ಕುಕ್ಕೆ ಸುಬ್ರಹ್ಮಣ್ಯ : ಶ್ರೀಕೃಷ್ಣಾಷ್ಟಮಿ ಮತ್ತು ಮೊಸರು ಕುಡಿಕೆ

0


ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಶ್ರೀಕೃಷ್ಣಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವವನ್ನು ಪೂರ್ವ ಶಿಷ್ಟ ಸಂಪ್ರದಾಯದಂತೆ ಅಷ್ಟಮಿಯ ಮಾರನೇಯ ನಿನ್ನೆ ಸಂಜೆ ಆಚರಿಸಲಾಯಿತು.ಕಾಶಿಕಟ್ಟೆಯಲ್ಲಿ ಅಷ್ಟಮಿಯಂದು ಪೂಜಿತವಾದ ಕೃಷ್ಣನ ವಿಗ್ರಹವನ್ನು ಸ್ಥಳೀಯ ಮೂಲನಿವಾಸಿಗಳಾದ ಮಲೆಕುಡಿಯ ಜನಾಂಗದವರು ಪಾಲಕಿಯಲ್ಲಿ ಆನೆ, ಬಿರುದಾವಳಿ,ಮಂಗಳವಾದ್ಯದ ಮೂಲಕ ಮೆರವಣಿಗೆಯಲ್ಲಿ ಶ್ರೀ ದೇವಳಕ್ಕೆ ತಂದರು. ಬಳಿಕ ಶ್ರೀದೇವಳಕ್ಕೆ ಪ್ರದಕ್ಷಿಣೆ ಬಂದು ದೇವಳದಿಂದ ಕಾಶಿಕಟ್ಟೆಗೆ ಉತ್ಸವವು ತೆರಳಿತು.ಥಬೀದಿಯಿಂದ ಕಾಶಿಕಟ್ಟೆ ತನಕ ಅಲ್ಲಲ್ಲಿ ಕಂಬದಲ್ಲಿ ಕಟ್ಟಿದ್ದ ಮೊಸರು ತುಂಬಿದ ಕುಡಿಕೆಗಳನ್ನು ಮಹಿಳೆಯರು ಒಡೆದು ಜನ್ಮಾಷ್ಠಮಿಯನ್ನು ಆಚರಿಸಿದರು.ಅಂತಿಮವಾಗಿ ಕಾಶಿಕಟ್ಟೆಯಲ್ಲಿ ಇರಿಸಿದ್ದ ಮೊಸರಿನ ಗಡಿಗೆಗಳನ್ನು ಒಡೆಯಲಾಯಿತು. ತದನಂತರ ಕಾಶಿಕಟ್ಟೆಯಲ್ಲಿ ಭಗವಾನ್ ಶ್ರೀಕೃಷ್ಣನಿಗೆ ಮಹಾಪೂಜೆ ನೆರವೇರಿತು.



ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ಸಂಪ್ರದಾಯ ಬದ್ದವಾಗಿ ಪೇಟ್ಲೆ ಬೆಡಿ ಒಡೆಯುವ ಕಾರ್ಯ ನಡೆಯಿತು. ಉತ್ಸವದಲ್ಲಿ ಹಿರಿಯರು ಕಿರಿಯರೆನ್ನದೆ ಪೇಟ್ಲೆ ಬೆಡಿಯ ಆಟವಾಡಿ ರಂಜಿಸಿದರು. ಮಕ್ಕಳು ಮತ್ತು ಹಿರಿಯರು ಪೇಟ್ಲೆ ಬೆಡಿಯನ್ನು ಬಿಟ್ಟು ಸಂಭ್ರಮಿಸಿದರು. ಕಾವಟೆಮರದ ಗೆಲ್ಲುಗಳಿಂದ ತಯಾರಿಸಿದ ಈ ಪೇಟ್ಲೆ ಬೆಡಿಗೆ ಕಾವಟೆ ಕಾಯಿಯನ್ನು ಪೋಣಿಸಿ ಒಡೆಯುವ ಮೂಲಕ ಸಂಪ್ರದಾಯವನ್ನು ಯುವಕರು ಮೆರೆದರು. ಹಿಂದಿನಿಂದಲೂ ಹಿರಿಯರು ಕಿರಿಯರಿಗೆ ಇದನ್ನು ರಚಿಸಿ ಕೊಡುತ್ತಿದ್ದು, ಆಧುನಿಕ ಕಾಲದಲ್ಲಿಯೂ ಪ್ರಾಚೀನ ಸಂಸ್ಕೃತಿ ತದೇಕಪ್ರಕಾರವಾಗಿ ಆಚರಿಸಿದರು. ಎಶ್ರೀ ದೇವಳದಿಂದ ಕಾಶಿಕಟ್ಟೆಯ ತನಕ ಮಕ್ಕಳು, ಯುವಕರು ಮತ್ತು ಹಿರಿಯರು ಪೇಟ್ಲೆಬೆಡಿಯನ್ನು ಒಡೆದು ಸಂಭ್ರಮಿಸಿದರು.