ಅಡ್ಕಾರು ಅಂಬಾಡಿಮೂಲೆಯಲ್ಲಿ ಶ್ರೀ ವಿಷ್ಣುಮೂರ್ತಿ ಹಾಗೂ ಗುಳಿಗ ದೈವದ ಪುನರ್ ಪ್ರತಿಷ್ಠಾ ಮಹೋತ್ಸವ

0

ಶ್ರೀ ವಿಷ್ಣುಮೂರ್ತಿ ದೈವ ಹಾಗೂ ಮುಳ್ಳುಗುಳಿಗ ದೈವದ ಕೋಲ

ಜಾಲ್ಸೂರು ಗ್ರಾಮದ ಅಡ್ಕಾರಿನ ಅಂಬಾಡಿಮೂಲೆಯಲ್ಲಿ ನವೀಕರಣಗೊಂಡ ದೈವಸ್ಥಾನದಲ್ಲಿ ನಾರಾಯಣ ಬೆಳ್ಚಪ್ಪಾಡ ನಾರಂಪಾಡಿ ಅವರ ನೇತೃತ್ವದಲ್ಲಿ ಶ್ರೀ ವಿಷ್ಣುಮೂರ್ತಿ ಹಾಗೂ ಗುಳಿಗ ದೈವದ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ಶ್ರೀ ವಿಷ್ಣುಮೂರ್ತಿ ದೈವ ಹಾಗೂ ಮುಳ್ಳು ಗುಳಿಗ ದೈವದ ಕೋಲವು ಮಾ.21ರಿಂದ 23ರವರೆಗೆ ಜರುಗಿತು.

ಮಾ.21ರಂದು ಬೆಳಿಗ್ಗೆ ಅಡ್ಕಾರಿನ ಶ್ರೀ ವಯನಾಟ್ ಕುಲವನ್ ವಿಷ್ಣುಮೂರ್ತಿ ದೈವಸ್ಥಾನ ಹಾಗೂ ಅಂಜನಾದ್ರಿ ಬಳಿಯಿಂದ ಹಸಿರುವಾಣಿ ಮೆರವಣಿಗೆಯು ಸಾಗಿ ಬಂದು ಸಮರ್ಪಣೆಗೊಂಡಿತು.

ಸಂಜೆ ನವೀಕರಣಗೊಂಡ ದೈವಸ್ಥಾನದಲ್ಲಿ ಕುತ್ತಿಪೂಜೆ, ಪ್ರಸಾದ ವಿತರಣೆ, ರಾತ್ರಿ ಅನ್ನಸಂತರ್ಪಣೆ ಜರುಗಿತು.

ಮಾ.22ರಂದು ಬೆಳಿಗ್ಗೆ ಸ್ಥಳಶುದ್ಧಿ, ಗಣಪತಿ ಹೋಮ, ಪೂರ್ವಾಹ್ನ ಶ್ರೀ ವಿಷ್ಣುಮೂರ್ತಿ ಹಾಗೂ ಗುಳಿಗ ದೈವದ ಪುನರ್ ಪ್ರತಿಷ್ಠೆ , ಪ್ರಸಾದ ವಿತರಣೆ , ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು.

ಸಂಜೆ ಅಂಜನಾದ್ರಿ ಶ್ರೀ ಪ್ರಸನ್ನಾಂಜನೇಯ ಭಜನಾ ಮಂಡಳಿ ಹಾಗೂ ಕಲಾಕೇಸರಿ ಭಜನಾ ತಂಡದಿಂದ ಭಜನಾ ಸೇವೆ ಜರುಗಿತು.
ಬಳಿಕ ದೀಪಾರಾಧನೆ, ಶ್ರೀ ವಿಷ್ಣುಮೂರ್ತಿ ದೈವದ ಹೊಸ್ತು ಸೇವೆ ನಡೆದು ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ತೆಗೆದು, ದೈವದ ತೊಡಂಙಲ್ ನಡೆಯಿತು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಜಾಲ್ಸೂರಿನವರಾಗಿದ್ದು, ಗುಜರಾತಿನಲ್ಲಿ ಉದ್ಯಮಿಯಾಗಿರುವ ಗ್ರೀನ್ ಹೀರೋ ಆಫ್ ಇಂಡಿಯಾದ ಆರ್.ಕೆ. ನಾಯರ್ ಎರ್ಮೆಕ್ಕಾರು ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ಶ್ರೀ ವಿಷ್ಣುಮೂರ್ತಿ -ಗುಳಿಗ ದೈವಸ್ಥಾನದ ಅಧ್ಯಕ್ಷ ಅಶೋಕ ಅಡ್ಕಾರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರೀನ್ ಹೀರೋ ಆಫ್ ಇಂಡಿಯಾದ ಡಾ. ಆರ್.ಕೆ. ನಾಯರ್ ಅವರನ್ನು ಸಮಿತಿಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ರಾತ್ರಿ ಅನ್ನಸಂತರ್ಪಣೆ ಬಳಿಕ ಶ್ರೀ ವಿಷ್ಣುಮೂರ್ತಿ ದೈವದ ಕುಳ್ಚಾಟ ನಡೆಯಿತು.

ಮಾ.23ರಂದು ಬೆಳಿಗ್ಗೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು.
ಅಪರಾಹ್ನ ಮುಳ್ಳು ಗುಳಿಗ ದೈವದ ಕೋಲ, ಪ್ರಸಾದ ವಿತರಣೆ ಜರುಗಿತು.

ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರುಗಳಾದ ಜಗನ್ನಾಥ ಬೇರ್ಪಡ್ಕ, ವೈದಿಕ ಸಮಿತಿಯ ಮುಖ್ಯಸ್ಥ ಗಣೇಶ ಅಂಬಾಡಿಮೂಲೆ, ಸಂಯೋಜಕ ‌ನಿವೃತ್ತ ಎ.ಎಸ್.ಐ. ಭಾಸ್ಕರ ಅಡ್ಕಾರು, ಅಧ್ಯಕ್ಷ ಅಶೋಕ ಅಡ್ಕಾರು, ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಅಂಬಾಡಿಮೂಲೆ, ಕೋಶಾಧಿಕಾರಿ ಎ. ಗಂಗಾಧರ ವಿನೋಬನಗರ, ಎ.ಆರ್. ಬಾಬು ಅಡ್ಕಾರು ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.