ಸುಳ್ಯ ಕೆ.ಎಸ್.ಆರ್.ಟಿ.ಸಿ.ಗೆ 70 ಮಂದಿ ಡ್ರೈವರ್ -ಕಂಡಕ್ಟರ್ ನೇಮಕ

0

ಕೊಡಿಯಾಲಬೈಲು-ದುಗಲಡ್ಕ ಬಸ್ ಸಂಚಾರ ಶೀಘ್ರ ಆರಂಭ

ಸುಳ್ಯ‌ ಕೆ.ಎಸ್.ಆರ್.ಟಿ.ಸಿ. ಡಿಪೋ ಗೆ ಡೈವರ್ ಕಂ ಕಂಡಕ್ಟರ್ ಒಟ್ಟು 70 ಮಂದಿ ನೇಮಕಗೊಂಡಿದ್ದಾರೆ ಎಂದು ಸುಳ್ಯ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಮಾಹಿತಿ‌ ನೀಡಿದ್ದಾರೆ.

ಸುಳ್ಯ ತಾಲೂಕು ಪಂಚಾಯತ್ ನಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಮಾಸಿಕ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ‌ ನೀಡಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.‌ಸದಸ್ಯ ಕಾರ್ಯದರ್ಶಿ ಇ.ಒ. ರಾಜಣ್ಣ ಕಲಾಪ ನಡೆಸಿದರು.

ಸಮಿತಿ ಸದಸ್ಯರುಗಳಾದ ಭವಾನಿಶಂಕರ್ ಕಲ್ಮಡ್ಕ, ರಾಜು ನೆಲ್ಲಿಕುಮೇರಿ, ಧನುಷ್‌ಕುಕ್ಕೆಟ್ಟಿ, ಈಶ್ವರ ಆಳ್ವ ಬೆಳ್ಳಾರೆ, ವಿಜೇಶ್ ಹಿರಿಯಡ್ಕ, ಮಣಿಕಂಠ ಕೊಳಗೆ, ರವಿ ಗುಂಡಡ್ಕ, ಭವಾನಿ ಬೊಮ್ಮೆಟ್ಟಿ,, ಶೇಖರ ಕಣೆಮರಡ್ಕ, ಸೋಮಶೇಖರ್ ಕೇವಳ, ಅಬ್ಬಾಸ್ ಅಡ್ಕ, ಶಿಲ್ಪಾ ಇಬ್ರಾಹಿಂ, ಕಾಂತಿ ಬಿ.ಎಸ್. ಹಾಗೂ‌ ಇಲಾಖಾ ಅಧಿಕಾರಿಗಳು ಇದ್ದರು.

ಕಂದ್ರಪ್ಪಾಡಿ ರೂಟ್ ಗೆ ನಮ್ಮ ಬೇಡಿಕೆಯಂತೆ ಬಸ್ ಬಂದಿದೆ ಎಂದು ಸದಸ್ಯ ವಿಜೇಶ್ ಹಿರಿಯಡ್ಕ ಹೇಳಿದರೆ, ಮಡಪ್ಪಾಡಿ ನಮ್ಮ ಬೇಡಿಕೆ ಈಡೇರಬೇಕು ಎಂದು ಸದಸ್ಯ ಎಂದು ಸೋಮಶೇಖರ ಕೇವಳ‌ ಹೇಳಿದಾಗ, ಸದ್ಯದಲ್ಲೇ ಆ ಬೇಡಿಕೆ ಆಗುತ್ತದೆ. ಈಗ ನಮ್ಮಲ್ಲಿ 70 ಮಂದಿ ಕಂಡಕ್ಟರ್ ಕಂ ಡ್ರೈವರ್ ಗಳ‌ ನೇಮಕ ಆಗಿದ್ದು ಅವರಲ್ಲಿ 19 ಮಂದಿ ಬಂದು ವರದಿ‌ ಮಾಡಿಕೊಂಡಿದ್ದಾರೆ. ಈಗ ಅವರು ತರಬೇತಿಗೆ ಹಾಸನಕ್ಕೆ ಹೋಗಿದ್ದು ಅವರು‌ ಬಂದ‌ ಬಳಿಕ ಬೇಡಿಕೆಯ ಎಲ್ಲ ರೂಟ್ ಗಳ‌ ಸಮಸ್ಯೆ ಇತ್ಯರ್ಥ ಆಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಸುಳ್ಯ ಕೊಡಿಯಾಲಬೈಲು – ದುಗಲಡ್ಕ ಬಸ್ ಆರಂಭಕ್ಕೆ ನಾವು ಪ್ರಸ್ತಾಪ ‌ಮಾಡಿದ್ದೆವು ಎಂದು ಅಧ್ಯಕ್ಷ ಶಾಹುಲ್ ಹಮೀದ್ ಹೇಳಿದಾಗ, ಅದು ಕೂಡಾ ಗಮನದಲ್ಲಿದೆ. ಶೀಘ್ರವೇ ಆರಂಭ ಆಗುತ್ತದೆ ಎಂದು ಅಧಿಕಾರಿ ಉತ್ತರಿಸಿದರು.

ಪುತ್ತೂರು – ಸವಣೂರು – ಬೆಳ್ಳಾರೆ – ಪೈಲಾರು‌ ಬಸ್ ಆರಂಭಿಸುವಂತೆ‌ ಸದಸ್ಯ ಭವಾನಿಶಂಕರ್ ಕಲ್ಮಡ್ಕ ‌ಹೇಳಿದರು.