ಸಣ್ಣ ಭಾಷೆಯಾದರೂ ಅದು ಉಳಿಯಬೇಕು ಎಂದು ಡಿ.ವಿ.ಯವರು ಪ್ರತಿಪಾದಿಸಿದರು.

ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ನಾಡಿನಲ್ಲಿ ಕೊಡಗು ಜಿಲ್ಲೆ ತನ್ನದೇ ಆದ ವೈಶಿಷ್ಯತೆ ಹೊಂದಿದೆ. ಕೊಡಗು ಜಿಲ್ಲೆಯಲ್ಲಿ ಕೊಡವ ಮತ್ತು ಅರೆಭಾಷೆ, ಸೇರಿದಂತೆ ಹಲವು ಸಣ್ಣ ಭಾಷಿಕರು ಇರುವುದು ಒಂದು ರೀತಿ ವೈಶಿಷ್ಟ್ಯವೇ ಸರಿ. ಅರೆಭಾಷಿಗ ಜನಾಂಗದಲ್ಲಿರುವ ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರಗಳು ಉಳಿಯಬೇಕು” ಎಂದರು.









ಶಿಕ್ಷಣ ತಜ್ಞರು ಮತ್ತು ಚಿಂತಕರಾದ ಪ್ರೊ.ಕೆ.ಇ.ರಾಧಾಕೃಷ್ಣ ಅವರು ಮಾತನಾಡಿ ನನ್ನ ಮನೆಯ ಭಾಷೆ ತುಳು ಆಗಿದ್ದು, ಕಲಿತದ್ದು ಅರೆಭಾಷೆಯಾಗಿದೆ. ಉಪ ಭಾಷೆ ಹಾಗೂ ಉಪ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದರಲ್ಲದೆ ಅಮರ ಸುಳ್ಯದ ಕುರಿತು ಸ್ಮಾರಕ ನಿರ್ಮಾಣವಾಗಬೇಕು ಎಂದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ,
ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ,
ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ,
ಅಲ್ಟ್ರಾ ಬಯೋಕೆಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ತೇನನ ರಾಜೇಶ್ ಶುಭಹಾರೈಸಿದರು.
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಮಾತನಾಡಿ ಅಕಾಡೆಮಿ ಅಧ್ಯಕ್ಷನಾದ ನಂತರ ಮೊದಲ ಸಭೆಯಲ್ಲಿ 12 ಸಂಶೋಧನಾ ಹೊತ್ತಿಗೆ ತರಲು ನಿರ್ಧರಿಸಲಾಯಿತು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 8 ಸಂಶೋಧನಾ ಪ್ರಬಂಧಗಳು, 8 ಅರೆಭಾಷೆ ಕೃತಿಗಳನ್ನು ಲೋಕಾರ್ಪಣೆ ಮಾಡಿರುವುದು ವಿಶೇಷವಾಗಿದೆ. ಹಾಗೆಯೇ ಅರೆಭಾಷೆ ಕೃತಿಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗಿದೆ. ಹಾಗೆಯೇ ಅರೆಭಾಷೆ ಮಾತನಾಡುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇತರ ಫಲಾನುಭವಿಗಳಿಗೆ ಸಾಂಸ್ಕೃತಿಕ ಮತ್ತು ವಾದ್ಯ ಪರಿಕರಗಳನ್ನು ವಿತರಿಸಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.
2022 ನೇ ಗೌರವ ಪ್ರಶಸ್ತಿ ಪಡೆದ ಡಾ.ಕಾವೇರಿಮನೆ ಬೋಜಪ್ಪ (ಸಂಶೋಧನೆ ಮತ್ತು ಅರೆಭಾಷೆ ಸಾಹಿತ್ಯ ಕ್ಷೇತ್ರ), ಡಾ.ಕೆ.ವಿ.ಚಿದಾನಂದ (ಶಿಕ್ಷಣ ಮತ್ತು ವೈದ್ಯಕೀಯ ಸೇವೆಗೆ), ತುಂತಜೆ ವೆಂಕಟೇಶ್ (ಗಣೇಶ್)(ಅರೆಭಾಷೆ ಮತ್ತು ಸಂಸ್ಕೃತಿ ಸೇವೆ) ಇವರನ್ನು ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು.
2023ನೇ ಗೌರವ ಪ್ರಶಸ್ತಿ ಪಡೆದ ಕುಯಿಂತೋಡು ದಾಮೋದರ(ಅರೆಭಾಷೆ ಸಾಹಿತ್ಯ ಮತ್ತು ಶೈಕ್ಷಣಿಕ ಸೇವೆ), ಎ.ಕೆ.ಹಿಮಕರ(ಅರೆಭಾಷೆ ಅಧ್ಯಯನ ಮತ್ತು ಸಂಶೋಧನೆ) ಮತ್ತು ಕೂಡಕಂಡಿ ಕಾವೇರಮ್ಮ ಸೋಮಣ್ಣ(ಅರೆಭಾಷೆ ಸಾಧಕಿ ಮತ್ತು ಕಲಾ ಪೋಷಕರು) ಇವರನ್ನು ಆತ್ಮೀಯವಾಗಿ ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು.
ಸಂಶೋಧನಾ ಪ್ರಬಂಧ ಮತ್ತು ಕೃತಿಗಳ ಪರಿಚಯವನ್ನು ಚಂದ್ರಾವತಿ ಬಡ್ಡಡ್ಕ ನಿರ್ವಹಿಸಿದರು. ಗೌರವ ಪ್ರಶಸ್ತಿ ಪುರಸ್ಕೃತರು ಪರಿಚಯವನ್ನು ಅಕಾಡೆಮಿ ಸದಸ್ಯರಾದ ಲತಾ ಪ್ರಸಾದ್ ಕುದ್ಪಾಜೆ, ಡಾ.ಎನ್.ಎ.ಜ್ಞಾನೇಶ್, ಮೋಹನ ಪೊನ್ನಚನ, ತೇಜಕುಮಾರ್ ಕುಡೆಕಲ್ಲು, ಲೋಕೇಶ್ ಊರುಬೈಲು, ಸಂದೀಪ್ ಪುಳಕಂಡ ನಿರ್ವಹಿಸಿದರು.
ವಾದ್ಯ ಪರಿಕರಗಳ ವಿತರಣೆ ಪಟ್ಟಿಯನ್ನು ಅಕಾಡೆಮಿ ಸದಸ್ಯರಾದ ಗೋಪಾಲ್ ಪೆರಾಜೆ ನಿರ್ವಹಿಸಿದರು. ಅಕಾಡೆಮಿ ಸದಸ್ಯರಾದ ಸೂದನ ಈರಪ್ಪ, ವಿನೋದ್ ಮೂಡಗದ್ದೆ, ಪಿ.ಎಸ್.ಕಾರ್ಯಪ್ಪ, ಕುದುಪಜೆ ಕೆ.ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ಇತರರು ಇದ್ದರು.
ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಪೆರಾಲು ಸ್ವಾಗತಿಸಿದರು. ಆರತಿ ಪುರುಷೋತ್ತಮ ಪ್ರಾರ್ಥಿಸಿದರು. ಬೇಬಿ ವಿದ್ಯಾ ಹಾಗೂ ಕೆ.ಟಿ.ವಿಶ್ವನಾಥ ಕಾರ್ಯಕ್ರಮ ನಿರೂಪಿಸಿದರು. ರಿಜಿಸ್ಟ್ರಾರ್ ಚಿನ್ನಸ್ವಾಮಿ ವಂದಿಸಿದರು.
ಸುಳ್ಯದ ಆರತಿ ಪುರುಷೋತ್ತಮ ಮತ್ತು ಬಳಗದವರಿಂದ ಅರೆಭಾಷೆ ಹಾಡುಗಳ ರಸಮಂಜರಿ ಕಾರ್ಯಕ್ರಮ ನಡೆಯಿತು.










