ನಾಗಪಟ್ಟಣ ಬಳಿ ಬೈಕಿಗೆ ಡಿಕ್ಕಿ ಹೊಡೆದು ಪರಾರಿಯಾದ ಕಾರು-ಸವಾರರಿಬ್ಬರು ಜಖಂ

0

ಆಲೆಟ್ಟಿ ರಸ್ತೆಯ ‌ನಾಗಪಟ್ಟಣ ಬಳಿ ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಕಾರೊಂದು ಪರಾರಿಯಾಗಿರುವ ಘಟನೆ ಸೆ.22 ರಂದು ಸಂಜೆ ವರದಿಯಾಗಿದೆ.

ಆಲೆಟ್ಟಿ ಗಡಿಪಣೆ ನಿವಾಸಿ ರಮೇಶ್ ನಾಯ್ಕ್ ಎಂಬವರು ತನ್ನ ಬೈಕಿನಲ್ಲಿ‌ ಕೆಲಸ ಮುಗಿಸಿ ಮನೆಗೆ ಹೋಗುತ್ತಿರುವ ವೇಳೆಯಲ್ಲಿ ನಾಗಪಟ್ಟಣ ಸದಾಶಿವ ದೇವಸ್ಥಾನದ ಬಳಿ ತಲುಪುತ್ತಿದ್ದಂತೆ ಹಿಂಬದಿಯಿಂದ ಅತೀ ವೇಗವಾಗಿ ಬಂದ ಕಾರೊಂದು ಬೈಕಿನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬೈಕ್ ಚಾಲಾಯಿಸುತ್ತಿದ್ದ ರಮೇಶ್ ಮತ್ತು ಹಿಂಬದಿ‌ ಸವಾರ ಧನುಷ್ ಎಂಬ ಯುವಕರು ರಸ್ತೆಗೆ ಬಿದ್ದು ಗಾಯಗೊಂಡರು. ಕೆ.ಎಲ್.ನಂಬರನ್ನು ಹೊಂದಿರುವ ಕಾರು ಆಗಿದ್ದು ಚಾಲಕ ಕಾರನ್ನು ನಿಲ್ಲಿಸದೆ ನಾರ್ಕೋಡು ಮೂಲಕ ಕೋಲ್ಚಾರು ಮಾರ್ಗವಾಗಿ ಕೇರಳದ ಬಂದಡ್ಕದ ಕಡೆಗೆ ಪರಾರಿಯಾಗಿರುವುದಾಗಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ತಕ್ಷಣ ಗಾಯಗೊಂಡ ಸವಾರರಿಬ್ಬರನ್ನು ಸ್ಥಳೀಯರು ಸೇರಿ ಅಟೋ ರಿಕ್ಷಾದಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆ ತಂದು ದಾಖಲಿಸಿ ಚಿಕಿತ್ಸೆ ಕೊಡಿಸಿದರು.
ಪ್ರಕರಣದ ಬಗ್ಗೆ ಸುಳ್ಯ ಪೋಲಿಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು ಪೋಲೀಸರು ಸಿ.ಸಿ.ಟಿವಿ ಫೂಟೇಜ್ ಸಂಗ್ರಹಿಸಿ ಪರಾರಿಯಾದ ಕಾರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.