ಮಾಧ್ಯಮ ವರದಿ ಫಲಶ್ರುತಿ

0

ಸುಳ್ಯದ ಕುರುಂಜಿಗುಡ್ಡೆ ಪಾರ್ಕ್ ಗೆ ಸಹಾಯಕ ಕಮಿಷನರ್ ಭೇಟಿ

ಪಾರ್ಕ್ ಸಮರ್ಪಕ ನಿರ್ವಹಣೆಗೆ ವಾರದೊಳಗೆ ಎಸ್ಟಿಮೇಟ್ ಮಾಡಿ : ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ ಎ.ಸಿ.

ಸುಳ್ಯದ ಕುರುಂಜಿಗುಡ್ಡೆ ಪಾರ್ಕ್ ನಿರ್ವಹಣೆಯಿಲ್ಲದೆ ಸೊರಗಿರುವ ಕುರಿತು ಸುದ್ದಿ ಬಿಡುಗಡೆ ಸೇರಿದಂತೆ ಮಾಧ್ಯಮಗಳು ನಿರಂತರ ವರದಿ ಭಿತ್ತರಿಸುತ್ತಿರುವ ಬೆನ್ನಲ್ಲೇ ಜು.25ರಂದು ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮಹಾಪಾತ್ರ ಭೇಟಿ ನೀಡಿ ಪರಿಶೀಲನೆ ‌ನಡೆಸಿ, ಪಾರ್ಕ್ ಸಮರ್ಪಕ ನಿರ್ವಹಣೆಗೆ ವಾರದೊಳಗೆ ಎಸ್ಟಿಮೇಟ್ ಮಾಡುವಂತೆ ಆದೇಶ ನೀಡಿದರು.

ಕುರುಂಜಿಗುಡ್ಡೆ ಪಾರ್ಕ್ ನಿರ್ವಹಣೆ ಇಲ್ಲದೆ ಸೊರಗಿದೆ. ಕಾಡುಗಳು ತುಂಬಿದೆ. ಪಾರ್ಟಿ, ಮೋಜುಗಳು‌ ನಡೆಯುತ್ತಿವೆ. ರಾತ್ರಿಯಲ್ಲಿಯೂ ಜನರು ಬಂದು ಕಾಲ ಕಳೆಯುತ್ತಿರುವ ಕುರಿತು ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನು ಗಮನಿಸಿದ ಎ.ಸಿ. ಯವರು ಕುರುಂಜಿಗುಡ್ಡೆ ಪಾರ್ಕ್ ಗೆ ಭೇಟಿ ನೀಡಿದರು.

ಪಾರ್ಕ್ ನ್ನು ಪರಿಶೀಲಿಸಿದ ಸಹಾಯಕ ಕಮಿಷನರ್ ರವರು ನ.ಪಂ. ಮುಖ್ಯಾಧಿಕಾರಿ ಸುಧಾಕರ್ ರನ್ನು ಪ್ರಶ್ನಿಸಿದಾಗ, ನಿರ್ವಹಣೆಗೆ ಅನುದಾನ ಇಲ್ಲದಿರುವ ಕುರಿತು ಅವರು ಎ.ಸಿ. ಯವರ ಗಮನಕ್ಕೆ ತಂದರು. ಹಾಗಂದ ಮಾತ್ರಕ್ಕೆ ಇದನ್ನು ಹಾಗೇ ಬಿಡುವುದು ಸರಿಯಲ್ಲ. ನಾವು ಹಣ ಹಾಕಿ ಪಾರ್ಕ್‌ ಮಾಡಿದ್ದೇವಲ್ಲ ಇದನ್ನು ನೋಡಿಕೊಳ್ಳಬೇಕು. ಆದ್ದರಿಂದ ಮೊದಲು ಇದನ್ನು ಸ್ವಚ್ಚತೆ ಮಾಡಿಸಿ. ಜತೆಗೆ ನಿರ್ವಹಣೆಗೆ ಬೇಕಾದ ಎಸ್ಟಿಮೇಟ್ ವಾರದೊಳಗೆ ಮಾಡಿ ವರದಿ ನೀಡಬೇಕು ಎಂದು ಸೂಚನೆ ನೀಡಿದರು.

ಸಿ.ಸಿ. ಕ್ಯಾಮರಾ ಅಳವಡಿಸೋಣ. ಒಬ್ಬ ಪೌರ ಕಾರ್ಮಿಕರಿಗೆ ಇಲ್ಲಿಯೇ ಇರುವಂತೆ ಮಾಡಬೇಕು ಎಂದು ಸೂಚನೆ ನೀಡಿದರು.

ಅಲ್ಲಿಂದ ಇನ್ ಡೋರ್ ಸ್ಟೇಡಿಯಂ ವೀಕ್ಷಿಸಿದ ಎ.ಸಿ. ಯವರು, ಅಲ್ಲಿದ್ಸ ಬ್ಯಾಡ್ಮಿಂಟನ್ ಅಸೋಸಿಯೇಷನ್ ಪದಾಧಿಕಾರಿಗಳ ಜತೆಯೂ ಮಾತನಾಡಿದರು. ಪಾರ್ಕ್ ನಿರ್ವಹಣೆಗೆ ಸಹಕಾರ ನೀಡುವಂತೆ ಅವರಲ್ಲಿ ಕೇಳಿಕೊಂಡರು.

ನಗರ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಂ.ವೆಂಕಪ್ಪ ಗೌಡರು ಕೂಡಾ ಈ ಸಂದರ್ಭದಲ್ಲಿ ಇದ್ದರು. ಪಾರ್ಕ್ ಅವ್ಯವಸ್ಥೆ ಕುರಿತು ಅವರು ಕೂಡಾ ಎ.ಸಿ. ಯವರಿಗೆ ಮಾಹಿತಿ ನೀಡಿದರು.

ನ.ಪಂ. ನಿಂದ ಸ್ವಚ್ಚತೆ : ಎ.ಸಿ. ಯವರು‌ಜು.25ರಂದು ಸುಳ್ಯಕ್ಕೆ ಬಂದಿದ್ದರು. ಅವರನ್ನು ಭೇಟಿಯಾದ ಎಂ.ವೆಂಕಪ್ಪ ಗೌಡರು ಕುರುಂಜಿಗುಡ್ಡೆ ಪಾರ್ಕ್ ನ ಕುರಿತು ಮಾಹಿತಿ ನೀಡಿದ್ದರು. ಎ.ಸಿ. ಯವರು ಪಾರ್ಕ್ ಗೆ ಬರುತ್ತಾರೆಂಬ ಮಾಹಿತಿ ನಗರ ಪಂಚಾಯತ್ ಗೆ ತಿಳಿದು ಸ್ವಚ್ಚತಾ ಸಿಬ್ಬಂದಿಗಳ ಪಾರ್ಕ್ ಗೆ ಕಳುಹಿಸಿ ಪಾರ್ಕ್ ನ ಮೆಟ್ಟಿಲನ್ನು ಸ್ವಚ್ಚಗೊಳಿಸಲಾಯಿತು. ಹಾಗೂ ಕಸ ಹೆಕ್ಕಿಸಲಾಯಿತು.